ಪೂರ್ಣಿಯಾ(ಬಿಹಾರ): ಈ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮಹಾಘಟಬಂಧನ್ ನಡೆಸುತ್ತಿರುವ ಮತದಾರರ ಹಕ್ಕುಗಳ ಯಾತ್ರೆ ಎಂಟನೇ ದಿನವಾದ ಇಂದು ಪೂರ್ಣಿಯಾದ ಕತಿಹಾರ್ ತಿರುವಿನಿಂದ ಪ್ರಾರಂಭವಾಯಿತು. ಇನ್ನು ಯಾತ್ರೆ ವೇಳೆ ರಾಹುಲ್ ಗಾಂಧಿಯವರ ಭದ್ರತೆಯಲ್ಲಿ ಲೋಪ ಕಂಡುಬಂದಿದೆ.
ಯುವಕನೊರ್ವ ಇದ್ದಕ್ಕಿದ್ದಂತೆ ಭದ್ರತಾ ಕವಚವನ್ನು ದಾಟಿ ರಾಹುಲ್ ಗಾಂಧಿ (Rahul Gandhi) ಬಳಿ ಬಂದು ಅಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಯುವಕನನ್ನು ಹಿಡಿದು, ಆತನ ಕಪಾಳಕ್ಕೆ ಬಾರಿಸಿ ಅಲ್ಲಿಂದ ಕರೆದೊಯ್ದಿದ್ದಾರೆ. ರಾಹುಲ್ ಗಾಂಧಿ ಪ್ರಸ್ತುತ ಬಿಹಾರದಲ್ಲಿ 'ಮತ ಅಧಿಕಾರ ಯಾತ್ರೆ'ಯಲ್ಲಿದ್ದು ಈ ಘಟನೆ ಅವರ ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯಾತ್ರೆಯನ್ನು ಮುನ್ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಪ್ರಯಾಣದ ಸಮಯದಲ್ಲಿ ಬುಲೆಟ್ ಓಡಿಸಿದರು. ಬಿಹಾರ (Bihar) ಕಾಂಗ್ರೆಸ್ (Congress) ಅಧ್ಯಕ್ಷ ರಾಜೇಶ್ ರಾಮ್ ಬೈಕ್ ನ ಹಿಂಬದಿ ಕುಳಿತಿದ್ದರು. ಈ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಬೈಕ್ಗಳಲ್ಲಿ ಸವಾರಿ ಮಾಡಿದರು. ಈ ವೇಳೆ ಯುವಕನೋರ್ವ ಅಚಾನಕ್ ಆಗಿ ರಸ್ತೆ ಮಧ್ಯೆ ಬಂದು ರಾಹುಲ್ ಗಾಂಧಿಯನ್ನು ಅಪ್ಪಿಕೊಳ್ಳಲು ಯತ್ನಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೀಮಾಂಚಲ್ನ ಪೂರ್ಣಿಯಾದ ಬೀದಿಗಳಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಸಂಬಂಧಿಸಿದಂತೆ ಸಾಕಷ್ಟು ಉತ್ಸಾಹವಿತ್ತು. ಪ್ರಯಾಣದ ಎಂಟನೇ ದಿನವು ಬೈಕ್ನಲ್ಲಿ ಪ್ರಾರಂಭವಾಯಿತು. ಈ ಯಾತ್ರೆ ಖುಷ್ಕಿಬಾಗ್ನಿಂದ ಪ್ರಾರಂಭವಾಗಿ ಲೈನ್ ಬಜಾರ್, ಪಂಚಮುಖಿ ದೇವಸ್ಥಾನ, ರಾಂಬಾಗ್ ಮತ್ತು ನಗರ ಪ್ರದೇಶದ ಮೂಲಕ ಹಾದು ಕಸ್ಬಾ ಮತ್ತು ಅರಾರಿಯಾವನ್ನು ತಲುಪುತ್ತದೆ. ಯಾತ್ರೆಯ ಏಳನೇ ದಿನದ ಸಂಜೆ, ರಾಹುಲ್ ಗಾಂಧಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕತಿಹಾರ್ನ ಕಡ್ವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡರು.