ಮೊಹಮ್ಮದ್ ದಿಲ್ಶಾದ್ ಬಂಧಿಸಿದ CBI 
ದೇಶ

1999ರಲ್ಲಿ ಸೌದಿಯಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 26 ವರ್ಷಗಳ ಬಳಿಕ ಭಾರತದಲ್ಲಿ ಬಂಧಿಸಿದ CBI!

ಸೌದಿ ಅರೇಬಿಯಾದಲ್ಲಿ ನಡೆದ 1999ರ ಕೊಲೆ ಪ್ರಕರಣದಲ್ಲಿ 26 ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ದಿಲ್ಶಾದ್ ನನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬಿಐ ಬಂಧಿಸಿದೆ.

ನವದೆಹಲಿ: ಸೌದಿ ಅರೇಬಿಯಾದಲ್ಲಿ ನಡೆದ 1999ರ ಕೊಲೆ ಪ್ರಕರಣದಲ್ಲಿ 26 ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬಿಐ ಬಂಧಿಸಿದೆ. ಮೊಹಮ್ಮದ್ ದಿಲ್ಶಾದ್ ಆಗಸ್ಟ್ 11 ರಂದು ಮದೀನಾದಿಂದ ಜೆಡ್ಡಾ ಮೂಲಕ ಬದಲಾದ ಹೆಸರು ಮತ್ತು ಹೊಸ ಪಾಸ್‌ಪೋರ್ಟ್‌ನೊಂದಿಗೆ ಹಿಂದಿರುಗಿದಾಗ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.

ರಿಯಾದ್‌ನಲ್ಲಿ ಮೋಟಾರ್ ಮೆಕ್ಯಾನಿಕ್ ಮತ್ತು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ದಿಲ್ಶಾದ್, 1999ರಲ್ಲಿ ತನ್ನ ಕೆಲಸದ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸೌದಿ ಅರೇಬಿಯಾ ಅಧಿಕಾರಿಗಳನ್ನು ತಪ್ಪಿಸಿ ಭಾರತಕ್ಕೆ ಬಂದಿದ್ದರು. ಇಲ್ಲಿ ಅಕ್ರಮವಾಗಿ ಹೊಸ ಗುರುತನ್ನು ಪಡೆದುಕೊಂಡು ಪಾಸ್‌ಪೋರ್ಟ್ ಪಡೆದುಕೊಂಡಿದ್ದರು ಎಂದು ಅಧಿಕಾರಿ ಹೇಳಿದರು. ದಿಲ್ಶಾದ್ ಹೊಸ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ಕಾನೂನು ಜಾರಿ ಸಂಸ್ಥೆಗಳನ್ನು ತಪ್ಪಿಸಿಕೊಳ್ಳುತ್ತಲೇ ಇದ್ದರು. ಈ ಸಮಯದಲ್ಲಿ ಅವರು ಗಲ್ಫ್ ದೇಶಗಳಿಗೆ ಆಗಾಗ್ಗೆ ಪ್ರಯಾಣಿಸುತ್ತಿದ್ದರು ಎಂದು ಅವರು ಹೇಳಿದರು.

ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ, ಸಿಬಿಐ 2022ರ ಏಪ್ರಿಲ್‌ನಲ್ಲಿ ಪ್ರಕರಣವನ್ನು ವಹಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಸ್ಥಳೀಯವಾಗಿ ವಿಚಾರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಡರಲ್ ತನಿಖಾ ಸಂಸ್ಥೆ ದಿಲ್ಶಾದ್ ಅವರ ಸ್ಥಳೀಯ ಗ್ರಾಮವಾದ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಪತ್ತೆ ಹಚ್ಚಿತು. ಅದರ ನಂತರ ಲುಕ್-ಔಟ್ ಸುತ್ತೋಲೆ (LoC) ಹೊರಡಿಸಲಾಯಿತು ಎಂದು ಅವರು ಹೇಳಿದರು. ಆದಾಗ್ಯೂ, ಈ ವಿಧಾನವು ಪರಿಣಾಮಕಾರಿ ಎಂದು ಸಾಬೀತಾಗಲಿಲ್ಲ. ಕಾರಣ ಅವರ ಹಳೆಯ ದಾಖಲೆಗಳ ಆಧಾರದ ಮೇಲೆ ಎಲ್‌ಒಸಿ ಹೊರಡಿಸಲಾಗಿತ್ತು. ಆದ್ದರಿಂದ ಆತ ವಿದೇಶ ಪ್ರಯಾಣ ಮುಂದುವರಿಸಿದ್ದ ಎಂದು ಅವರು ಹೇಳಿದರು.

ತನಿಖೆಯ ಸಮಯದಲ್ಲಿ, ದಿಲ್ಶಾದ್ ವಂಚನೆಯಿಂದ ಪಡೆದ ಗುರುತಿನ ಆಧಾರದ ಮೇಲೆ ಕತಾರ್, ಕುವೈತ್ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸುತ್ತಿದ್ದನು ಎಂದು ಕಂಡುಬಂದಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ಏಜೆನ್ಸಿಯು ಹಲವಾರು ತಾಂತ್ರಿಕ ಸುಳಿವುಗಳು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದೆ. ಇದು ಹೊಸ ಪಾಸ್‌ಪೋರ್ಟ್ ಅನ್ನು ಪತ್ತೆಹಚ್ಚಲು ಸಹಾಯ ಮಾಡಿತು. ಪರಿಣಾಮವಾಗಿ ಹೊಸ ಎಲ್‌ಒಸಿ ನೀಡಲಾಯಿತು. ಇದರ ಅರಿವಿಲ್ಲದ ದಿಲ್ಶಾದ್ ಆಗಸ್ಟ್ 11ರಂದು ಮದೀನಾದಿಂದ ಜೆಡ್ಡಾ ಮೂಲಕ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಿದರು. ಅವರು ಆಗಮಿಸಿದಾಗ, ವಲಸೆ ಇಲಾಖೆ ಸಿಬಿಐಗೆ ಮಾಹಿತಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT