ಬೆಂಗಳೂರು: ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಂದಿನ ತಿಂಗಳು ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು ಅದರಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮೋದಿ 3.0 ಸರ್ಕಾರದ ಮೊದಲ ಸಮಗ್ರ ಬಜೆಟ್ ಮಂಡಿಸಲಿದ್ದಾರೆ.
ಇದಕ್ಕೆ ಮುನ್ನ ನಡೆಯುವ ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಹ್ವಾನಿಸಿದ್ದಾರೆ. ಜೂ.22ರಂದು ದೆಹಲಿಯಲ್ಲಿ ನಡೆಯುವ ಪ್ರೀ ಬಜೆಟ್ ಸಭೆಯಲ್ಲಿ ರಾಜ್ಯದ ಪರ ಭಾಗವಹಿಸಲು ಸಿಎಂಗೆ ಆಹ್ವಾನ ನೀಡಲಾಗಿದ್ದು ನಿರ್ಮಲಾ ಸೀತರಾಮನ್ ಪತ್ರಕ್ಕೆ ಸಿಎಂ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಸಭೆಯಲ್ಲಿ ಭಾಗಿಯಾಗಲು ಅಹ್ವಾನಿಸಿದ್ದಕ್ಕೆ ಧನ್ಯವಾದಗಳು. ಜೂ.22ರಂದು ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿದೆ. ಹಾಗಾಗಿ ನಾನು ಮೀಟಿಂಗ್ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ನನ್ಮ ಬದಲು ನನ್ನ ಸಂಪುಟದ ಸಹೋದ್ಯೋಗಿ ಸಚಿವ ಕೃಷ್ಣ ಭೈರೇಗೌಡ ಭಾಗಿ ಆಗುತ್ತಾರೆ ಎಂದು ಉತ್ತರಿಸಿದ್ದಾರೆ.
ಮತ್ತೊಂದೆಡೆ ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಕೈಗಾರಿಕಾ ಒಕ್ಕೂಟ ಸಂಘಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸಲಿದ್ದಾರೆ. ದೆಹಲಿಯ ನಾರ್ತ್ ಬ್ಲಾಕ್ನಲ್ಲಿ ಗುರುವಾರ ಸಂಜೆ 4 ರಿಂದ 6 ರವರೆಗೆ ನಡೆಯಲಿರುವ ಸಭೆಯಲ್ಲಿ ಭಾರತೀಯ ವಾಣಿಜ್ಯ ಮತ್ತು ಉದ್ಯಮಗಳ ಒಕ್ಕೂಟ (ಎಫ್ಐಸಿಸಿಐ), ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ ಆಫ್ ಇಂಡಿಯಾ (ಅಸೋಚಾಮ್) , ಪಿಹೆಚ್ ಡಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ತಮ್ಮ ಬಜೆಟ್ ಸಲಹೆಗಳು ಮತ್ತು ಶಿಫಾರಸುಗಳನ್ನು ಪ್ರಸ್ತುತಪಡಿಸುತ್ತಿವೆ.