ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗಳ ಮರುಸ್ಥಾಪನೆ ಕಾರ್ಯನಿರತ ಸಿಬ್ಬಂದಿ 
ದೇಶ

ಮೈಸೂರು-ದರ್ಬಾಂಗ ಎಕ್ಸ್​ಪ್ರೆಸ್ ರೈಲು ಅಪಘಾತ: ಏಳು ಪ್ರಯಾಣಿಕರಿಗೆ ಗಾಯ, ಸಿಲುಕಿರುವ ಪ್ರಯಾಣಿಕರಿಗೆ ವಿಶೇಷ ರೈಲು ವ್ಯವಸ್ಥೆ

ಹಳಿತಪ್ಪಿದ ಬಾಗ್ಮತಿ ಎಕ್ಸ್‌ಪ್ರೆಸ್‌ನ 13 ಬೋಗಿಗಳಲ್ಲಿ ಸಿಲುಕಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ: ಮೈಸೂರು-ದರ್ಭಂಗಾ ಬಾಗಮತಿ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಮಧ್ಯೆ ಚೆನ್ನೈಗೆ ಸಮೀಪವಿರುವ ಕವರೈಪೆಟ್ಟೈ ಬಳಿ ನಿನ್ನೆ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಏಳು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಹಳಿತಪ್ಪಿದ ಬಾಗ್ಮತಿ ಎಕ್ಸ್‌ಪ್ರೆಸ್‌ನ 13 ಬೋಗಿಗಳಲ್ಲಿ ಸಿಲುಕಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳ ಪೈಕಿ ಗಂಭೀರ ಗಾಯಗೊಂಡ ಮೂವರು ಪ್ರಯಾಣಿಕರನ್ನು ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುವ ನಾಲ್ವರು ಪೊನ್ನೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈಲ್ವೆಯ ಅಧಿಕೃತ ಹೇಳಿಕೆಯ ಪ್ರಕಾರ ಎಲ್ಲಾ ಏಳು ಮಂದಿ ಪರಿಹಾರಗಳಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಮತಿ ಎಕ್ಸ್‌ಪ್ರೆಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಪೊನ್ನೇರಿಗೆ ಮತ್ತು ನಂತರ ಚೆನ್ನೈ ಸೆಂಟ್ರಲ್‌ಗೆ ಎರಡು ವಿಶೇಷ ಉಪನಗರ ರೈಲುಗಳ ಮೂಲಕ ಮುಂಜಾನೆ ಸಾಗಿಸಲಾಯಿತು.

ಚೆನ್ನೈ ಸೆಂಟ್ರಲ್ ತಲುಪಿದ ನಂತರ, ರೈಲ್ವೇ ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿದರು. ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಯಿತು, ಮೊದಲು ಅರಕ್ಕೋಣಂ, ರೇಣಿಗುಂಟಾ ಮತ್ತು ಗುಡೂರ್ ಮೂಲಕ ದರ್ಭಾಂಗಕ್ಕೆ ಹೋಗುವ ವಿಶೇಷ ರೈಲಿನಲ್ಲಿ ಪ್ರಯಾಣಿಸಲಾಯಿತು.ಈ ರೈಲು ಬೆಳಿಗ್ಗೆ 4:45 ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಟಿದೆ.

ಅಪಘಾತದ ಸ್ಥಳದಲ್ಲಿ ಹಳಿಯ ಮರುಸ್ಥಾಪನೆ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ ಎಂದು ದಕ್ಷಿಣ ರೈಲ್ವೆ ವರದಿ ಮಾಡಿದೆ. ಈ ಮಧ್ಯೆ, ಗುಡೂರು-ಚೆನ್ನೈ ಮೂಲಕ ಓಡಬೇಕಿದ್ದ ಎಲ್ಲಾ ರೈಲುಗಳನ್ನು ರೇಣಿಗುಂಟಾ, ಅರಕ್ಕೋಣಂ ಮತ್ತು ಪೆರಂಬೂರ್ ಅಥವಾ ಚೆಂಗಲ್ಪಟ್ಟು ಮೂಲಕ ತಿರುಗಿಸಲಾಯಿತು.

ಹೆಚ್ಚುವರಿಯಾಗಿ, ಚೆನ್ನೈ-ತಿರುಪತಿ, ಅರಕ್ಕೋಣಂ-ಪುದುಚೇರಿ ಮತ್ತು ಚೆನ್ನೈ-ಪುದುಚೇರಿ ಮಾರ್ಗಗಳಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮತ್ತು ಮೆಮು ರೈಲುಗಳನ್ನು ರದ್ದುಗೊಳಿಸಲಾಗಿದೆ.

ನಿನ್ನೆ ಸಾಯಂಕಾಲ 7:50ಕ್ಕೆ ಪೆರಂಬೂರಿನಿಂದ ಹೊರಟು ದರ್ಭಾಂಗಕ್ಕೆ ಹೋಗುವ ಬಾಗ್ಮತಿ ಎಕ್ಸ್‌ಪ್ರೆಸ್ ರಾತ್ರಿ 8:30 ರ ಸುಮಾರಿಗೆ ಗುಮ್ಮಿಡಿಪುಂಡಿ ಬಳಿಯ ಕವರೈಪೆಟ್ಟೈ ತಲುಪಿತು. ರೈಲು ಮುಖ್ಯ ಮಾರ್ಗದಲ್ಲಿ ಗುಡೂರಿನತ್ತ ಸಾಗಲು ಹಸಿರು ನಿಶಾನೆ ತೋರಿಸಲಾಯಿತು ಆದರೆ ಅದರ ಬದಲಾಗಿ ಕವರಾಯಪೆಟ್ಟೈ ನಿಲ್ದಾಣದಲ್ಲಿ ಲೂಪ್ ಲೈನ್ ನ್ನು ಪ್ರವೇಶಿಸಿತು, ಅಲ್ಲಿ ಸರಕು ರೈಲು ನಿಲುಗಡೆಯಾಗಿದೆ ಎಂದು ರೈಲ್ವೆ ಸಿಬ್ಬಂದಿ ಹೇಳಿದರು.

ಅಪಘಾತವಾಗಿದ್ದು ಹೇಗೆ?: ಆರಂಭದಲ್ಲಿ ಗಂಟೆಗೆ 109 ಕಿ.ಮೀ ವೇಗದಲ್ಲಿ ಓಡುತ್ತಿದ್ದ ರೈಲು ತನ್ನ ವೇಗವನ್ನು ಗಂಟೆಗೆ 75 ಕಿ.ಮೀ.ಗೆ ಕಡಿಮೆ ಮಾಡಿತು, ನಂತರ ದೊಡ್ಡ ಶಬ್ದದೊಂದಿಗೆ ಲೂಪ್ ಲೈನ್ ನ್ನು ಪ್ರವೇಶಿಸಿ ಗಾರ್ಡ್ ಕೋಚ್ ಬಳಿ ಸರಕು ರೈಲಿನ ಹಿಂದಿನ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ 13 ಬೋಗಿಗಳು ಹಳಿ ತಪ್ಪಿದರೆ, ಒಂದು ಕೋಚ್ - ಪವರ್ ಕಾರ್ ಕಮ್ ಪಾರ್ಸೆಲ್ ವ್ಯಾನ್ - ಬೆಂಕಿ ಹೊತ್ತಿಕೊಂಡಿತು. ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ರೈಲ್ವೆ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT