ನವದೆಹಲಿ: ಶುಕ್ರವಾರ ಬೆಳಿಗ್ಗೆ 20 ವರ್ಷದ ಯುವಕನೊಬ್ಬ ಸಂಸತ್ತಿನ ಗೋಡೆ ಏರಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ಎಂದು ಗುರುತಿಸಲಾದ ಆ ವ್ಯಕ್ತಿ ಉತ್ತರ ಪ್ರದೇಶದವನಾಗಿದ್ದು, 'ಮಾನಸಿಕ ಅಸ್ವಸ್ಥ' ಎಂದು ತೋರುತ್ತದೆ ಎಂದು ಅವರು ಹೇಳಿದರು.
'ಶುಕ್ರವಾರ ಬೆಳಿಗ್ಗೆ 5.50ರ ಸುಮಾರಿಗೆ ವ್ಯಕ್ತಿಯೊಬ್ಬ ಸಂಸತ್ತಿನ ಆವರಣ ಗೋಡೆಯನ್ನು ಏರಲು ಪ್ರಯತ್ನಿಸಿದನು. ಆದರೆ, ಎಚ್ಚರದಿಂದಿದ್ದ ಸಿಐಎಸ್ಎಫ್ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಆತನನ್ನು ತಕ್ಷಣವೇ ಬಂಧಿಸಿದರು' ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ದೇವೇಶ್ ಮಹ್ಲಾ ಹೇಳಿದರು.
'ಆತ ಅವನು ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಮತ್ತು ಹೆಚ್ಚಿನ ವಿಚಾರಣೆ ಮತ್ತು ಪರಿಶೀಲನೆ ನಡೆಯುತ್ತಿದೆ' ಎಂದು ಡಿಸಿಪಿ ಹೇಳಿದರು.
ಮೂಲಗಳು ಹೇಳುವಂತೆ, ಆತ ಗೋಡೆಯ ಪಕ್ಕದಲ್ಲಿರುವ ಮರವನ್ನು ಹತ್ತಿ, ಅಲ್ಲಿಂದ ಗೋಡೆಯನ್ನು ದಾಟಿ ಸಂಸತ್ತಿಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ.
ಗುಪ್ತಚರ ಬ್ಯೂರೋ (ಐಬಿ) ಮತ್ತು ದೆಹಲಿ ಪೊಲೀಸರ ವಿಶೇಷ ಘಟಕ ಸೇರಿದಂತೆ ಹಲವು ಕೇಂದ್ರ ತನಿಖಾ ಸಂಸ್ಥೆಗಳು ಆ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿವೆ.
'ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವನ ಉದ್ದೇಶ ಏನೆಂಬುದನ್ನು ನಿರ್ಧರಿಸಲು ಐಬಿ ಮತ್ತು ವಿಶೇಷ ಘಟಕದ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಈ ಘಟನೆಯು 2023ರ ಡಿಸೆಂಬರ್ 13 ರಂದು ನಡೆದಿದ್ದ ಭದ್ರತಾ ವೈಫಲ್ಯದ ಘಟನೆಯನ್ನು ನೆನಪಿಸಿದೆ. ಅಂದು ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಲ್ಲಿ ಲೋಕಸಭಾ ಕೊಠಡಿಯೊಳಗೆ ಹಳದಿ ಬಣ್ಣದ ಕಲರ್ ಬಾಂಬ್ ಎಸೆದಿದ್ದರು ಮತ್ತು ಇತರ ಇಬ್ಬರು ಸಂಸತ್ತಿನ ಹೊರಗಡೆಯೂ ಅದೇ ರೀತಿಯ ಕೃತ್ಯ ಎಸಗಿದ್ದರು.
2001ರ ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ವೇಳೆಯಲ್ಲೇ ಈ ಘಟನೆ ನಡೆಯಿತು ಮತ್ತು ಇದು ಭದ್ರತೆಯ ಕುರಿತಾದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತು.