ನವದೆಹಲಿ: ಸಂಸತ್ತು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪ ಆರಂಭವಾದ ಸ್ವಲ್ಪ ಸಮಯದಲ್ಲೇ ಲೋಕಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಇಂದು ಲೋಕಸಭೆ ಕಲಾಪ ಆರಂಭವಾದ ಸ್ವಲ್ಪ ಸಮಯದ ನಂತರ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಈ ಅಧಿವೇಶನದಲ್ಲಿ ಸದನವು ಶೇಕಡಾ 111 ರಷ್ಟು ಫಲಪ್ರದವಾಗಿತ್ತು ಎಂದು ಓಂ ಬಿರ್ಲಾ ಹೇಳಿದರು.
ಇನ್ನು ರಾಜ್ಯಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸಭಾಪತಿ ಸಿ ಪಿ ರಾಧಾಕೃಷ್ಣನ್ ಅವರು ಹೆಚ್ಚಿನ ಉತ್ಪಾದಕತೆ ಮತ್ತು ಫಲಪ್ರದ ಚರ್ಚೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಇದರೊಂದಿಗೆ 15 ದಿನಗಳ ಸಂಸತ್ ಚಳಿಗಾಲದ ಅಧಿವೇಶನಕ್ಕೆ ಅಧಿಕೃತ ತೆರೆ ಬಿದ್ದಿದೆ.
15 ದಿನಗಳ ಈ ಸಂಕ್ಷಿಪ್ತ ಅಧಿವೇಶನದಲ್ಲಿ, ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆಗಳ ಹೊರತಾಗಿಯೂ, ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025 ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು.
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ನರೇಗಾ ಯೋಜನೆ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಜಿ ರಾಮ್ ಜಿ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕಾರಿಸಲಾಯಿತು.
ಸದನವು 150 ವರ್ಷಗಳ ವಂದೇ ಮಾತರಂ ಮತ್ತು ಚುನಾವಣಾ ಸುಧಾರಣೆಗಳ ಕುರಿತು ಎರಡು ಚರ್ಚೆಗಳನ್ನು ಸಹ ಕೈಗೊಂಡಿತು - ಇದು ರಾಜಕೀಯವಾಗಿ ಉತ್ಸಾಹಭರಿತ ವಾತಾವರಣಕ್ಕೆ ಸಾಕ್ಷಿಯಾಯಿತು.
ಉನ್ನತ ಶಿಕ್ಷಣದ ನಿಯಂತ್ರಣ ಸಾಧಿಸುವ ಮಸೂದೆಯನ್ನು ಎರಡು ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಲಾಯಿತು.