"ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ!" ಎಂದು ಸ್ಪೇಸ್ಎಕ್ಸ್ನ ಕ್ರೂಡ್ರಾಗನ್ನಲ್ಲಿ ಉಡಾವಣೆಯಾದ ಸುಮಾರು 10 ನಿಮಿಷಗಳ ನಂತರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ದೇಶವಾಸಿಗಳನ್ನುದ್ದೇಶಿಸಿ ಸಂದೇಶ ಕಳುಹಿಸಿದ್ದಾರೆ.
"ನಾವು 41 ವರ್ಷಗಳ ನಂತರ ಬಾಹ್ಯಾಕಾಶ ತಲುಪಿದ್ದೇವೆ. ನಾವು ಸೆಕೆಂಡಿಗೆ ಸುಮಾರು 7.5 ಕಿಮೀನಷ್ಟು ಭೂಮಿಯ ಸುತ್ತ ಸುತ್ತುತ್ತಿದ್ದೇವೆ. ನನ್ನ ಭುಜದ ಮೇಲೆ ಭಾರತೀಯ ತ್ರಿವರ್ಣವಿದೆ. ನಾನು ಈ ಪಯಣದಲ್ಲಿ ನಿಮ್ಮೆಲ್ಲರೊಂದಿಗಿದ್ದೇನೆ ಇದು ಐಎಸ್ಎಸ್ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ, ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಯುಗದ ಆರಂಭವೂ ಆಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ, ನಾವು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮವನ್ನು ಒಟ್ಟಿಗೆ ಪ್ರಾರಂಭಿಸೋಣ." ಎಂದು ಹೇಳಿದ್ದಾರೆ.
ಶುಭಾಂಶು ಶುಕ್ಲಾ ಅವರು ಆಕ್ಸಿಯಮ್-4 ಮಿಷನ್ನಲ್ಲಿ ಪೈಲಟ್ ಆಗಿ ಪ್ರಯಾಣಿಸಿದ್ದಾರೆ. ಬಾಹ್ಯಾಕಾಶಕ್ಕೆ ಹಾರಾಟ ನಡೆಸಿದ ಎರಡನೇ ಭಾರತೀಯ ಶುಭಾಂಶು ಶುಕ್ಲಾ ಆಗಿದ್ದಾರೆ. 1984 ರಲ್ಲಿ ರಾಕೇಶ್ ಶರ್ಮಾ ಅವರ ಹಾರಾಟದ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಹೆಗ್ಗಳಿಕೆ ಶುಕ್ಲಾ ಅವರದ್ದು.
ಆಕ್ಸಿಯಮ್-4 ಮಿಷನ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 12:01 ಕ್ಕೆ ಐಎಸ್ಎಸ್ ಕಡೆಗೆ ಹಾರಿತು, ಉತ್ತರ ಪ್ರದೇಶದ ಲಕ್ನೊ ಮೂಲದ ಶುಭಾಂಶು ಶುಕ್ಲಾ ಪೋಷಕರು ಹರ್ಷೋದ್ಗಾರಗಳ ನಡುವೆ ಐತಿಹಾಸಿಕ ಉಡಾವಣೆಗೆ ಸಾಕ್ಷಿಯಾದರು.
ಲಕ್ನೋದಲ್ಲಿ ಜನಿಸಿದ ಶುಕ್ಲಾ, ನಾಸಾದ ಮಾಜಿ ಗಗನಯಾತ್ರಿ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಮೂರು ರಾಷ್ಟ್ರಗಳಿಗೆ ಬಾಹ್ಯಾಕಾಶಕ್ಕೆ ಮರಳುವಿಕೆಯನ್ನು ಸೂಚಿಸುವ ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿದ್ದಾರೆ. ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ಗಗನಯಾತ್ರಿಯಾದರು, 1984 ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಸಲ್ಯುಟ್ -7 ಬಾಹ್ಯಾಕಾಶ ನಿಲ್ದಾಣದ ಭಾಗವಾಗಿ ರಾಕೇಶ್ ಶರ್ಮಾ ಅವರ ಎಂಟು ದಿನಗಳ ಕಕ್ಷೆಯ ಪರ್ಯಟಣೆ ನಂತರ 41 ವರ್ಷಗಳ ನಂತರ ಇದಾಗಿದೆ.