ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ದೇಶ

ಮಹಾಶಿವರಾತ್ರಿ ಉಪವಾಸದ ವೇಳೆ ವಿಷಾಹಾರ ಸೇವನೆ; ನಾಗ್ಪುರದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Ramyashree GN

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ 'ಮಹಾಶಿವರಾತ್ರಿ' ಸಂದರ್ಭದಲ್ಲಿ ಉಪವಾಸ ಆಚರಿಸುವಾಗ ತಿಂಡಿಗಳು ಮತ್ತು ಇತರ ತಿನಿಸುಗಳನ್ನು ಸೇವಿಸಿದ ನಂತರ 50 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಸಂತ್ರಸ್ತರು ಜಿಲ್ಲೆಯ ಕ್ಯಾಂಪ್ಟಿ ಮತ್ತು ನಾಗ್ಪುರ ನಗರದ ಕೆಲವು ಪ್ರದೇಶಗಳಿಗೆ ಸೇರಿದವರು. ಶುಕ್ರವಾರ ‘ಮಹಾಶಿವರಾತ್ರಿ’ ಹಬ್ಬದಂದು ಉಪವಾಸ ಆಚರಿಸಿದ್ದರು.

ಕ್ಯಾಂಪ್ಟಿಯ ಕೆಲವು ಅಂಗಡಿಗಳು ಮತ್ತು ರಸ್ತೆಬದಿಯ ಅಂಗಡಿಗಳಿಂದ ಖರೀದಿಸಿದ ಸಬ್ಬಕ್ಕಿ, ಆಲೂಗಡ್ಡೆ ಮತ್ತು ಇತರ ಪದಾರ್ಥಗಳಿಂದ ತಯಾರಿಸಿದ 'ಫರಾಲಿ' (ಉಪವಾಸದ ಸಮಯದಲ್ಲಿ ಸೇವಿಸುವ ತಿಂಡಿ) ತಿಂಡಿಗಳನ್ನು ಸೇವಿಸಿದ ನಂತರ, ಹಲವಾರು ಜನರು ಅಸ್ವಸ್ಥಗೊಂಡಿದ್ದು, ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದ ಗಣೇಶ್‌ನಗರ ಪ್ರದೇಶದಲ್ಲಿ ಶುಕ್ರವಾರ ಜಿಲೇಬಿ ಮತ್ತು ಇತರ ತಿನಿಸುಗಳನ್ನು ಸೇವಿಸಿದ ನಂತರ ಒಂದೇ ಕುಟುಂಬದ ಏಳು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಧಂತೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಟ್ವಾರಿಯ ನಂಗಾ ಪುಟ್ಲಾ ಪ್ರದೇಶದ ಬಟ್ಟೆ ವ್ಯಾಪಾರಿಯೊಬ್ಬರು ಶುಕ್ರವಾರ ಧಾರ್ಮಿಕ ಸ್ಥಳದಲ್ಲಿ ನೀಡುವ 'ಪ್ರಸಾದ' ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ ಎಂದು ಅವರು ಹೇಳಿದರು.

ನಾಗ್ಪುರದ ವರ್ಧಮಾನ್ ನಗರ ಪ್ರದೇಶದ ವ್ಯಕ್ತಿಯೊಬ್ಬರು ಶುಕ್ರವಾರ ತಡರಾತ್ರಿ ಊಟ ಸೇವಿಸಿದ ನಂತರ ಅಸ್ವಸ್ಥರಾಗಿದ್ದರು. ರಾಣಾ ಪ್ರತಾಪ್ ನಗರದ ವೃದ್ಧೆಯೊಬ್ಬರು 'ಕಡಿ' ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ವಸ್ಥರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಂತರ ಹಲವರನ್ನು ಶನಿವಾರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕ್ಯಾಂಪ್ಟಿಯ ಕೆಲವು ಅಂಗಡಿಗಳಿಂದ ಪೊಲೀಸರು ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅವುಗಳನ್ನು ವಿಶ್ಲೇಷಣೆಗಾಗಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆಗೆ ಕಳುಹಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ವಲಯ-ವಿ) ನಿಕೇತನ್ ಕದಮ್ ಹೇಳಿದ್ದಾರೆ.

SCROLL FOR NEXT