ಸಾಂದರ್ಭಿಕ ಚಿತ್ರ 
ದೇಶ

ಒಡಿಶಾದಲ್ಲಿ ನಿತ್ಯ ಮೂರು ಬಾಲ್ಯ ವಿವಾಹ; ನಬರಂಗ್‌ಪುರ ಜಿಲ್ಲೆ 1,347 ಬಾಲ್ಯ ವಿವಾಹಗಳೊಂದಿಗೆ ಮೊದಲ ಸ್ಥಾನದಲ್ಲಿದೆ!

2019 ರಿಂದ ಫೆಬ್ರವರಿ 2025 ರವರೆಗೆ ಒಡಿಶಾದಲ್ಲಿ 8,159 ಬಾಲ್ಯ ವಿವಾಹಗಳು ನಡೆದಿವೆ ಎಂದು ದತ್ತಾಂಶ ಬಹಿರಂಗಪಡಿಸುತ್ತದೆ.

ಭುವನೇಶ್ವರ: ಸರ್ಕಾರಿ ಅಂಕಿಅಂಶಗಳ ಪ್ರಕಾರ, ರಾಜ್ಯ ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದ್ದರೂ, ಕಳೆದ ಆರು ವರ್ಷಗಳಲ್ಲಿ ಒಡಿಶಾದಲ್ಲಿ ಪ್ರತಿದಿನ ಕನಿಷ್ಠ ಮೂರು ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ.

ಬುಡಕಟ್ಟು ಪದ್ಧತಿ, ವರದಕ್ಷಿಣೆ, ಕಾರ್ಮಿಕ ಕುಟುಂಬಗಳ ವಲಸೆ ಮತ್ತು ಹೆಣ್ಣುಮಕ್ಕಳು ಓಡಿಹೋಗಬಹುದೆಂಬ ಪೋಷಕರ ಭಯ ಬಾಲ್ಯ ವಿವಾಹಕ್ಕೆ ಕಾರಣ ಎಂದು ಬಾಲ್ಯ ವಿವಾಹ ವಿರೋಧಿ ಹೋರಾಟಗಾರರು ಹೇಳಿದ್ದಾರೆ.

2019 ರಿಂದ ಫೆಬ್ರವರಿ 2025 ರವರೆಗೆ ಒಡಿಶಾದಲ್ಲಿ 8,159 ಬಾಲ್ಯ ವಿವಾಹಗಳು ನಡೆದಿವೆ ಎಂದು ದತ್ತಾಂಶ ಬಹಿರಂಗಪಡಿಸುತ್ತದೆ. ಅವುಗಳಲ್ಲಿ, 1,347 ಪ್ರಕರಣಗಳು ನಬರಂಗ್‌ಪುರದಿಂದ ವರದಿಯಾಗಿವೆ. ಇದು ಒಡಿಶಾದ ಎಲ್ಲಾ 30 ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಗಂಜಾಂ ಜಿಲ್ಲೆ 966 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕೊರಾಪುಟ್ 636 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಅದರ ನಂತರ ಸ್ಥಾನದಲ್ಲಿ ಮಯೂರ್‌ಭಂಜ್ (594), ರಾಯಗಡ (408), ಬಾಲಸೋರ್ (361), ಕಿಯೋಂಜ್‌ಹರ್ (328), ಕಂಧಮಲ್ (308) ಮತ್ತು ನಯಾಗರ್ (308) ಇವೆ.

ಕಳೆದ ಆರು ವರ್ಷಗಳಲ್ಲಿ ಜಾರ್ಸುಗುಡ ಜಿಲ್ಲೆಯಲ್ಲಿ ಇಂತಹ 57 ಪ್ರಕರಣಗಳು ಕಂಡುಬಂದಿದ್ದು, ಇದು ಅತ್ಯಂತ ಕಡಿಮೆ ಬಾಲ್ಯ ವಿವಾಹಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಸಾಮಾಜಿಕ ಕಾರ್ಯಕರ್ತೆ ನಮ್ರತಾ ಚಾಧಾ ಅವರು, "ಬಾಲ್ಯ ವಿವಾಹವನ್ನು ರಾತ್ರೋರಾತ್ರಿ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳು ಮತ್ತು ಅವರ ಪೋಷಕರು ಅಂತಹ ಕ್ರಮಗಳನ್ನು ತೆಗೆದುಕೊಳ್ಳದಂತಹ ವಾತಾವರಣ ಮತ್ತು ಸಮಾಜವನ್ನು ಸೃಷ್ಟಿಸಬೇಕು" ಎಂದು ಹೇಳಿದ್ದಾರೆ.

ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮದುವೆ ಮಾಡುವುದು ಬುಡಕಟ್ಟು ಜನಾಂಗದವರ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸಾಂಪ್ರದಾಯಿಕ ಪದ್ಧತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೀವನೋಪಾಯಕ್ಕಾಗಿ ಇತರ ಸ್ಥಳಗಳಿಗೆ ವಲಸೆ ಹೋಗುವ ಪೋಷಕರು ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಅವರ ಸುರಕ್ಷತೆಗಾಗಿ ಕಾನೂನುಬದ್ಧ ವಯಸ್ಸಿಗೆ ಮೊದಲೇ ಮದುವೆ ಮಾಡುತ್ತಾರೆ. ಏಕೆಂದರೆ ಅವರು ಕುಟುಂಬಕ್ಕೆ ಅವಮಾನ ತರುವ ವ್ಯಕ್ತಿಯೊಂದಿಗೆ ಹುಡುಗಿ ಓಡಿಹೋಗಬಹುದು ಎಂದು ಭಯಪಡುತ್ತಾರೆ ಎಂದು ಚಾಧಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಜನಸಂಖ್ಯಾ ಬದಲಾವಣೆ ಪರಿಶೀಲಿಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

SCROLL FOR NEXT