ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವೀರ್ ಸಾವರ್ಕರ್ ಹಾಗೂ ಶಿವಸೇನೆ ಸ್ಥಾಪಕ ಬಾಳ್ ಠಾಕ್ರೆ ಅವರನ್ನು ಹೊಗಳುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.
ಅಘಾಡಿ ಮೈತ್ರಿಕೂಟವನ್ನು ಸುಳ್ಳು ಹೇಳುವವರ ಸೇನೆ ಎಂದು ಲೇವಡಿ ಮಾಡಿರುವ ಅಮಿತ್ ಶಾ, "ರಾಹುಲ್ ಬಾಬಾ ನಿಮ್ಮ ಸ್ನೇಹಿತ ಉದ್ಧವ್ ಠಾಕ್ರೆ ಅವರ ತಂದೆ ಬಾಳಸಾಹೇಬ್ ಠಾಕ್ರೆ ಅವರನ್ನು 2 ನಿಮಿಷಗಳ ಕಾಲ ಹೊಗಳಿ ಎಂದು ಹೇಳಿದ್ದು, ಉದ್ಧವ್ ಠಾಕ್ರೆ ಅವರಿಗೆ ಧೈರ್ಯವಿದ್ದರೆ, ರಾಹುಲ್ ಗಾಂಧಿ ಅವರಿಂದ ವೀರ್ ಸಾವರ್ಕರ್ ಹಾಗೂ ಬಾಳಾಸಾಹೇಬ್ ಠಾಕ್ರೆ ಅವರ ಬಗ್ಗೆ 2 ಒಳ್ಳೆಯ ಮಾತುಗಳನ್ನಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಅಮಿತ್ ಶಾ ಹಿಂಗೋಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮಹಾರಾಷ್ಟ್ರದ ಮುಂದಿನ ಐದು ವರ್ಷಗಳ ಕಾಲ ಶಿವಾಜಿ ಮಹಾರಾಜರ ಪರಂಪರೆಯನ್ನು ಅನುಸರಿಸುತ್ತದೆಯೇ ಅಥವಾ ಔರಂಗಜೇಬ್ ಅವರ ಮಾರ್ಗವನ್ನು ಅನುಸರಿಸುತ್ತದೆಯೇ ಎಂಬುದನ್ನು ವಿಧಾನಸಭಾ ಚುನಾವಣೆ ನಿರ್ಧರಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ನಮ್ಮ ಮಹಾಯುತಿ ಮೈತ್ರಿಕೂಟ ಯಾವುದೇ ಹಿಂಜರಿಕೆ ಇಲ್ಲದೇ, ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ವೀರ್ ಸಾವರ್ಕರ್ ಅವರ ಪರಂಪರೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಆಯ್ಕೆ ಮಾಡಿದೆ, ಆದರೆ ಅಘಾಡಿ ಒಕ್ಕೂಟವು ಔರಂಗಜೇಬ್ ಅಭಿಮಾನಿಗಳ ಸಂಘವಾಗಿದೆ. ಮೋದಿ ಜಿ ರಾಮ ಮಂದಿರವನ್ನು ನಿರ್ಮಿಸಿದರು ಮತ್ತು ಔರಂಗಜೇಬನಿಂದ ಕೆಡವಲ್ಪಟ್ಟ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪುನರ್ನಿರ್ಮಾಣ ಮಾಡಿದರು" ಎಂದು ಶಾ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಪದೇ ಪದೇ ಅಪಘಾತಕ್ಕೀಡಾದ ವಿಮಾನಕ್ಕೆ ಹೋಲಿಸಿದ ಅಮಿತ್ ಶಾ, ಸೋನಿಯಾ ಗಾಂಧಿ ರಾಹುಲ್ ಬಾಬಾ ಹೆಸರಿನ ವಿಮಾನ 20 ಬಾರಿ ಇಳಿಸಲು ಪ್ರಯತ್ನಿಸಿದ್ದಾರೆ, ಮತ್ತು 20 ಬಾರಿ ಕ್ರ್ಯಾಶ್ ಆಗಿದ್ದಾರೆ. ಈಗ ಅದನ್ನು ಇಳಿಸಲು 21 ನೇ ಬಾರಿಗೆ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ರಾಹುಲ್ ವಿಮಾನವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.