ಉಗ್ರ ರಾಣಾ 
ದೇಶ

26/11 ಉಗ್ರ ರಾಣಾ ಮೇಲೆ ಹದ್ದಿನ ಕಣ್ಣು: ಭದ್ರಕೋಟೆಯಾಗಿ ಮಾರ್ಪಟ್ಟ NIA ಪ್ರಧಾನ ಕಚೇರಿ; ISI-LET ನಂಟು ಕುರಿತು ತೀವ್ರ ವಿಚಾರಣೆ

ಎನ್‌ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ, ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ. ದಿನದ 24 ಗಂಟೆಯೂ ಅಧಿಕಾರಿಗಳು ನಿಗಾವಹಿಸಿದ್ದಾರೆ.

ನವದೆಹಲಿ: ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 26/11 ದಾಳಿಯ ಉಗ್ರ ತಹವ್ವೂರ್ ರಾಣಾನನ್ನು ಎನ್ಐಎ 18 ದಿನ ತನ್ನ ಕಸ್ಟಡಿಗೆ ಪಡೆದಿದ್ದು, ಡಿಐಜಿ ಜಯ್ ರಾಯ್ ನೇತೃತ್ವದ ತಂಡ, ಶುಕ್ರವಾರ ದೆಹಲಿಯ ಎನ್ಐಎ ಪ್ರಧಾನ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಿಸಿದೆ.

ಎನ್‌ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ, ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ. ದಿನದ 24 ಗಂಟೆಯೂ ಅಧಿಕಾರಿಗಳು ನಿಗಾವಹಿಸಿದ್ದಾರೆ. ಉಗ್ರ ರಾಣಾ ವಿಚಾರಣೆ ಹಿನ್ನೆಲೆಯಲ್ಲಿ ಎನ್ಐಎ ಪ್ರಧಾನ ಕಚೇರಿ ಸುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಎನ್ಐಎ ಕಚೇರಿ ಇದೀಗ ಭದ್ರಕೋಟೆಯಾಗಿ ಬದಲಾಗಿದೆ.

ತಹವ್ವೂರ್ ರಾಣಾ ಇರುವ ಸೆಲ್ 14X14 ವಿಸ್ತೀರ್ಣದ್ದಾಗಿದೆ ಹಾಗೂ ಸಿಸಿಟಿವಿ ಕ್ಯಾಮರಾ ಕಣ್ಣಾವಲಿನ ಜೊತೆಗೆ ಭದ್ರತಾ ಸಿಬ್ಬಂದಿಯ ಬಿಗಿ ಕಾವಲಿದೆ. ಅಲ್ಲದೇ ಈ ಕೊಠಡಿಯೊಳಗೆ ಎನ್‌ಐಎನ ಉನ್ನತ ಶ್ರೇಣಿಯ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ದೆಹಲಿ ನ್ಯಾಯಾಲಯ ನೀಡಿರುವ 18 ದಿನಗಳ ಕಸ್ಟಡಿ ಅವಧಿ ಮುಗಿಯುವ ತನಕ ರಾಣಾ ಇದೇ ಸೆಲ್‌ನಲ್ಲಿ ಇರಲಿದ್ದಾನೆ.

ಆತನಿಗೆ ಆಹಾರ ಮತ್ತು ಮೂಲಭೂತ ಅಗತ್ಯಗಳನ್ನು ಸೆಲ್‌ನೊಳಗೇ ಪೂರೈಸಲಾಗುತ್ತಿದೆ. ಇನ್ನು ಎನ್‌ಐಎ ಆವರಣದೊಳಗೆ ಆತನ ಚಲನವಲನಗಳು ಕಡಿಮೆ ಇರಲಿದೆ. ಎಲ್ಲಾ ವಿಚಾರಣೆಗಳು 3ನೇಮಹಡಿಯಲ್ಲಿರುವ ಸೆಲ್‌ನ ಪಕ್ಕದ ಕೋಣೆಯಲ್ಲಿ ನಡೆದಿದೆ. ಅಲ್ಲಿ 2 ಕ್ಯಾಮೆರಾಗಳು ವಿಚಾರಣೆಯನ್ನು ಚಿತ್ರೀಕರಿಸಲಿವೆ. ವಿಚಾರಣೆ ಮುಗಿದ ಬಳಿಕ ನೆಲಮಹಡಿಯ ಸೆಲ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇನ್ನು ಶುಕ್ರವಾರ ಅಧಿಕಾರಿಗಳು ಉಗ್ರ ರಾಣಾನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ವಿಚಾರಣೆಗೆ ಸಹಕರಿಸದೆ, ಸೂಕ್ತ ಉತ್ತರ ನೀಡುತ್ತಿಲ್ಲ ಎನ್ನಲಾಗಿದ್ದು, ಕೇವಲ 3 ಗಂಟೆಗಳ ಕಾಲವಷ್ಟೇ ವಿಚಾರಣೆ ನಡಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಅಧಿಕಾರಿಗಳು ಲಷ್ಕರ್‌ ಜೊತೆಗಿನ ರಾಣಾಗಿದ್ದ ನಂಟು, ಡೇವಿಡ್‌ ಹೆಡ್ಲಿಗೂ ರಾಣಾಗೂ ಇದ್ದ ಸಂಬಂಧ, ಪಾಕ್‌ ಐಎಸ್‌ಐ ಜೊತೆಗೆ ಇವರಿಗಿದ್ದ ನಂಟು, ದಾಳಿಯಲ್ಲಿ ಇವರ ನಿಖರ ಪಾತ್ರ ಸೇರಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆಂದು ತಿಳಿದುಬಂದಿದೆ.

ಭಾರತದಲ್ಲಿ ಡೇವಿಡ್ ಹೆಡ್ಲಿಗೆ ಯಾರೆಲ್ಲಾ ಸಹಾಯ ಮಾಡಿದರು, ಆತನಿಗೆ ಹಣದ ನೆರವು ನೀಡಿದವರು ಯಾರು? ಕ್ರಿಕೆಟ್ ಪಂದ್ಯ ವೀಕ್ಷಿಸುವ ನೆಪದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಾಜಿದ್ ಮಿರ್ ಕುರಿತಂತೆಯೂ ರಾಣಾಗೆ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಆತ ಬೆಳೆದು ಬಂದ ಹಾದಿ, ಪಾಲನೆ, ಶಿಕ್ಷಣ, ಕುಟುಂಬ, ವೃತ್ತಿಜೀವನ, ಭಯೋತ್ಪಾದಕನಾಗಿ ಪರಿವರ್ತನೆಗೊಂಡದ್ದು ಹಾಗೂ ಭಯೋತ್ಪದಕನಾಗಿ ಬದಲಾದ ವಿಚಾರ ಕುಟುಂಬಕ್ಕೆ ತಿಳಿದಿದೆಯೇ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ಕೆದಕಿದ್ದಾರೆಂದು ಮೂಲಗಳು ತಿಳಿಸಿವೆ.

ಮುಂದಿನ ವಿಚಾರಣೆಯ ಸಮಯದಲ್ಲಿ, ರಾಣಾ ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಯಾವಾಗ ಭೇಟಿಯಾದ? ಆತನೊಂದಿನ ಸಂಬಂಧ ಹಾಗೂ ಇಸಿಸ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿರುವುದರ ಕುರಿತು ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಗುರುವಾರ ದೆಹಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಎನ್ಐಎ ತಂಡ, ಉಗ್ರ ರಾಣಾ ಮುಂಬೈ ಮಾತ್ರವಲ್ಲ ಭಾರತದ ಇತರ ನಗರಗಳ ಮೇಲೂ ದಾಳಿಗೆ ಸಂಚು ರೂಪಿಸಿದ್ದ ಎಂದು ಹೇಳಿತ್ತು.

ದೆಹಲಿಯ ಕೋರ್ಟ್‌ನಲ್ಲಿ ವಿಶೇಷನ್ಯಾ| ಚಂದ್ರಜೀತ್ ಸಿಂಗ್ ಅವರ ಸಮ್ಮುಖದಲ್ಲಿ ವಾದ ಮಂಡಿಸಿದ್ದ ಎನ್‌ಐಎ, 'ಮುಂಬೈನಲ್ಲಿ ಮಾಡಿದ ದಾಳಿಯಂತೆ ಭಾರತದ ಇತರ ನಗರಗಳ ಮೇಲೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ರಾಣಾ ಸಂಚು ರೂಪಿಸಿದ್ದ' ಎಂದು ಹೇಳಿತ್ತು. ಇದರ ಬೆನ್ನಲ್ಲೇ ರಾಣಾನನ್ನು ನ್ಯಾಯಾಯಲಯ 18 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.

ರಾಣಾ 2008ರಲ್ಲಿ 26/11 ದಾಳಿಗೆ ಮುನ್ನ ಮುಂಬೈ ಮಾತ್ರವಲ್ಲ, ಕೇರಳದ ಕೊಚ್ಚಿ ಹಾಗೂ ತಾಜ್ ಮಹಲ್ ಇರುವ ಆಗ್ರಾಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿತ್ತು. ಹೀಗಾಗಿ ಇಲ್ಲಿ ಕೂಡ ರಾಣಾ ದಾಳಿಗೆ ಸಂಚು ರೂಪಿಸಿದ್ದನೇ ಎಂಬುದು ಈಗ ವಿಚಾರಣೆ ವೇಳೆ ದೃಢಪಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT