ಸಾಂದರ್ಭಿಕ ಚಿತ್ರ  
ದೇಶ

ಕುಲ್ಗಾಮ್ ಎನ್‌ಕೌಂಟರ್‌ 9ನೇ ದಿನ: ಇಬ್ಬರು ಸೈನಿಕರು ಹುತಾತ್ಮ

ಅಖಲ್ ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ತನ್ನ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಹುತಾತ್ಮ ಸೈನಿಕರನ್ನು ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.

ಶ್ರೀನಗರ: ಜಮ್ಮು- ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಲ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ 9ನೇ ದಿನಕ್ಕೆ ಕಾಲಿಟ್ಟ ಭಾರೀ ಶಸ್ತ್ರಸಜ್ಜಿತ ಉಗ್ರಗಾಮಿಗಳೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಅತಿ ಉದ್ದದ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದೆ.

ಅಖಲ್ ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ತನ್ನ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಹುತಾತ್ಮ ಸೈನಿಕರನ್ನು ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.

ಸೈನಿಕರು ಎನ್ ಕೌಂಟರ್ ನಲ್ಲಿ ತೋರಿಸಿದ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ. ಭಾರತೀಯ ಸೇನೆಯು ಸಂತಾಪ ವ್ಯಕ್ತಪಡಿಸುತ್ತದೆ ಮೃತ ಕುಟುಂಬಗಳೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ಶ್ರೀನಗರ ಮೂಲದ ಸೇನೆಯ 15 ಕಾರ್ಪ್ಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ರಾತ್ರಿಯೂ ಅರಣ್ಯ ಪ್ರದೇಶದಿಂದ ಜೋರಾಗಿ ಸ್ಫೋಟಗಳು ಮತ್ತು ಭಾರೀ ಗುಂಡಿನ ಸದ್ದು ಕೇಳಿಬಂದಿತ್ತು. ಜುಲೈ 1 ರಂದು ಅಖಾಲ್ ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿಗಳ ಗುಂಪಿನ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತುಕಡಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ನೈಸರ್ಗಿಕ ಗುಹೆಗಳು ಸುರಕ್ಷಿತ ತಾಣಗಳನ್ನು ಒದಗಿಸುವ ದಟ್ಟವಾದ ಕಾಡಿನಲ್ಲಿ ಅಡಗಿರುವ ಉಗ್ರಗಾಮಿಗಳ ಚಲನವಲನವನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಡ್ರೋನ್‌, ಯುಎವಿಗಳು, ಹೆಲಿಕಾಪ್ಟರ್‌ಗಳು ಮತ್ತು ಇತರ ಕಣ್ಗಾವಲು ಸಾಧನಗಳನ್ನು ಬಳಸುತ್ತಿವೆ. ಕೆಲವು ಶಂಕಿತ ಉಗ್ರಗಾಮಿ ಅಡಗುತಾಣಗಳ ಮೇಲೆ ಪಡೆಗಳು ಸ್ಫೋಟಕಗಳನ್ನು ಸಹ ಹಾಕಿವೆ. ಉಗ್ರಗಾಮಿ ಅಡಗುತಾಣಗಳನ್ನು ಗುರಿಯಾಗಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿರುವುದು ಇದೇ ಮೊದಲು.

ಆಧುನಿಕ ಗ್ಯಾಜೆಟ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಎಲೈಟ್ ಪ್ಯಾರಾ ಕಮಾಂಡೋಗಳು ಹುಡುಕಾಟದಲ್ಲಿ ಸೇರಿಕೊಂಡಿದ್ದಾರೆ. ಉಗ್ರರನ್ನು ಬೇಟೆಯಾಡಲು ಸೈನಿಕರಿಗೆ ಸಹಾಯ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ 5ರಿಂದ 7 ಸುಶಿಕ್ಷಿತ ಮತ್ತು ಭಾರೀ ಶಸ್ತ್ರಸಜ್ಜಿತ ಉಗ್ರಗಾಮಿಗಳ ಗುಂಪು ಅರಣ್ಯ ಪ್ರದೇಶದಲ್ಲಿ ಇರುವ ಬಗ್ಗೆ ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸಿದ್ದವು.

15 ಕಾರ್ಪ್ಸ್‌ನ ಜಿಒಸಿ, ಲೆಫ್ಟಿನೆಂಟ್ ಜನರಲ್ ಪ್ರಶಾಂತ್ ಶ್ರೀವಾಸ್ತವ ಮತ್ತು ಪೊಲೀಸ್ ಮಹಾನಿರ್ದೇಶಕ (DGP) ನಳಿನ್ ಪ್ರಭಾತ್ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 2023 ರಿಂದ ಕಾಶ್ಮೀರದಲ್ಲಿ ನಡೆದ ಅತಿ ಉದ್ದದ ಉಗ್ರ ವಿರೋಧಿ ಕಾರ್ಯಾಚರಣೆ ಇದಾಗಿದೆ.

ಸೆಪ್ಟೆಂಬರ್ 2023 ರಲ್ಲಿ, ದಕ್ಷಿಣ ಕಾಶ್ಮೀರದ ಕೊಕರ್ನಾಗ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್ ಏಳು ದಿನಗಳ ಕಾಲ ನಡೆಯಿತು, ಇದರಲ್ಲಿ 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್, ಅವರ ಉಪ ಮತ್ತು ಪೊಲೀಸ್ ಉಪ ಸೂಪರಿಂಟೆಂಡೆಂಟ್ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಲಷ್ಕರ್ ಉಗ್ರಗಾಮಿ ಮೃತಪಟ್ಟಿದ್ದರು.

ಕುಲ್ಗಾಮ್ ಎನ್‌ಕೌಂಟರ್ ಕಳೆದ 10 ದಿನಗಳಲ್ಲಿ ಕಾಶ್ಮೀರದಲ್ಲಿ ನಡೆದ ಎರಡನೇ ಪ್ರಮುಖ ಗುಂಡಿನ ಚಕಮಕಿಯಾಗಿದೆ. ಜುಲೈ 28 ರಂದು, ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್‌ನ ಡಚಿಗಮ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾದ ಮೂವರು ಪಾಕಿಸ್ತಾನಿ ಉಗ್ರರು ಮೃತಪಟ್ಟಿದ್ದರು.

ಉಗ್ರರ ಮನೆಗಳ ಶೋಧ

ಜಮ್ಮು- ಕಾಶ್ಮೀರ ಪೊಲೀಸರು ಇಂದು ಕಿಶ್ತ್ವಾರ್ ಜಿಲ್ಲೆಯಲ್ಲಿನ ಭಯೋತ್ಪಾದಕ ಪರಿಸರ ವ್ಯವಸ್ಥೆಯ ಮೇಲೆ ಭಾರಿ ದಾಳಿ ನಡೆಸಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಮೊಹಮ್ಮದ್ ಅಮೀನ್ ಭಟ್ ಅಲಿಯಾಸ್ 'ಜೆಹಾಂಗೀರ್ ಸರೂರಿ' ಸೇರಿದಂತೆ 26 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗಳು ಹೆಚ್ಚಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರ ಮನೆಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದು, ಗಡಿಯಾಚೆಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಹತ್ತಿರದ ದೋಡಾ ಜಿಲ್ಲೆಯ 15 ಸ್ಥಳಗಳಲ್ಲಿ ಇದೇ ರೀತಿಯ ಶೋಧಗಳನ್ನು ನಡೆಸಿದ ನಂತರ ಕಿಶ್ತ್ವಾರ್‌ನಲ್ಲಿ ದಾಳಿಗಳು ನಡೆದಿವೆ. ವಿವಿಧ ಪೊಲೀಸ್ ತಂಡಗಳು ಕಿಶ್ತ್ವಾರ್ ಜಿಲ್ಲೆಯಾದ್ಯಂತ 26 ಸ್ಥಳಗಳಲ್ಲಿ ಶೋಧ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೊಳಗಾದ ಆಸ್ತಿಗಳಲ್ಲಿ ಮೊಹಮ್ಮದ್ ಅಮೀನ್ ಭಟ್ ಮನೆಯೂ ಸೇರಿದೆ. ಈತ 1990 ರ ದಶಕದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದ್ದು, ಆತನನ್ನು ಅತ್ಯಂತ ದೀರ್ಘಕಾಲದಿಂದ ಬದುಕುಳಿದ ಭಯೋತ್ಪಾದಕ ಎಂದು ಪರಿಗಣಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಮಾಜಿಕ-ಆರ್ಥಿಕ ಸಮೀಕ್ಷೆ ಯಾರ ವಿರುದ್ಧವೂ ಅಲ್ಲ; ಬಿಜೆಪಿಯದ್ದು ಮನುವಾದಿ ಮನಸ್ಥಿತಿ

ಪಂದ್ಯದ ಮಧ್ಯೆ ರಿಷಬ್ ಪಂತ್ ತಂತ್ರ ಬಳಸಲು ಹೋಗಿ ತಿರುಗುಬಾಣ: Pak ಕುತಂತ್ರ ಕಂಡ ತಕ್ಷಣ ರಣರಂಗಕ್ಕಿಳಿದ ಗಂಭೀರ್!

ಸಹಜ ಸ್ಥಿತಿಗೆ ಮರಳುವವರೆಗೆ ಮಾತುಕತೆ ಇಲ್ಲ; ವಾಂಗ್‌ಚುಕ್ ಬೇಷರತ್ ಬಿಡುಗಡೆಗೆ ಕೆಡಿಎ ಆಗ್ರಹ

Asia Cup final:'ತಲೆಹರಟೆ' ಪಾಕ್ ಆಟಗಾರರು, ಬ್ಯಾಟಿನಿಂದಲೇ ಸದ್ದಡಗಿಸಿದ್ದೇನೆ- ತಿಲಕ್ ವರ್ಮಾ Video!

Asia Cup 2025: ಫೈನಲ್ ಟ್ರೋಫಿ ವಿವಾದ; ICC ಟೂರ್ನಿಗಳಿಂದ 'ಭಾರತ ಅಮಾನತಿ'ಗೆ ಪಾಕ್ ಒತ್ತಾಯ

SCROLL FOR NEXT