ನವದೆಹಲಿ: ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು ಎಂಬ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಸೋಮವಾರ ರಾಜ್ಯಸಭೆಯಲ್ಲಿ ಮತ್ತೆ ಕೋಲಾಹಲ ಉಂಟಾಗಿದ್ದು, ಕಾಂಗ್ರೆಸ್ ಪಕ್ಷವು ಈ ಆರೋಪವನ್ನು ಆಧಾರರಹಿತ ಎಂದಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ (ಎಲ್ಒಪಿ) ಮಲ್ಲಿಕಾರ್ಜುನ ಖರ್ಗೆ, 'ಇಂದು ಬೆಳಿಗ್ಗೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಕೆಲವು ಸದಸ್ಯರು ಸಂವಿಧಾನವನ್ನು ಬದಲಾಯಿಸುವ ವಿಷಯವನ್ನು ಎತ್ತಿದರು ಮತ್ತು ಸದನದ ನಾಯಕ ಜೆಪಿ ನಡ್ಡಾ ಅವರು ಇದನ್ನು ಬೆಂಬಲಿಸಿದರು. ಆದರೆ, ಕರ್ನಾಟಕದ ಸಚಿವರು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಎಂದಿಗೂ ಮಾತನಾಡಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ' ಎಂದು ಹೇಳಿದರು.
ಇದರಿಂದಾಗಿ ಸದನದಲ್ಲಿ ಗದ್ದಲ ಉಂಟಾಯಿತು. ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಮುಂದೂಡಬೇಕಾಯಿತು.
ಕಲಾಪ ಪುನರಾರಂಭವಾದಾಗ ಖರ್ಗೆ, ಕಾಂಗ್ರೆಸ್ ಪಕ್ಷದ ನಿಲುವನ್ನು ಪುನರುಚ್ಚರಿಸಿದರು. 'ಸಂವಿಧಾನವನ್ನು ಬದಲಾಯಿಸುವ ಆಲೋಚನೆಯನ್ನು ತರುತ್ತಿರುವವರು ನಮ್ಮ ಸಚಿವರಲ್ಲ, ಬದಲಿಗೆ ಈಗ ಅಧಿಕಾರದಲ್ಲಿರುವವರು ಸಂವಿಧಾನ ಬದಲಿಸುವ ಚಿಂತನೆ ಮಾಡುತ್ತಿದ್ದಾರೆ' ಎಂದು ಹೇಳಿದರು.
'ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡಲಿಲ್ಲವೇ? ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರು ಮೂರನೇ ಎರಡರಷ್ಟು ಬಹುಮತವನ್ನು ಪಡೆದರೆ ಅದನ್ನು ತಿದ್ದುಪಡಿ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ, ಯಾವುದೇ ಬೆಲೆ ತೆತ್ತಾದರೂ ಸರಿ ನಾವು ಸಂವಿಧಾನವನ್ನು ರಕ್ಷಿಸಲು ಬದ್ಧರಾಗಿದ್ದೇವೆ' ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಜೆಪಿ ನಡ್ಡಾ ಅವರು ಖರ್ಗೆಯವರ ಹೇಳಿಕೆಗಳು 'ಸಂಪೂರ್ಣ ಸುಳ್ಳು' ಮತ್ತು ಕಾಂಗ್ರೆಸ್ನದ್ದು ಬೂಟಾಟಿಕೆಯಾಗಿದೆ. ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ತತ್ವಗಳನ್ನು ಉಲ್ಲಂಘಿಸುವ ಇತಿಹಾಸವನ್ನು ಹೊಂದಿದೆ. ಕರ್ನಾಟಕ ವಿಧಾನಸಭೆಯಲ್ಲಿ, ಮುಸ್ಲಿಂ ಗುತ್ತಿಗೆದಾರರಿಗೆ ಶೇ 4 ರಷ್ಟು ಮೀಸಲಾತಿ ನೀಡುವ ಪ್ರಸ್ತಾಪವನ್ನು ಅಂಗೀಕರಿಸಿದರು. ಇದು ಸಾಂವಿಧಾನಿಕ ಮಾನದಂಡಗಳಿಗೆ ವಿರುದ್ಧವಾಗಿದೆ' ಎಂದು ಆರೋಪಿಸಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಈ ಹಿಂದೆ ಮುಸ್ಲಿಮರಿಗೆ ಅನುಕೂಲವಾಗುವಂತೆ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳಿಂದ (OBC) ಮೀಸಲಾತಿ ಹಕ್ಕುಗಳನ್ನು ಕಸಿದುಕೊಂಡಿದೆ ಎಂದರು.
'ದೇಶಕ್ಕೆ ಸಂವಿಧಾನವನ್ನು ಕಾಂಗ್ರೆಸ್ ನೀಡಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳು ಬೇಕಾದರೂ ಕಾಂಗ್ರೆಸ್ ಮಾಡುತ್ತದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತೊಮ್ಮೆ ಹೇಳಿದ್ದಾರೆ' ಎಂದು ನಡ್ಡಾ ಹೇಳಿದರು.
ಈ ವಿಚಾರವಾಗಿ ಸದನದಲ್ಲಿ ಮತ್ತೆ ಮಾತಿನ ಚಕಮಕಿ ನಡೆದು ಉದ್ವಿಗ್ನತೆ ಉಂಟುಮಾಡಿತು. ಎರಡೂ ಕಡೆಯವರು ಘೋಷಣೆಗಳನ್ನು ಕೂಗಿದರು. ಅಂತಿಮವಾಗಿ ಮತ್ತೊಮ್ಮೆ ಸದನವನ್ನು ಮುಂದೂಡಲಾಯಿತು.
ಸೋಮವಾರ ಸದನ ಆರಂಭವಾದ ಕೂಡಲೇ ಕಳವಳ ವ್ಯಕ್ತಪಡಿಸಿದ ಕಿರಣ್ ರಿಜಿಜು, 'ಬಹಳ ಗಂಭೀರವಾದ ವಿಷಯವೊಂದು ನಮ್ಮ ಗಮನಕ್ಕೆ ಬಂದಿದೆ. ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ' ಎಂದರು.
ಈ ಆರೋಪಗಳನ್ನು ಖರ್ಗೆ ನಿರಾಕರಿಸಿದರು. ಸಂವಿಧಾನವನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ನಾವು ಹಾಗೆ ಮಾಡಲು ಉದ್ದೇಶಿಸಿದ್ದೇವೆ ಎಂದು ಹೇಳುತ್ತಿರುವ ಈ ವ್ಯಕ್ತಿ ಯಾರು?' ಅವರು ಕೇಳಿದರು.