ನವದೆಹಲಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಪುಸ್ತಕ 'ಹಾರ್ಟ್ ಲ್ಯಾಂಪ್' 1990 ರಿಂದ 2023 ರವರೆಗೆ ಬರೆದ 12 ಸಣ್ಣ ಕಥೆಗಳ ಸಂಗ್ರಹವಾಗಿದೆ. ಈ ಅವಧಿಯಲ್ಲಿ ಮಹಿಳೆಯರು ಹೆಚ್ಚು ಸ್ವತಂತ್ರರಾಗಿದ್ದರು. ಆದರೆ, ಅದೇ ವೇಳೆ ಪಿತೃಪ್ರಭುತ್ವವು ಸಹ ಗಟ್ಟಿಯಾಗಿ ಬೇರೂರಿತ್ತು ಎಂದು ಲೇಖಕಿ ಬಾನು ಮುಷ್ತಾಕ್ ತಿಳಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹಿಳೆಯರು ಉನ್ನತ ವ್ಯಾಸಂಗಕ್ಕೆ ಹೋಗಿ ಉದ್ಯೋಗ ಪಡೆಯುತ್ತಿರುವ ಈ ಸಮಯದಲ್ಲಿಯೂ, ಇತರ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಕೊಲ್ಲಲಾಗುತ್ತಿದೆ ಎಂದು ಹೇಳಿದರು.
'ಪಿತೃಪ್ರಭುತ್ವ ಬದಲಾಗಿದೆ ಮತ್ತು ಮಹಿಳೆಯರ ಸ್ಥಾನಮಾನವೂ ಬದಲಾಗಿದೆ. ಮಹಿಳೆಯರು ಉನ್ನತ ವ್ಯಾಸಂಗಕ್ಕೆ, ಉತ್ತಮ ಉದ್ಯೋಗಗಳಿಗೆ ಹೋಗುತ್ತಿದ್ದಾರೆ ಮತ್ತು ಅವರು ವಿಶ್ವದ ಕೆಲವು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಅದೇ ಸಮಯದಲ್ಲಿ ಪಿತೃಪ್ರಭುತ್ವವು ಕೂಡ ಗಟ್ಟಿಯಾಗಿದೆ' ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹೇಳಿದರು.
'ಹಾರ್ಟ್ ಲ್ಯಾಂಪ್' ಅನ್ನು ಕನ್ನಡದಿಂದ ಇಂಗ್ಲೀಷ್ಗೆ ದೀಪಾ ಭಸ್ತಿ ಅನುವಾದಿಸಿದ್ದಾರೆ. ಇದು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿನ ಮಹಿಳೆಯರು ಮತ್ತು ಹುಡುಗಿಯರ ದೈನಂದಿನ ಜೀವನದ ಕುರಿತು ಹೇಳುತ್ತದೆ. ಇದು ಸಂತಾನೋತ್ಪತ್ತಿ ಹಕ್ಕುಗಳನ್ನು ಹೆಚ್ಚಾಗಿ ಶೋಷಿಸುವ, ಅಧಿಕಾರದ ನಿಯಂತ್ರಣವನ್ನು ಪುರುಷರು ಹೊಂದಿರುವ ಮತ್ತು ಮಹಿಳೆಯರ ಸ್ವಾಯತ್ತತೆಯನ್ನು ಸಹಿಸದ ಸಾಂಪ್ರದಾಯಿಕ ಸಮಾಜದ ದೈನಂದಿನ ದಬ್ಬಾಳಿಕೆಯನ್ನು ಒಳಗೊಂಡಿದೆ.
'ನಾವು ದಿನನಿತ್ಯ ಖಾಪ್ ಪಂಚಾಯತ್ಗಳ ನಿರ್ಧಾರಗಳನ್ನು ನೋಡುತ್ತಿದ್ದೇವೆ. ತಂದೆ ತನ್ನ ಮಗಳನ್ನು ಕೊಲ್ಲುವುದನ್ನು, ಮುಸ್ಲಿಂ ಹುಡುಗಿ ಹಿಂದೂ ಹುಡುಗನನ್ನು ಮದುವೆಯಾಗಲು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಕೊಲೆಯಾಗುವುದನ್ನು ಅಥವಾ ಹಿಂದೂ ಹುಡುಗಿ ಮುಸ್ಲಿಂ ಹುಡುಗನನ್ನು ಮದುವೆಯಾದ ಕಾರಣಕ್ಕಾಗಿ ಕೊಲೆಯಾಗುವುದನ್ನು ನಾವು ನೋಡುತ್ತಿದ್ದೇವೆ. ಈ ಪಿತೃಪ್ರಭುತ್ವದಿಂದಾಗಿ ಮಹಿಳೆಯರ ಮೇಲೆ ಎಲ್ಲ ರೀತಿಯ ಹಿಂಸಾಚಾರಗಳು ನಡೆಯುತ್ತಿವೆ. ಎರಡೂ ವಿಷಯಗಳು ಒಂದೇ ಸಮಯದಲ್ಲಿ ನಡೆಯುತ್ತಿವೆ. ಅವಳು ವಿಮೋಚನೆ ಹೊಂದಿದ್ದಾಳೆ, ವಿದ್ಯಾವಂತಳಾಗಿದ್ದಾಳೆ ಮತ್ತು ನಿರ್ಧಾರಗಳನ್ನು ಅವಳೇ ತೆಗೆದುಕೊಳ್ಳಬಹುದು. ಆದರೆ, ಅದೇ ಸಮಯದಲ್ಲಿ ಪಿತೃಪ್ರಭುತ್ವವು ಮಹಿಳೆಯರಿಗೆ ತುಂಬಾ ಕಷ್ಟವನ್ನು ನೀಡುತ್ತಿದೆ' ಎಂದು 77 ವರ್ಷದ ಅವರು ಹೇಳಿದರು.
ಮುಷ್ತಾಕ್ ಅವರೊಂದಿಗೆ ಭಸ್ತಿ ಕೂಡ ಸಂವಾದದಲ್ಲಿ ಭಾಗವಹಿಸಿದರು. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಮಹಿಳೆಯರಿಗೆ ಹೋಲಿಸಿದರೆ, ಹೆಚ್ಚು ಸವಲತ್ತು (ಉದಾ. ಶ್ರೀಮಂತ ಅಥವಾ ಸಾಮಾಜಿಕವಾಗಿ ಹೆಚ್ಚು ಅನುಕೂಲಸ್ಥ ವರ್ಗ) ಪಡೆದ ಹಿನ್ನೆಲೆಯಿಂದ ಬಂದ ಮಹಿಳೆಯರು ಸಾಮಾನ್ಯವಾಗಿ ಕಡಿಮೆ ಅಡೆತಡೆಗಳನ್ನು ಎದುರಿಸುತ್ತಾರೆ ಎಂದು ಹೇಳಿದರು.
'ಹಲವು ವಿಭಿನ್ನ ರೀತಿಯಲ್ಲಿ ವಿಷಯಗಳು ಸುಧಾರಿಸಿವೆ ಎಂಬುದು ಖಚಿತ. ಆದರೆ, ಯಾವ ರೀತಿಯ ಮಹಿಳೆಯರಿಗಾಗಿ ವಿಷಯಗಳು ಸುಧಾರಿಸಿವೆ ಎಂಬುದನ್ನು ನಾವು ಗಮನಿಸುವುದು ಸಹ ಮುಖ್ಯವಾಗಿದೆ ಮತ್ತು ಅದು ಮೇಲ್ಜಾತಿ, ಆರ್ಥಿಕವಾಗಿ ಸಬಲ, ಸಾಮಾಜಿಕವಾಗಿ ಉನ್ನತವಾಗಿರುವ ವರ್ಗಗಳ ಮಹಿಳೆಯರ ವಿಚಾರದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ, ಧಾರ್ಮಿಕ ಅಲ್ಪಸಂಖ್ಯಾತರು, ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಇತರ ವರ್ಗಗಳಿಂದ ಬಂದವರಿಗಿಂತ ಸವಲತ್ತು ಪಡೆದ ಹಿನ್ನೆಲೆಯಿಂದ ಬಂದಿರುವ ನಮಗೆ ಇದು ಸುಲಭವಾಗಿದೆ' ಎಂದು ಹೇಳಿದರು.
ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರ ಹತ್ಯೆಯ ಉದಾಹರಣೆಯನ್ನು ನೀಡಿದ ಭಾಸ್ತಿ, 'ಹಲವು ವಿಷಯಗಳು ಬದಲಾಗಿವೆ' ಎಂದು ತನಗೆ ಅನಿಸುತ್ತಿಲ್ಲ ಎಂದು ಹೇಳಿದರು.
ಬಾನು ಹೇಳಿದಂತೆ, ಹಲವು ವಿಧಗಳಲ್ಲಿ ವಿಷಯಗಳು ಸುಲಭವಾಗಿವೆ. ಆದರೆ, ಪಿತೃಪ್ರಭುತ್ವ ಗಟ್ಟಿಯಾಗಿದೆ ಮತ್ತು ಪಿತೃಪ್ರಭುತ್ವವು ರಾಜಕೀಯವಾಗಿದೆ. ಕುಟುಂಬವು ಕೂಡ ನಮ್ಮ ದೈನಂದಿನ ಜೀವನದಲ್ಲಿ ನಾವು ಕಂಡುಕೊಳ್ಳಬಹುದಾದ ರಾಜಕೀಯ ಘಟಕವಾಗಿದೆ. ಟೆನಿಸ್ ಅಕಾಡೆಮಿಯಲ್ಲಿ ಸಂಪಾದಿಸುವುದಕ್ಕಾಗಿ ತನ್ನ ಮಗಳನ್ನು ಕೊಲೆ ಮಾಡುವ ತಂದೆಯನ್ನು ನೀವು ಹೊಂದಿದ್ದರೆ, ಅದು ಹೆಚ್ಚು ರೋಮಾಂಚಕ ಭವಿಷ್ಯವಾಗಲಿದೆ ಎಂದು ಹೇಳುವುದು ತುಂಬಾ ಕಷ್ಟ ಎಂದು ನಿಮಗೆ ತಿಳಿದಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬದಲಾಗಿರುವ ಅನೇಕ ವಿಷಯಗಳನ್ನು ನಾನು ಕಾಣುತ್ತಿಲ್ಲ' ಎಂದು ಅವರು ಹೇಳಿದರು.