ನವದೆಹಲಿ: ಲಿಪುಲೇಖ್ ಪಾಸ್ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸುವ ಭಾರತ-ಚೀನಾ ನಿರ್ಧಾರಕ್ಕೆ ನೇಪಾಳ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಲಿಪುಲೇಖ್ ನಮ್ಮ ಅವಿಭಾಜ್ಯ ಅಂಗ ಎಂದು ಹೇಳಿದೆ. ಈ ನಡುವೆ ನೇಪಾಳದ ಆಕ್ಷೇಪಣೆಯನ್ನು ಭಾರತ ತಿರಸ್ಕರಿಸಿದ್ದು, ನ್ಯಾಯಸಮ್ಮತವಲ್ಲ ಎಂದು ತಿಳಿಸಿದೆ.
ನೇಪಾಳದ ವಿದೇಶಾಂಗ ಸಚಿವಾಲಯದ ಹೇಳಿಕೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, "ಈ ವಿಷಯದಲ್ಲಿ ನಮ್ಮ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರವು 1954 ರಲ್ಲಿ ಪ್ರಾರಂಭವಾಯಿತು. ಅದು ದಶಕಗಳಿಂದ ನಡೆಯುತ್ತಿದೆ ಎಂದು ಹೇಳಿದರು.
ಕೋವಿಡ್ 19 ಸಾಂಕ್ರಾಮಿಕ ಹಾಗೂ ಇತರ ಬೆಳವಣಿಗೆಯಿಂದಾಗಿ ಎರಡು ದೇಶಗಳು ಈ ವ್ಯಾಪಾರ ನಿಲ್ಲಿಸಲು ಒಪ್ಪಿಗೆ ನೀಡಿದ್ದವು. ಇದೀಗ ಈ ಪ್ರದೇಶದ ಹಕ್ಕಿನ ಕುರಿತು ಹೇಳಿಕೆಗಳು ಸಮರ್ಥನೀಯವಲ್ಲ. ಇದು ಐತಿಹಾಸಿಕ ಸಂಗತಿ ಹಾಗೂ ಪುರಾವೆಗಳನ್ನು ಆಧರಿಸಿಲ್ಲ. ಪ್ರಾದೇಶಿಕ ಹಕ್ಕುಗಳ ಯಾವುದೇ ಏಕಪಕ್ಷೀಯ ಹಕ್ಕು ಸಮರ್ಥನೀಯವಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ನೇಪಾಳದ ಜೊತೆಗೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಒಪ್ಪಿಕೊಂಡಿರುವ ಬಾಕಿ ಇರುವ ಗಡಿ ಸಮಸ್ಯೆಗಳನ್ನು ಪರಿಹರಿಸುವ ಮಾತುಕತೆಗೆ ಭಾರತ ಮುಕ್ತವಾಗಿದೆ ಎಂದೂ ಹೇಳಿದ್ದಾರೆ.
ನವದೆಹಲಿಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಮಾತುಕತೆ ಬಳಿಕ ಎರಡು ದೇಶಗಳ ನಡುವಿನ ವ್ಯಾಪಾರ ಮರು ಆರಂಭಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಬಿಡುಗಡೆ ಮಾಡಲಾದ ಜಂಟಿ ಪ್ರಕಟಣೆಯಲ್ಲಿ ಮೂರು ಗೊತ್ತುಪಡಿಸಿದ ಜಾಗಗಳಲ್ಲಿ ಲಿಪುಲೇಖ್ ಪಾಸ್, ಶಿಪ್ಕಿ ಲಾ ಪಾಸ್ ಮತ್ತು ನಾಥು ಲಾ ಪಾಸ್ ವ್ಯಾಪಾರ ಕೇಂದ್ರಗಳ ಮೂಲಕ ಗಡಿ ವ್ಯಾಪಾರವನ್ನು ಮರು ಆರಂಭಿಸಲು ಎರಡು ದೇಶವೂ ಸಮ್ಮತಿಸಿದೆ ಎಂದು ತಿಳಿಸಲಾಗಿತ್ತು.
ಲಿಪುಲೇಖ್ ಮೂಲಕ ಗಡಿ ವ್ಯಾಪಾರವನ್ನು ಪುನಾರಂಭಿಸುವುದಾಗಿ ಭಾರತ ಮತ್ತು ಚೀನಾ ಘೋಷಿಸಿದ ಬೆನ್ನಲ್ಲೇ ನೇಪಾಳ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿತ್ತು.
ಮಹಾಕಾಳಿ ನದಿಯ ಪೂರ್ವ ಭಾಗದಲ್ಲಿರುವ ಲೆಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ನೇಪಾಳದ ಭಾಗವಾಗಿದ್ದು, ನಮ್ಮ ಅಧಿಕೃತ ಭೂಪಟ ಮತ್ತು ಸಂವಿಧಾನದಲ್ಲಿಯೂ ಇದೆ. ಈ ಪ್ರದೇಶದಲ್ಲಿ ಭಾರತವು ರಸ್ತೆ ನಿರ್ಮಿಸುವುದು, ಗಡಿ ವಿಸ್ತರಣೆ, ಗಡಿ ವ್ಯಾಪಾರ ನಡೆಸಬಾರದು. ಈ ಪ್ರದೇಶಗಳು ನೇಪಾಳದ ಭಾಗವಾಗಿದೆ ಎಂದು ಹೇಳಿತ್ತು. ಇದೀಗ ನೇಪಾಳದ ಈ ಪ್ರತಿಕ್ರಿಯೆಯನ್ನು ಭಾರತ ನಿರಾಕರಿಸಿದ್ದು, ನ್ಯಾಯಸಮ್ಮತವಲ್ಲ ಎಂದು ಹೇಳಿದೆ.
2020ರಲ್ಲಿ, ಕಾಲಾಪಾನಿ, ಲಿಂಪಿಯಾಧೂರ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿ ನೇಪಾಳವು ಪರಿಷ್ಕೃತ ನಕಾಶೆಯನ್ನು ಬಿಡುಗಡೆ ಮಾಡುವ ಮೂಲಕ ಗಡಿ ವಿವಾದವನ್ನು ಹುಟ್ಟುಹಾಕಿತ್ತು. ಇದನ್ನು ಭಾರತ ಬಲವಾಗಿ ತಿರಸ್ಕರಿಸಿತ್ತು.