ಪ್ರಯಾಗರಾಜ್: ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಅವರ ಪುತ್ರ, ಮಾಜಿ ಶಾಸಕ ಅಬ್ಬಾಸ್ ಅನ್ಸಾರಿ ಅವರಿಗೆ ಅಲಹಾಬಾದ್ ಹೈಕೋರ್ಟ್ ನಿಂದ ಬುಧವಾರ ಬಿಗ್ ರಿಲೀಫ್ ಸಿಕ್ಕಿದೆ.
ಅನ್ಸಾರಿ ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್, 2 ವರ್ಷ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಇದರೊಂದಿಗೆ ಮತ್ತೆ ಅವರಿಗೆ ಶಾಸಕ ಸ್ಥಾನಮಾನ ಕಲ್ಪಿಸಲಾಯಿತು. ಅವರು ಪ್ರತಿನಿಧಿಸುವ ಮೌ ಸದರ್ ವಿಧಾನಸಭಾ ಸ್ಥಾನಕ್ಕೆ ಯಾವುದೇ ಉಪ ಚುನಾವಣೆ ಇರುವುದಿಲ್ಲ.
2022 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಡಿದ ದ್ವೇಷ ಭಾಷಣ ಹಿನ್ನೆಲೆಯಲ್ಲಿ ಮೌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೇ 31, 2025 ರಂದು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ರೂ 3,000 ದಂಡವನ್ನು ವಿಧಿಸಿತು. ಆ ಅಪರಾಧದ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ಜೂನ್ 1, 2025 ರಂದು ಕೊನೆಗೊಳಿಸಲಾಗಿತ್ತು.
ಜುಲೈ 5 ರಂದು ಮೌ ಜಿಲ್ಲಾ ನ್ಯಾಯಾಧೀಶರು ಮನವಿಯನ್ನು ತಿರಸ್ಕರಿಸಿದಾಗ ಅಬ್ಬಾಸ್ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್ ಜುಲೈ 30ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಈ ಪ್ರಕರಣದಲ್ಲಿ ಅಬ್ಬಾಸ್ ಅನ್ಸಾರಿ ಪರ ವಕೀಲ ಉಪೇಂದ್ರ ಉಪಾಧ್ಯಾಯ ಅವರು ವಾದ ಮಂಡಿಸಿದರೆ, ಅಡ್ವೊಕೇಟ್ ಜನರಲ್ ಅಜಯ್ ಕುಮಾರ್ ಮಿಶ್ರಾ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಂಸಿ ಚತುರ್ವೇದಿ ಅವರು ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದರು.
ಇಂದಿನ ಹೈಕೋರ್ಟ್ ತೀರ್ಪಿನೊಂದಿಗೆ ಅಬ್ಬಾಸ್ ಅನ್ಸಾರಿ ಮತ್ತೆ ಶಾಸಕ ಸ್ಥಾನವನ್ನು ಪಡೆದರು. ಇದು ಮೌನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.