ರಣವೀರ್ ಅಲ್ಹಾಬಾದಿಯಾ 
ದೇಶ

'ಮಾಧ್ಯಮಗಳ ಕಂಡರೆ ಭಯ.. ವಿಚಾರಣೆಗೆ ಬರಲಿಲ್ಲ': ಪೊಲೀಸರಿಗೆ Ranveer Allahbadia ಸ್ಪಷ್ಟನೆ; ಅತಿಥಿಗಳು, ನ್ಯಾಯಾಧೀಶರಿಗೂ ಸಂಕಷ್ಟ!

ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗಳ ಕುರಿತು ರಣವೀರ್ ಅಲ್ಹಾಬಾದಿಯಾ ವಿರುದ್ಧ ಸರಣಿ ಎಫ್ ಐಆರ್ ಗಳು ದಾಖಲಾಗಿದ್ದು, ಈ ಸಂಬಂಧ ಮುಂಬೈ ಪೊಲೀಸರು ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು.

ಮುಂಬೈ: ತಂದೆ-ತಾಯಿಯರ ಲೈಂಗಿಕ ಜೀವನದ ಕುರಿತು ಅಶ್ಲೀಲ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ವಿಚಾರಣೆಗೆ ಗೈರು ಹಾಜರಾದ ಖ್ಯಾತ ಇನ್ ಫ್ಲೆಯೆನ್ಸರ್ ರಣವೀರ್ ಅಲ್ಹಾಬಾದಿಯಾ (Ranveer Allahbadia) ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗಳ ಕುರಿತು ರಣವೀರ್ ಅಲ್ಹಾಬಾದಿಯಾ ವಿರುದ್ಧ ಸರಣಿ ಎಫ್ ಐಆರ್ ಗಳು ದಾಖಲಾಗಿದ್ದು, ಈ ಸಂಬಂಧ ಮುಂಬೈ ಪೊಲೀಸರು ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ರಣವೀರ್ ಅಲ್ಲಾಹಬಾಡಿಯಾ ವಿಚಾರಣೆಗೆ ಗೈರಾಗಿದ್ದರು.

ಇಂದು ತಮ್ಮ ಗೈರಿನ ಕುರಿತು ಸ್ಪಷ್ಟನೆ ನೀಡಿರುವ ರಣವೀರ್ ಅಲ್ಹಾಬಾದಿಯಾ ತಮಗೆ 'ಮಾಧ್ಯಮಗಳ ಕಂಡ್ರೆ ಭಯ.. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ.. ಹೀಗಾಗಿ ವಿಚಾರಣೆಗೆ ಬರಲಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಶುಕ್ರವಾರ ಮುಂದಿನ ವಿಚಾರಣೆಗೆ ಸಿದ್ಧತೆ ನಡೆಸಿದ್ದು, ಅಂದು ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದೇ ಪ್ರಕರಣದಲ್ಲಿ ಮುಂಬೈ ನಗರ ಪೊಲೀಸರು ಮತ್ತು ಮಹಾರಾಷ್ಟ್ರ ಸೈಬರ್ ಇಲಾಖೆಯು ವಿವಾದಾತ್ಮಕ ರಿಯಾಲಿಟಿ ಶೋ "ಇಂಡಿಯಾಸ್ ಗಾಟ್ ಲ್ಯಾಟೆಂಟ್" ನ ಭಾಗವಾಗಿದ್ದ ಹಾಸ್ಯನಟ ಸಮಯ್ ರೈನಾ ಅವರನ್ನು ಮುಂದಿನ ಐದು ದಿನಗಳಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ಗುರುವಾರ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾಗಿದ್ದ ಅಲ್ಹಾಬಾದಿಯಾ ಅವರು ಹಾಜರಾಗಲಿಲ್ಲ . ಮಾಧ್ಯಮಗಳಿಗೆ ಹೆದರುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದರು. ಅಂತೆಯೇ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಶುಕ್ರವಾರ ಬರಬೇಕು ಎಂದು ಅವರಿಗೆ ಸ್ಪಷ್ಟಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶಾದ್ಯಂತ ವ್ಯಾಪಕ ಆಕ್ರೋಶ

ದೇಶಾದ್ಯಂತ ಹೆಚ್ಚಿನ ಆಕ್ರೋಶಕ್ಕೆ ಕಾರಣವಾಗಿರುವ ಅಲ್ಹಾಬಾದಿಯಾ ಅವರ "ಅಶ್ಲೀಲ ಮತ್ತು ಅಸಭ್ಯ" ಹೇಳಿಕೆಗಳ ಬಗ್ಗೆ ಸೈಬರ್ ಸೆಲ್ ಮತ್ತು ಮುಂಬೈ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಸಮಯ್ ರೈನಾ ಪ್ರಸ್ತುತ ಅಮೆರಿಕದಲ್ಲಿದ್ದಾರೆ ಮತ್ತು ಅಧಿಕಾರಿಗಳ ಮುಂದೆ ಹಾಜರಾಗಲು ಸಮಯ ಕೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 17 ರ ಮೊದಲು ಅವರ ಹೇಳಿಕೆಯನ್ನು ದಾಖಲಿಸುವಂತೆ ಮುಂಬೈ ಪೊಲೀಸರು ಸೂಚಿಸಿದ್ದಾರೆ, ಆದರೆ ರಾಜ್ಯ ಸೈಬರ್ ಇಲಾಖೆ ಫೆಬ್ರವರಿ 18 ರಂದು ಅವರನ್ನು ಸಮನ್ಸ್ ಮಾಡಿದೆ ಎಂದು ಅವರು ಹೇಳಿದರು.

ಅಲ್ಹಾಬಾದಿಯಾ ಮತ್ತು ಇತರ ನಾಲ್ವರ ವಿರುದ್ಧ ಗುವಾಹಟಿಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಅಸ್ಸಾಂ ಪೊಲೀಸ್ ತಂಡ ಗುರುವಾರ ಮಹಾರಾಷ್ಟ್ರ ಸೈಬರ್ ಸೆಲ್ ಅಧಿಕಾರಿಗಳನ್ನು ಭೇಟಿ ಮಾಡಿದೆ.

ಬಿಜೆಪಿ ಕಾರ್ಯಕರ್ತರೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಮುಂಬೈ ಪೊಲೀಸರು (ಖಾರ್ ಪೊಲೀಸ್ ಠಾಣೆ) ಇದುವರೆಗೆ ಸಾಮಾಜಿಕ ಮಾಧ್ಯಮ ಪ್ರಭಾವಿ ಅಪೂರ್ವ ಮಖಿಜಾ, ಯೂಟ್ಯೂಬ್ ಕಾರ್ಯಕ್ರಮದ ಭಾಗವಹಿಸುವವರಲ್ಲಿ ಒಬ್ಬರೆಂದು ಏಳು ಜನರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಆದರೆ ಅವರ ವಿರುದ್ಧ ಇನ್ನೂ ಯಾವುದೇ ಎಫ್‌ಐಆರ್ ದಾಖಲಿಸಿಲ್ಲ.

ಅತಿಥಿಗಳು. ನ್ಯಾಯಾಧೀಶರಿಗೂ ಸಂಕಷ್ಟ

ಅಲ್ಹಾಬಾದಿಯಾ ಅವರ ಹೇಳಿಕೆಗಳ ಕುರಿತು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯ ತನಿಖೆಗೆ ಸೇರಿಸುವಂತೆ ರಾಜ್ಯ ಸೈಬರ್ ಇಲಾಖೆ ಅಲ್ಲಾಬಾಡಿಯಾ ಮತ್ತು ರೈನಾ ಸೇರಿದಂತೆ 40 ಕ್ಕೂ ಹೆಚ್ಚು ಜನರಿಗೆ ಸಮನ್ಸ್ ಜಾರಿ ಮಾಡಿದೆ.

ಮಂಗಳವಾರ, "ಇಂಡಿಯಾಸ್ ಗಾಟ್ ಲೇಟೆಂಟ್" ನ ಹಿಂದಿನ ಕಂತುಗಳಲ್ಲಿ ಭಾಗವಹಿಸಿದ್ದ "ಅತಿಥಿಗಳು" ಮತ್ತು "ನ್ಯಾಯಾಧೀಶರು" ಗೆ ನೋಟಿಸ್ ನೀಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 16 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಲ್ಹಾಬಾದಿಯಾ, ಪೋಷಕರು ಮತ್ತು ಲೈಂಗಿಕತೆಯ ಕುರಿತು ಅವರ ವಿವಾದಾತ್ಮಕ ಹೇಳಿಕೆಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ರಣ್ವೀರ್ ಅಲ್ಹಾಬಾದಿಯಾ ಕ್ಷಮೆಯಾಚಿಸಿದ್ದರು. ಆದರೂ ಅವರ ವಿರುದ್ದದ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ.

ಸಂಸತ್ ನಲ್ಲೂ ಚರ್ಚೆ

ಇನ್ನು ಇದೇ ವಿಚಾರ ಇಂದು ಸಂಸತ್ ಅಧಿವೇಶನದಲ್ಲೂ ಚರ್ಚೆಯಾಗಿದ್ದು, ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ ಶಿವಸೇನಾ ಸಂಸದ ನರೇಶ್ ಮಾಸ್ಕೆ ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT