ವಾರ್ಧಾ: 'ಅತ್ಯಂತ ಭ್ರಷ್ಟ' ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್ ಮತ್ತು ಅರ್ಬನ್ ನಕ್ಸಲರು ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ವಾರ್ಧಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನೀವು ಇಂದು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರಂತಹ ಮಹಾನ್ ವ್ಯಕ್ತಿಯೊಂದಿಗೆ ನಂಟು ಹೊಂದಿದ್ದ ಪಕ್ಷವಲ್ಲ" ಎಂದರು.
ಕಾಂಗ್ರೆಸ್ನಲ್ಲಿ ದ್ವೇಷದ ಭೂತ ಪ್ರವೇಶಿಸಿದೆ. ಇಂದಿನ ಕಾಂಗ್ರೆಸ್ನಲ್ಲಿ ದೇಶಭಕ್ತಿಯ ಆತ್ಮ ಕೊನೆಯುಸಿರೆಳೆದಿದೆ. ಕಾಂಗ್ರೆಸ್ ನಾಯಕರು ವಿದೇಶದಲ್ಲಿ "ಭಾರತ ವಿರೋಧಿ ಅಜೆಂಡಾಗಳ" ಬಗ್ಗೆ ಮಾತನಾಡಿದ್ದಾರೆ ಎಂದು ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ಅಮೆರಿಕದಲ್ಲಿ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯ ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ ನಡೆಸಿದರು.
"ಭ್ರಷ್ಟ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಮತ್ತು ಅತ್ಯಂತ ಭ್ರಷ್ಟ ಕುಟುಂಬ ಅದರ ಶಾಹಿ ಪರಿವಾರ" ಎಂದು ಪ್ರಧಾನಿ ಮೋದಿ, ಗಾಂಧಿ ಕುಟುಂಬವನ್ನು ಹೆಸರಿಸದೆ ಟೀಕಿಸಿದರು.
ಗಣಪತಿ ಪೂಜೆಯನ್ನೂ ಕಾಂಗ್ರೆಸ್ ದ್ವೇಷಿಸುತ್ತದೆ. "ನಾನು ಗಣೇಶ ಪೂಜೆ ಕಾರ್ಯಕ್ರಮಕ್ಕೆ ಹೋಗಿದ್ದೆ ಮತ್ತು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣಕ್ಕಾಗಿ ಇದನ್ನೂ ಟೀಕಿಸಿದೆ. ಕರ್ನಾಟಕದಲ್ಲಿ ಗಣಪತಿ ಬಪ್ಪನನ್ನು ಕಂಬಿ ಹಿಂದೆ ಹಾಕಲಾಗಿದೆ. ಗಣಪತಿ ಮೂರ್ತಿಯನ್ನು ಪೊಲೀಸ್ ವ್ಯಾನ್ನಲ್ಲಿ ಹಾಕಲಾಗಿದೆ" ಎಂದು ಆರೋಪಿಸಿದರು.
ಈ ವರ್ಷಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಮೋದಿ, "ಮಹಾರಾಷ್ಟ್ರದಲ್ಲಿ, ನಾವು ಅವರ ದ್ವಂದ್ವವನ್ನು ಅರಿತುಕೊಳ್ಳಬೇಕು. ಸುಳ್ಳು ಮತ್ತು ದ್ರೋಹ ಕಾಂಗ್ರೆಸ್ನ ಮುಖವಾಗಿದ್ದು, ಮಹಾರಾಷ್ಟ್ರದ ಜನರು ಆ ಪಕ್ಷದ ಬಗ್ಗೆ ಎಚ್ಚರದಿಂದಿರಬೇಕು." ಮೋದಿ ಹೇಳಿದರು.