ನವದೆಹಲಿ: ಸದನದೊಳಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ( CISF)ಸಿಬ್ಬಂದಿ ನಿಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯಸಭೆಯಲ್ಲಿ ಸದನದ ನಾಯಕ ಜೆಪಿ ನಡ್ಡಾ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಪ್ರತಿಪಕ್ಷಗಳ ಪರವಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಆಡಳಿತಾರೂಢ ಬಿಜೆಪಿ ಸದನದ ಬಾವಿ ಬಳಿ CISF ಸಿಬ್ಬಂದಿಯನ್ನು ನಿಯೋಜಿಸಿದೆ. ರಾಜ್ಯಸಭೆಯ ಸದಸ್ಯರು ತಮ್ಮ ಪ್ರಜಾಸತಾತ್ಮಕ ಹಕ್ಕುಗಳನ್ನು ಚಲಾಯಿಸುವಾಗ ಕೇಂದ್ರಿಯ ಕೈಗಾರಿಕಾ ಭದ್ರತಾ ಸಿಬ್ಬಂದಿಯನ್ನು ಸದನದ ಬಾವಿ ಬಳಿ ಇಟ್ಟು ಸದನ ನಡೆಸುತ್ತಿರುವುದು ನಮಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದರು.
ನಿನ್ನೆ ಮತ್ತು ಇಂದು ಇದನ್ನು ನೋಡುತ್ತಿದ್ದೇವೆ. ನಮ್ಮ ಸಂಸತ್ತು ಅಂತಹ ಮಟ್ಟಕ್ಕೆ ಇಳಿದಿದೆಯೇ? ಎಂದು ಪ್ರಶ್ನಿಸಿದ ಖರ್ಗೆ ಇದು ಅತ್ಯಂತ ಆಕ್ಷೇಪಾರ್ಹವಾಗಿದ್ದು, ನಾವು ಇದನ್ನು ಖಂಡಿಸುತ್ತೇವೆ. ಮುಂದೆ ಸದಸ್ಯರು ಸಾರ್ವಜನಿಕ ಮಹತ್ವದ ವಿಷಯ ಕುರಿತು ಚರ್ಚೆಗೆ ಎತ್ತಿದಾಗ ಸಿಐಎಸ್ ಎಫ್ ಸಿಬ್ಬಂದಿ ಸದನದ ಬಾವಿಗೆ ಬರಲ್ಲ ಎಂಬ ನಿರೀಕ್ಷೆಯಿದೆ ಎಂದರು.
ಮಾತು ಮುಂದುವರೆಸಿದ ಖರ್ಗೆ, ಅರುಣ್ ಜೇಟ್ಲಿ ಹಾಗೂ ಸುಶ್ಮಾ ಸ್ವರಾಜ್ ರಾಜ್ಯಸಭೆಯ ಸದನದ ನಾಯಕರಾಗಿದ್ದಾಗ ಕಲಾಪಕ್ಕೆ ಅಡ್ಡಿಪಡಿಸುವುದನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಬಲಪಡಿಸುವುದಕ್ಕೆ ಅಡ್ಡಿ ಅಂತಾ ಹೇಳುತ್ತಿದ್ದು, ಇದು ದೊಡ್ಡ ವಿಷಯವಲ್ಲ. ನಾವು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ಇದು ನಮ್ಮ ಹಕ್ಕು" ಎಂದು ಹೇಳಿದರು.
ಆದರೆ, ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಖರ್ಗೆ ಅವರ ಹೇಳಿಕೆಯನ್ನು ತಳ್ಳಿಹಾಕಿದರು ಮತ್ತು ಇದು ಸಿಐಎಸ್ಎಫ್ ಸಿಬ್ಬಂದಿಯಲ್ಲ, ಸಂಸತ್ತಿನ ಭದ್ರತಾ ಸಿಬ್ಬಂದಿಯಾಗಿದ್ದು, ಮಾರ್ಷಲ್ ಮಾತ್ರ ಸಭಾಧ್ಯಕ್ಷರ ಆದೇಶ ಪಾಲಿಸುತ್ತಾರೆ ಎಂದು ಸ್ಪಷ್ಪಪಡಿಸಿದರು.
ಇದಕ್ಕೆ ಉತ್ತರಿಸಿದ ಜೆ.ಪಿ.ನಡ್ಡಾ, ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಸತ್ತಾತ್ಮಕವಲ್ಲ ಎಂದು ಸ್ಪಷ್ಟಪಡಿಸಿದ್ದೀರಿ. ನಾನು ಮಾತನಾಡುವಾಗ ನನ್ನ ಪಕ್ಕದಲ್ಲಿ ಯಾರಾದರೂ ಘೋಷಣೆ ಕೂಗಿದರೆ ಅದು ಪ್ರಜಾಪ್ರಭುತ್ವವಲ್ಲ. ಇದು ಸರಿಯಾದ ಕೆಲಸವಲ್ಲ. ನಾನೇ ಬಹುಕಾಲ ವಿರೋಧ ಪಕ್ಷದಲ್ಲಿದ್ದರಿಂದ ಪ್ರತಿಪಕ್ಷವಾಗಿ ಹೇಗೆ ಕೆಲಸ ಮಾಡಬೇಕು ಎಂದು ನನ್ನಿಂದ ಟ್ಯೂಷನ್ ತೆಗೆದುಕೊಳ್ಳಿ. ಮುಂದಿನ 40 ವರ್ಷ ನೀವು ವಿರೋಧ ಪಕ್ಷದಲ್ಲಿಯೇ ಇರುತ್ತೀರಿ ಎಂದು ಗುಡುಗಿದರು.