ನವದೆಹಲಿ: ಜನ ನೋಟುಗಳನ್ನು ಇಷ್ಟಪಡುವುದರಿಂದ 50 ರೂ. ನಾಣ್ಯವನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಅಂಧ ವ್ಯಕ್ತಿಗಳು ಸುಲಭವಾಗಿ ಗುರುತಿಸಬಹುದಾದ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ತಯಾರಿಸಲು ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅನೀಶ್ ದಯಾಳ್ ಅವರ ವಿಭಾಗೀಯ ಪೀಠವು ಇಂದು ರಿಜಿಸ್ಟ್ರಿಯಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಿದ್ದರೂ, ಅದು ದಾಖಲೆಯಲ್ಲಿಲ್ಲ ಎಂದು ಗಮನಿಸಿತು.
"ಅದನ್ನು ದಾಖಲೆಯಲ್ಲಿ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಹೇಳಿ ಹೈಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.
ನಾಣ್ಯ ಮತ್ತು ಕರೆನ್ಸಿ ವಿಭಾಗದ ಅಧೀನ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್ನಲ್ಲಿ, "ಭಾರತೀಯ ರಿಸರ್ವ್ ಬ್ಯಾಂಕ್ 2022 ರಲ್ಲಿ ಚಲಾವಣೆಯಲ್ಲಿರುವ ಅಸ್ತಿತ್ವದಲ್ಲಿರುವ ನಾಣ್ಯಗಳು ಮತ್ತು ಬ್ಯಾಂಕ್ನೋಟುಗಳ ಬಳಕೆಯ ಮಾದರಿಗಳನ್ನು ವಿಶ್ಲೇಷಿಸಲು ಸಮೀಕ್ಷೆ ನಡೆಸಿತು. ಈ ವೇಳೆ ಜನ 10 ರೂ. ಮತ್ತು 20 ರೂ. ಮುಖಬೆಲೆಯ ನಾಣ್ಯಗಳಿಗಿಂತ ಬ್ಯಾಂಕ್ನೋಟುಗಳಿಗೆ ಆದ್ಯತೆ ನೀಡುತ್ತಿರುವುದನ್ನು ಬಹಿರಂಗಪಡಿಸಿದೆ" ಎಂದು ಹೇಳಲಾಗಿದೆ.
ಅರ್ಜಿದಾರರಾದ ರೋಹಿತ್ ದಾಂಡ್ರಿಯಲ್, ಕರೆನ್ಸಿ ನೋಟುಗಳ ವಿನ್ಯಾಸದಿಂದಾಗಿ ಅಂಧ ನಾಗರಿಕರು ಎದುರಿಸುತ್ತಿರುವ ಸಂಕಷ್ಟ ಮತ್ತು ಅಸಮಾನತೆಗಳ ಕುರಿತು ಅಧ್ಯಯನ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ವಿಭಿನ್ನ ಮೌಲ್ಯಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಅವರಿಗೆ ಕಷ್ಟಕರವಾಗುತ್ತಿದೆ ಎಂದು ಹೇಳಿದ್ದಾರೆ.
ಅಂಧರು ಸೇರಿದಂತೆ ಎಲ್ಲರಿಗೂ ನಾಣ್ಯಗಳ ಲಭ್ಯತೆ ಮತ್ತು ಗುರುತಿಸುವಿಕೆಯ ಸುಲಭತೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರ ಮಾರ್ಚ್ 2019 ರಲ್ಲಿ ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿ ಹಾಗೂ ಇಪ್ಪತ್ತು ರೂಪಾಯಿಗಳ ಮುಖಬೆಲೆಯ ನಾಣ್ಯಗಳ ಹೊಸ ಸರಣಿಯನ್ನು ಪರಿಚಯಿಸಿತು. ಇವುಗಳನ್ನು ಕುರುಡರು ಸುಲಭವಾಗಿ ಗುರುತಿಸುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.
“50 ರೂ. ನಾಣ್ಯವನ್ನು ಪರಿಚಯಿಸುವ ಕಾರ್ಯಸಾಧ್ಯತೆಗೆ ಸಂಬಂಧಿಸಿದಂತೆ, ಅಸ್ತಿತ್ವದಲ್ಲಿರುವ ನಾಣ್ಯಗಳು ಮತ್ತು ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬಳಕೆಯ ಮಾದರಿಗಳನ್ನು ವಿಶ್ಲೇಷಿಸಲು ಆರ್ಬಿಐ 2022 ರಲ್ಲಿ ಒಂದು ಸಮೀಕ್ಷೆಯನ್ನು ನಡೆಸಿತು. ಈ ಸಂಶೋಧನೆಯಲ್ಲಿ ಜನ 10 ರೂ ಮತ್ತು ರೂ. 20 ಮುಖಬೆಲೆಯ ನಾಣ್ಯಗಳಿಗಿಂತ ಬ್ಯಾಂಕ್ ನೋಟುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ" ಎಂದು ಸರ್ಕಾರ ಹೇಳಿದೆ.