ಲಖನೌ: ಭಾರತೀಯ ಸೈನಿಕರ ಟೀಕೆ ಹಿನ್ನೆಲೆಯಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಲಖನೌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾದ ನಂತರ ಜಾಮೀನು ಮಂಜೂರು ಮಾಡಲಾಗಿದೆ.
2022 ರಲ್ಲಿ ಅವರ ಭಾರತ್ ಜೋಡೋ ಯಾತ್ರೆ ವೇಳೆ ಭಾರತೀಯ ಸೈನಿಕರ ವಿರುದ್ಧ ಮಾಡಿದ ಮಾನಹಾನಿಕರ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ರಾಹುಲ್ ಪರ ವಕೀಲ ಪ್ರಾಂಶು ಅಗರ್ವಾಲ್ ಹೇಳಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ರಾಹುಲ್ ಗಾಂಧಿ ಅವರು ಜಾಮೀನು ಬಾಂಡ್ ಮತ್ತು ಶ್ಯೂರಿಟಿಗಳನ್ನು ಒದಗಿಸಿದ ನಂತರ ಜಾಮೀನು ನೀಡಲಾಯಿತು ಎಂದು ಅವರು ತಿಳಿಸಿದರು.
ವಕೀಲರಿಂದ ತುಂಬಿದ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಹಾಜರಾದರು. ಅವರನ್ನು ನ್ಯಾಯಾಧೀಶರ ಚೆಂಬರ್ ಗೆ ಕರೆದೊಯ್ಯಲಾಯಿತು, ಅಲ್ಲಿ ಬಾಂಡ್ ಮತ್ತು ಶ್ಯೂರಿಟಿ ಸಲ್ಲಿಸುವ ಔಪಚಾರಿಕ ಪ್ರಕ್ರಿಯೆಗಳು ನಡೆದವು.
ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯವು ವಿಚಾರಣೆಗೆ ತೆಗೆದುಕೊಂಡ ನಂತರ ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿತ್ತು. ಜಾಮೀನು ಕೋರಿ ಅವರು ಈ ಹಿಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಆದರೆ ಯಶಸ್ವಿಯಾಗಿರಲಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರೈ ಮತ್ತು ಉಸ್ತುವಾರಿ ಅವಿನಾಶ್ ಪಾಂಡೆ ಅವರೊಂದಿಗೆ ಅವರು ನ್ಯಾಯಾಲಯಕ್ಕೆ ಬಂದರು. ಹೀಗಾಗಿ ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿತ್ತು.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ನ ನಿವೃತ್ತ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ರಾಹುಲ್ ವಿರುದ್ಧ ಮಾನನಷ್ಟ ದೂರು ದಾಖಲಿಸಿದ್ದಾರೆ.
ಡಿಸೆಂಬರ್ 16, 2022 ರಂದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ವಿವಿಧ ಮಾಧ್ಯಮ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಗಾಂಧಿ, ಡಿಸೆಂಬರ್ 9, 2022 ರಂದು ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೇನೆಯ ನಡುವಿನ ಘರ್ಷಣೆಯನ್ನು ಪ್ರಸ್ತಾಪಿಸಿದ್ದರು.
ಭಾರತೀಯ ಸೈನಿಕರನ್ನು ಚೀನಾ ಸೈನಿಕರು ಥಳಿಸಿದ ಆರೋಪದ ಬಗ್ಗೆ ಗಾಂಧಿ ನೀಡಿದ ಹೇಳಿಕೆಯಿಂದ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರರು ಆರೋಪಿಸಿದ್ದರು. ಮಾನನಷ್ಟ ಆರೋಪಕ್ಕೆ ಸಂಬಂಧಿಸಿದಂತೆ ಫೆಬ್ರವರಿ 11 ರಂದು, ವಿಶೇಷ ನ್ಯಾಯಾಲಯವು ಮೇಲೆ ಗಾಂಧಿಯವರಿಗೆ ಸಮನ್ಸ್ ನೀಡಿತ್ತು.