ಹಸಿನ್ ಜಹಾನ್ 
ದೇಶ

ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್; ಸಂಕಷ್ಟದಲ್ಲಿ ಸಿಲುಕಿದ ಮೊಹಮ್ಮದ್ ಶಮಿ ಮಾಜಿ ಪತ್ನಿ!

ವಿವಾದಿತ ಜಮೀನಿನ ವಿಚಾರದಲ್ಲಿ ಹಸಿನ್ ಮತ್ತು ಅವರ ಮಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಾಲಿಯಾ ಆರೋಪಿಸಿದ್ದಾರೆ.

ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಮೊಹಮ್ಮದ್ ಶಮಿಯವರ ಮಾಜಿ ಪತ್ನಿ ಹಸಿನ್ ಜಹಾನ್ ಮತ್ತು ಅವರ ಮಗಳಿಗೆ ಕಾನೂನು ತೊಡಕು ಉಂಟಾಗಿದೆ. ವರದಿಯ ಪ್ರಕಾರ, ಕೊಲೆ ಯತ್ನ, ಕ್ರಿಮಿನಲ್ ಪಿತೂರಿ ಮತ್ತು ಹಲ್ಲೆ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿ ಹಸೀನ್ ಮತ್ತು ಅವರ ಪುತ್ರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸೂರಿಯ ವಾರ್ಡ್ ಸಂಖ್ಯೆ 5 ರಲ್ಲಿ ಈ ಘಟನೆ ನಡೆದಿದ್ದು, ಹಸಿನ್ ಅವರ ನೆರೆಮನೆಯವರಾದ ದಾಲಿಯಾ ಖಾತುನ್ ಎಂಬುವವರು ಔಪಚಾರಿಕ ದೂರು ದಾಖಲಿಸಿದ್ದಾರೆ.

ವಿವಾದಿತ ಜಮೀನಿನ ವಿಚಾರದಲ್ಲಿ ಹಸಿನ್ ಮತ್ತು ಅವರ ಮಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಾಲಿಯಾ ಆರೋಪಿಸಿದ್ದಾರೆ. ದೂರಿನ ಪ್ರಕಾರ, ಹಸಿನ್ ತಮ್ಮ ಮಗಳು ಅರ್ಶಿ ಹೆಸರಿನಲ್ಲಿ ನೋಂದಾಯಿಸಲಾದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ದಾಲಿಯಾ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದಾಗ ಘರ್ಷಣೆ ನಡೆದಿದ್ದು, ಹಲ್ಲೆ ನಡೆಸಲಾಗಿದೆ.

ಸೆರೆಯಾಗಿರುವ ವಿಡಿಯೋದಲ್ಲಿ ಹಸಿನ್ ಕಪ್ಪು ಟಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರೆ, ಡಾಲಿಯಾ ಮ್ಯಾಕ್ಸಿ ಮತ್ತು ದುಪಟ್ಟಾ ಧರಿಸಿದ್ದಾರೆ. ವಿಡಿಯೋದಲ್ಲಿ ಇಬ್ಬರು ಜಗಳದಲ್ಲಿ ತೊಡಗಿರುವುದು ಕಂಡುಬಂದಿದೆ. ಹಸಿನ್ ಮತ್ತು ಅವರ ಮಗಳು ತಮ್ಮನ್ನು ಹೊಡೆದಿದ್ದಾರೆ ಎಂದು ದಾಲಿಯಾ ಆರೋಪಿಸಿದ್ದಾರೆ.

ಕೊಲೆ ಯತ್ನ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಹಸಿನ್ ಮತ್ತು ಅರ್ಷಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ದೃಢಪಡಿಸಿದ್ದಾರೆ. ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲವಾದರೂ, ಅಧಿಕಾರಿಗಳು ಪೂರ್ಣ ಪ್ರಮಾಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಭೂಮಿಯ ಮಾಲೀಕತ್ವವು ವಿವಾದಾಸ್ಪದವಾಗಿಯೇ ಉಳಿದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಹಸಿನ್ ತಮ್ಮ ಹಕ್ಕನ್ನು ಬೆಂಬಲಿಸುವ ದೃಢವಾದ ಪುರಾವೆಗಳನ್ನು ಪ್ರಸ್ತುತಪಡಿಸಲು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ. ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದರೆ, ಈ ವಿಷಯವು ದೀರ್ಘಕಾಲದ ಕಾನೂನು ವಿವಾದವಾಗಿ ಬದಲಾಗಬಹುದು.

ಹಸಿನ್ ಜಹಾನ್ ಈಗಾಗಲೇ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ದೀರ್ಘಕಾಲದ ಕಾನೂನು ಹೋರಾಟದಲ್ಲಿ ಸಿಲುಕಿರುವ ಸಮಯದಲ್ಲಿ ಈ ಹೊಸ ವಿವಾದ ಭುಗಿಲೆದ್ದಿದೆ.

ವಿಚ್ಛೇದನ ಪ್ರಕರಣದ ಭಾಗವಾಗಿ ಶಮಿ ಮತ್ತು ಅವರ ಮಗಳು ಆಯಿರಾ ಅವರಿಗೆ ತಿಂಗಳಿಗೆ 4 ಲಕ್ಷ ರೂ.ಗಳನ್ನು ಪಾವತಿಸಬೇಕೆಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ಮಾಜಿ ಮಾಡೆಲ್ ಆಗಿರುವ ಜಹಾನ್, ಶಮಿ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿದ ನಂತರ ದಂಪತಿಗಳ ನಾಲ್ಕು ವರ್ಷಗಳ ದಾಂಪತ್ಯ 2018 ರಲ್ಲಿ ಕೊನೆಗೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT