ನವದೆಹಲಿ: ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E2211ಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತನಿಖೆಗೆ ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ವಿಮಾನಯಾನ ಭದ್ರತೆ ಮತ್ತು ಬಾಂಬ್ ನಿಷ್ಕ್ರಿಯ ತಂಡವು ಸ್ಥಳದಲ್ಲಿ ಬೀಡುಬಿಟ್ಟಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಯಾಣಿಕರನ್ನು ತುರ್ತು ಬಾಗಿಲಿನ ಮೂಲಕ ಸ್ಥಳಾಂತರಿಸಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಬಾಂಬ್ ನಿಷ್ಕ್ರಿಯ ದಳದಿಂದ ವಿಮಾನ ಶೋಧ ನಡೆಸಿದ್ದಾರೆ.
ನಡೆದ ಘಟನೆಯೇನು?: ಇಂದು ಮುಂಜಾನೆ 5.35 ಕ್ಕೆ ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ಇತ್ತು. ಕೂಡಲೇ ಕ್ಯುಆರ್ ಟಿ ಸ್ಥಳಕ್ಕೆ ತಲುಪಿ ಎಲ್ಲಾ ಪ್ರಯಾಣಿಕರನ್ನು ತುರ್ತು ಬಾಗಿಲಿನ ಮೂಲಕ ಕೆಳಗಿಳಿಸಿ ವಿಮಾನವನ್ನು ತಪಾಸಣೆ ಮಾಡಲಾಗುತ್ತಿದೆ.
ಬಾಂಬ್ ಕರೆ ಎಲ್ಲಿಂದ ಬಂತು, ಯಾಕೆ ಬಂತು ಎಂಬ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.