ಚೆನ್ನೈ: ಕಾಂಗ್ರೆಸ್ ಪಕ್ಷ ವಿದ್ಯುನ್ಮಾನ ಮತಯಂತ್ರಗಳನ್ನು ತಿರಸ್ಕರಿಸಿಲ್ಲ. ಪಕ್ಷ ವಿವಿಪ್ಯಾಟ್ ಸುಧಾರಣೆ ಪರವಾಗಿದ್ದು, ಎಂದಿಗೂ ಇವಿಎಂ ದೂಷಿಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಶುಕ್ರವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇವಿಎಂ ಕುರಿತು ಇಂಡಿಯಾ ಬಣದ ಮೌನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶ್ನೆ ಕುರಿತು ಪತ್ರಕರ್ತರಿಗೆ ಉತ್ತರಿಸಿದ ಚಿದಂಬರಂ, 2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇವಿಎಂನ್ನು ತಿರಸ್ಕರಿಸಿರಲಿಲ್ಲ ಎಂದರು.
''ದಯವಿಟ್ಟು ಪಕ್ಷದ ಪ್ರಣಾಳಿಕೆ ಓದಿ, ನಾವು ಹೇಳುವುದೇನೆಂದರೆ, ವಿವಿಪ್ಯಾಟ್ ಸ್ಲೀಪ್ 4-5 ಸೆಕೆಂಡ್ ಗಳ ಕಾಲ ಪ್ರದರ್ಶನವಾಗುತ್ತದೆ. ನಂತರ ಬಾಕ್ಸ್ ಒಳಗಡೆ ಬೀಳುತ್ತದೆ. ಇದರಲ್ಲಿ ಸುಧಾರಣೆ ಆಗಬೇಕು ಎಂದು ಪಕ್ಷದ ಪ್ರಣಾಳಿಕೆಯಲ್ಲಿಯೇ ಹೇಳಿರುವುದಾಗಿ ಅವರು ತಿಳಿಸಿದರು.
ಸ್ಲಿಪ್ ಸ್ವಯಂಚಾಲಿತವಾಗಿ ವಿವಿಪ್ಯಾಟ್ ಬಾಕ್ಸ್ನೊಳಗೆ ಬೀಳುವ ಬದಲು, ಮತದಾರರು ಅದನ್ನು ಸ್ವೀಕರಿಸಲು ಸಾಧ್ಯವಾಗಬೇಕು. ಅದನ್ನು ನೋಡಿ ನಂತರ ಅದನ್ನು ಪೆಟ್ಟಿಗೆಯೊಳಗೆ ಹಾಕಬೇಕು. ಈ ಸುಧಾರಣೆಯೊಂದಿಗೆ, ಇವಿಎಂ-ವಿವಿಪಿಎಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾರಿಗೂ ಯಾವುದೇ ಸಂದೇಹವಿಲ್ಲ ಎಂದರು.
ಈಗಲೂ ಇವಿಎಂಗಳ ಬಗ್ಗೆ ಅಭಿಪ್ರಾಯ ಕೇಳಿದರೆ, “ಹತ್ತರಲ್ಲಿ ನಾಲ್ವರು ಅಥವಾ ಹತ್ತರಲ್ಲಿ ಮೂವರು ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಅನುಮಾನ ನ್ಯಾಯೋಚಿತವೋ ಅಲ್ಲವೋ ಎಂದು ಹೇಳುತ್ತಿಲ್ಲ; ನನ್ನ ಮಟ್ಟಿಗೆ, ನಾನು ಎಂದಿಗೂ ಇವಿಎಂಗಳನ್ನು ದೂಷಿಸಿಲ್ಲ. ಇವಿಎಂ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವುದು ಕಾಂಗ್ರೆಸ್ ಪಕ್ಷದ ನಿಲುವು. "ಒಬ್ಬ ಅಥವಾ ಇಬ್ಬರು ಪಕ್ಷದ ನಾಯಕರು ಇವಿಎಂ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವುದಿಲ್ಲ, ಆದರೆ ಅದು ಪಕ್ಷದ ನಿಲುವಲ್ಲ ಎಂದರು.
ದೆಹಲಿಯಲ್ಲಿ ಹೊಸದಾಗಿ ಚುನಾಯಿತ ಸಂಸದರು ಮತ್ತು ಎನ್ ಡಿಎ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಇವಿಎಂಗಳು ಮತ್ತು ಚುನಾವಣಾ ಆಯೋಗದ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಪ್ರತಿಪಕ್ಷ ಇಂಡಿಯಾ ಬಣ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಆದರೆ ಫಲಿತಾಂಶಗಳು ಅವರಿಗೆ ಸರಿಹೊಂದುವುದಿಲ್ಲವಾದರೆ ದೇಶಾದ್ಯಂತ ಬೊಬ್ಬೆ ಹೊಡೆಯುತ್ತಿದ್ದರು. ಜೂನ್ 4 ರ ಸಂಜೆಯೊಳಗೆ ಇವಿಎಂಗಳು ಅದನ್ನು ನಿಶ್ಯಬ್ದಗೊಳಿಸಿದವು, ಪ್ರತಿಪಕ್ಷಗಳು ನಿರೀಕ್ಷಿತ ಪ್ರದರ್ಶನಕ್ಕಿಂತ ಉತ್ತಮವಾಗಿ ಪ್ರದರ್ಶನ ನೀಡಿದವು ಎಂದು ಪ್ರಧಾನಿ ಹೇಳಿದರು.