ನವದೆಹಲಿ: ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಜೀವನಯಾನ ಕುರಿತಾದ ಮೂರು ಪುಸ್ತಕಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಮಾಜಿ ಉಪರಾಷ್ಟ್ರಪತಿ ನಾಯ್ಡು ಅವರ 75 ನೇ ಜನ್ಮದಿನದ ಮುನ್ನಾ ದಿನದಂದು ತೆಲಂಗಾಣದ ಹೈದರಾಬಾದ್ನ ಗಚಿಬೌಲಿಯಲ್ಲಿರುವ ಅನ್ವಯ ಕನ್ವೆನ್ಷನ್ ಸೆಂಟರ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಮ್ಮ ವರ್ಚುವಲ್ ಭಾಷಣದಲ್ಲಿ ಮಾಜಿ ಉಪರಾಷ್ಟ್ರಪತಿಯನ್ನು ಶ್ಲಾಘಿಸಿದ ಮೋದಿ, "ನಾಳೆ, ಜುಲೈ 1, ವೆಂಕಯ್ಯ ನಾಯ್ಡು ಅವರ ಜನ್ಮದಿನ. ಅವರ ಜೀವನ ಪಯಣ 75 ವರ್ಷಗಳನ್ನು ಪೂರೈಸಿದೆ. ಈ 75 ವರ್ಷಗಳು ಅಸಾಮಾನ್ಯ ಸಾಧನೆಗಳಿಂದ ತುಂಬಿವೆ. ಈ 75 ವರ್ಷಗಳನ್ನು ಅದ್ಭುತ ಮೈಲಿಗಲ್ಲುಗಳ ಮೂಲಕ ಗುರುತಿಸಲಾಗಿದೆ. ನಾನು ಇಂದು ಅವರ ಜೀವನ ಚರಿತ್ರೆ, ಮತ್ತೆರಡು ಪುಸ್ತಕಗಳನ್ನು ಬಿಡುಗಡೆ ಮಾಡುವ ಅವಕಾಶ ಪಡೆದಿದ್ದೇನೆ. ಈ ಪುಸ್ತಕಗಳು ಜನರನ್ನು ಪ್ರೇರೇಪಿಸುತ್ತವೆ ಮತ್ತು ಅವರಿಗೆ ರಾಷ್ಟ್ರೀಯ ಸೇವೆಯ ಸರಿಯಾದ ದಿಕ್ಕನ್ನು ತೋರಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ವೆಂಕಯ್ಯ ನಾಯ್ಡು ಅವರ ಜತೆ ಬಹಳ ದೀರ್ಘ ಕಾಲ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ, ಸರ್ಕಾರದಲ್ಲಿ ಸಂಪುಟದ ಹಿರಿಯ ಸಹೋದ್ಯೋಗಿಯಾಗಿದ್ದಾಗ, ದೇಶದ ಉಪರಾಷ್ಟ್ರಪತಿ ಹಾಗೂ ರಾಜ್ಯ ಸಭಾಪತಿಯಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿರುವುದಾಗಿ ಮೋದಿ ತಿಳಿಸಿದ್ದಾರೆ.
ದಿ ಹಿಂದೂ, ಹೈದರಾಬಾದ್ ಆವೃತ್ತಿಯ ಮಾಜಿ ಸ್ಥಾನಿಕ ಸಂಪಾದಕ ಎಸ್ ನಾಗೇಶ್ ಕುಮಾರ್ ಬರೆದಿರುವ ವೆಂಕಯ್ಯ ನಾಯ್ಡು - ಲೈಫ್ ಇನ್ ಸರ್ವಿಸ್ (ಜೀವನ ಚರಿತ್ರೆ), ಸೆಲೆಬ್ರೇಟಿಂಗ್ ಭಾರತ್ ( ಫೋಟೋ ಕ್ರಾನಿಕಲ್) ಮತ್ತು ಸಂಜಯ್ ಕಿಶೋರ್ ಬರೆದಿರುವ ಮಹಾನೇತಾ (ಲೈಫ್ ಅಂಡ್ ಜರ್ನಿ ಆಫ್ ಎಂ ವೆಂಕಯ್ಯ ನಾಯ್ಡು ) ಮೋದಿ ಅವರು ಇಂದು ಬಿಡುಗಡೆ ಮಾಡಿದ ಕೃತಿಗಳು.