ನವದೆಹಲಿ: ರಾಜಕಾರಣ ಅಪರಾಧೀಕರಣ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾದ ಸಂಸದರು, ಶಾಸಕರನ್ನು ಜೀವಮಾನ ಪೂರ್ತಿ ಚುನಾವಣೆಯಿಂದ ನಿಷೇಧ ಹೇರುವ ಕುರಿತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ದ್ವಿಸದಸ್ಯ ಪೀಠ ಈ ರೀತಿ ಹೇಳಿತು.
ಪ್ರಸ್ತುತ ಕಾನೂನಿನ ಪ್ರಕಾರ, ಶಿಕ್ಷೆಗೊಳಗಾದ ರಾಜಕಾರಣಿಗಳನ್ನು ಆರು ವರ್ಷಗಳ ಕಾಲ ಚುನಾವಣೆಯಿಂದ ನಿಷೇಧಿಸಲಾಗಿದೆ. ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಬಿಜೆಪಿ ನಾಯಕರೂ ಆಗಿರುವ ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಉಪಾಧ್ಯಾಯ ಅವರ ಮನವಿಯನ್ನು ಆಲಿಸಿದ ನ್ಯಾಯಪೀಠ, ವಿವರವಾದ ಉತ್ತರ ಸಲ್ಲಿಸಲು ಕೇಂದ್ರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಮಾರ್ಚ್ 4 ಕ್ಕೆ ನಿಗದಿಪಡಿಸಿತು.
ಈ ಪ್ರಕರಣದಲ್ಲಿ ಯೂನಿಯನ್ ಆಫ್ ಇಂಡಿಯಾ ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದರೆ, ನಂತರ ನ್ಯಾಯಾಲಯ ಸರ್ಕಾರದ ಪ್ರತಿಕ್ರಿಯೆಯಿಲ್ಲದೆ ವಿಷಯವನ್ನು ನಿರ್ಧರಿಸಲು ಮುಂದುವರಿಯಬಹುದು ಸ್ಪಷ್ಟಪಡಿಸಿದ ನ್ಯಾಯಾಲಯ, ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರಿಗೆ ಸೂಚಿಸಿತು.
ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ರಾಜಕಾರಣ ಅಪರಾಧೀಕರಣವು ಬಹಳ ಪ್ರಮುಖ ವಿಷಯವಾಗಿದೆ. ಆದ್ದರಿಂದ ಚುನಾವಣಾ ಆಯೋಗ ತನ್ನ ಮನಸು ಮಾಡಬೇಕು. ಉತ್ತಮ ಪರಿಹಾರದೊಂದಿಗೆ ಹೊರಬರಬೇಕು ಎಂದು ಇಸಿಐ ವಕೀಲ ಸಿದ್ದಾಂತ್ ಗೆ ಹೇಳಿದರು. ಖಂಡಿತವಾಗಿಯೂ ನ್ಯಾಯಪೀಠದ ಮುಂದೆ ಇಡುವುದಾಗಿ ಸಿದ್ಧಾಂತ್ ಪ್ರತಿಕ್ರಿಯಿಸಿದರು.
ಶಿಕ್ಷೆಗೊಳಗಾದ ವ್ಯಕ್ತಿಯು ಮಾನ್ಯತೆ ಪಡೆದ ರಾಜಕೀಯ ಪಕ್ಷದ ಪದಾಧಿಕಾರಿಯಾಗಬಹುದೇ ಎಂಬುದು ಪ್ರಶ್ನೆಯಾಗಿದೆ. ದುಃಖಕರವೆಂದರೆ, ಇಂದು ಕೊಲೆ ಮಾಡಿದ್ದರೂ ಅವರು ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ರಾಜಕೀಯ ಪಕ್ಷದ ಅಧ್ಯಕ್ಷರಾಗಬಹುದು. ಈ ಸಮಸ್ಯೆಗಳನ್ನು ನ್ಯಾಯಾಲಯವು ಪರಿಗಣಿಸಬೇಕು. ಅಪರಾಧಿಗಳು ಮತ್ತೆ ರಾಜಕೀಯಕ್ಕೆ ಬರುವುದನ್ನು ಬಗೆಹರಿಸಬೇಕು ಎಂದು ಉಪಾಧ್ಯಾಯ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ಹೇಳಿದರು.