ನವದೆಹಲಿ: ಬಿಜು ಜನತಾದಳ (BJD) ವಕ್ಫ್ (ತಿದ್ದುಪಡಿ) ಮಸೂದೆ, 2025ರ ಬಗ್ಗೆ ತನ್ನ ನಿಲುವಿನಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಲೋಕಸಭೆಯಲ್ಲಿ ಮಸೂದೆಯನ್ನು ಪರಿಚಯಿಸುವ ಮೊದಲು ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪಕ್ಷವು ಈಗ ರಾಜ್ಯಸಭೆಯಲ್ಲಿ ತನ್ನ ಸಂಸದರಿಗೆ ವಿಪ್ ನೀಡದಿರಲು ನಿರ್ಧರಿಸಿದೆ. ಅಲ್ಲದೆ ತಮ್ಮ ಸಂಸದರಿಗೆ ಆತ್ಮಸಾಕ್ಷಿಯ ಆಧಾರದ ಮೇಲೆ ಮತ ಚಲಾಯಿಸಲು ಅವಕಾಶ ನೀಡಿದೆ. ಹಿರಿಯ ಬಿಜೆಡಿ ನಾಯಕ ಮತ್ತು ರಾಜ್ಯಸಭಾ ಸಂಸದ ಸಸ್ಮಿತ್ ಪಾತ್ರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಈ ನಿರ್ಧಾರವನ್ನು ಘೋಷಿಸಿದರು. ಪಕ್ಷವು ಅಲ್ಪಸಂಖ್ಯಾತ ಸಮುದಾಯಗಳ ಭಾವನೆಗಳನ್ನು ಆಳವಾಗಿ ಗೌರವಿಸುತ್ತದೆ. ಅವರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದರು.
ಬಿಜು ಜನತಾದಳವು ಯಾವಾಗಲೂ ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಎತ್ತಿಹಿಡಿದಿದೆ. ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಖಚಿತಪಡಿಸುತ್ತದೆ. ವಕ್ಫ್ (ತಿದ್ದುಪಡಿ) ಮಸೂದೆ, 2025ರ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ವರ್ಗಗಳು ವ್ಯಕ್ತಪಡಿಸಿದ ವೈವಿಧ್ಯಮಯ ಭಾವನೆಗಳನ್ನು ನಾವು ಆಳವಾಗಿ ಗೌರವಿಸುತ್ತೇವೆ ಎಂದು ಪಾತ್ರ ಬರೆದಿದ್ದಾರೆ. ನಮ್ಮ ಪಕ್ಷವು, ಈ ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ, ರಾಜ್ಯಸಭೆಯಲ್ಲಿ ನಮ್ಮ ಗೌರವಾನ್ವಿತ ಸದಸ್ಯರಿಗೆ ಮಸೂದೆಯು ಮತದಾನಕ್ಕೆ ಬಂದರೆ, ನ್ಯಾಯ, ಸಾಮರಸ್ಯ ಮತ್ತು ಎಲ್ಲಾ ಸಮುದಾಯಗಳ ಹಕ್ಕುಗಳ ಹಿತದೃಷ್ಟಿಯಿಂದ ತಮ್ಮ ಆತ್ಮಸಾಕ್ಷಿಯಿಂದ ಮತ ಚಲಾಯಿಸುವ ಜವಾಬ್ದಾರಿಯನ್ನು ವಹಿಸಿದೆ ಎಂದರು.
ಮಸೂದೆಯ ಕುರಿತು ವಿರೋಧ ಪಕ್ಷಗಳೊಂದಿಗೆ ಜೊತೆಯಾಗಿದ್ದ ಪಕ್ಷವೊಂದು ಇದೀಗ ತನ್ನ ನಿರ್ಧಾರದಿಂದ ಹಿಂದೆಸರಿದಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಮಂಡಿಸಿದ ಮಸೂದೆಯನ್ನು ಮಧ್ಯರಾತ್ರಿಯವರೆಗೆ ನಡೆದ 12 ಗಂಟೆಗಳ ತೀವ್ರ ಚರ್ಚೆಯ ನಂತರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಕಾಯ್ದೆ ಪರವಾಗಿ 288 ಮತಗಳು ಮತ್ತು ವಿರುದ್ಧ 232 ಮತಗಳು ಚಲಾವಣೆಯಾಗಿವೆ.
ಇನ್ನು ರಾಜ್ಯಸಭೆಯಲ್ಲಿ ಮಸೂದೆ ಮಂಡಣೆಯಾಗಿದ್ದು ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಸಂಸದರು ವಿರೋಧ ಪಕ್ಷವು ಮಸೂದೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದರು. ತೃಣಮೂಲ ಕಾಂಗ್ರೆಸ್ ಸಂಸದ ಮೊಹಮ್ಮದ್ ನದಿಮುಲ್ ಇಸ್ಲಾಂ ಕಾಯ್ದೆಯನ್ನು ಟೀಕಿಸಿದರು. ಇದನ್ನು "ಸಾಂಸ್ಕೃತಿಕ ವಿಧ್ವಂಸಕತೆ" ಎಂದು ಕರೆದರು. ಕೇಂದ್ರ ಸರ್ಕಾರ ವಕ್ಫ್ ಆಸ್ತಿಗಳ ಮೇಲೆ ಅತಿಯಾದ ನಿಯಂತ್ರಣವನ್ನು ಬಯಸುತ್ತಿದೆ ಎಂದು ಆರೋಪಿಸಿದರು.