ದೆಹಲಿ ಸ್ಫೋಟ 
ದೇಶ

Delhi Blast: ಬಾಂಬ್ ತಯಾರಿಕೆಗೆ ₹26 ಲಕ್ಷಕ್ಕೂ ಅಧಿಕ ಹಣ ಸಂಗ್ರಹ; 26 ಕ್ವಿಂಟಾಲ್ NPK ರಸಗೊಬ್ಬರ ಖರೀದಿಸಿದ್ದ ಶಂಕಿತರು!

ಡಾ. ಮುಜಾಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್ ಮತ್ತು ಡಾ. ಉಮರ್ ನಬಿ ಸೇರಿದಂತೆ ನಾಲ್ವರು ಶಂಕಿತರು, ಈ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸಿದ್ದರು.

ನವದೆಹಲಿ: ಹರಿಯಾಣದ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾದ 'ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್'ಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ವೈದ್ಯರು ಕೆಂಪು ಕೋಟೆ ಬಳಿ ನಡೆದ ಮಾರಣಾಂತಿಕ ಸ್ಫೋಟಕ್ಕೆ ಬಳಸಲಾದ ವಸ್ತುಗಳನ್ನು ಖರೀದಿಸಲು ಬರೋಬ್ಬರಿ 26 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಡಾ. ಮುಜಾಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್ ಮತ್ತು ಡಾ. ಉಮರ್ ನಬಿ ಸೇರಿದಂತೆ ನಾಲ್ವರು ಶಂಕಿತರು, ಈ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸಿದ್ದರು. ಅದನ್ನು ಡಾ. ಉಮರ್ ಅವರಿಗೆ ಸುರಕ್ಷತೆ ಮತ್ತು ಕಾರ್ಯಾಚರಣೆಯ ಬಳಕೆಗಾಗಿ ಹಸ್ತಾಂತರಿಸಲಾಗಿತ್ತು ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಡಾ. ಉಮರ್, ಹರಿಯಾಣದ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಜನನಿಬಿಡ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಸ್ಫೋಟಗೊಂಡ ಹುಂಡೈ ಐ20 ಕಾರಿನ ಚಾಲನೆ ಮಾಡುತ್ತಿದ್ದರು.

ತನಿಖಾಧಿಕಾರಿಗಳು ಈ ನಿಧಿಯು ದೊಡ್ಡ ಭಯೋತ್ಪಾದಕ ಪಿತೂರಿಗೆ ಸಂಬಂಧಿಸಿದೆ ಎಂದು ನಂಬಿದ್ದಾರೆ.

ಈ ಹಣವನ್ನು ಬಳಸಿಕೊಂಡು, ಗುರುಗ್ರಾಮ್, ನುಹ್ ಮತ್ತು ಹತ್ತಿರದ ಪಟ್ಟಣಗಳ ಪೂರೈಕೆದಾರರಿಂದ ಸುಮಾರು 3 ಲಕ್ಷ ರೂ. ಮೌಲ್ಯದ ಸುಮಾರು 26 ಕ್ವಿಂಟಾಲ್ NPK ರಸಗೊಬ್ಬರವನ್ನು ಗುಂಪು ಖರೀದಿಸಿದೆ ಎಂದು ಆರೋಪಿಸಲಾಗಿದೆ.

ಇತರ ರಾಸಾಯನಿಕಗಳೊಂದಿಗೆ ಬೆರೆಸಿದ ರಸಗೊಬ್ಬರವನ್ನು ಸಾಮಾನ್ಯವಾಗಿ ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುಂಪಿನಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರವನ್ನು ಖರೀದಿಸಿರುವುದು ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ. ಹಣಕಾಸಿನ ವಹಿವಾಟುಗಳು ಮತ್ತು ವಿತರಣಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟಕ್ಕೆ ಕೆಲವು ದಿನಗಳ ಮೊದಲು ಉಮರ್ ಮತ್ತು ಮುಜಾಮ್ಮಿಲ್ ನಡುವೆ ಹಣ ನಿರ್ವಹಣೆಯ ಬಗ್ಗೆ ಭಿನ್ನಾಭಿಪ್ರಾಯವಿತ್ತು ಎಂದು ಮೂಲಗಳು ತಿಳಿಸಿವೆ.

ಈ ವಿವಾದವು ಈ ಗುಂಪಿನ ಯೋಜನೆಗಳ ಮೇಲೆ ಪರಿಣಾಮ ಬೀರಿದೆಯೇ ಅಥವಾ ದಾಳಿಯ ಸಮಯದ ಮೇಲೆ ಪರಿಣಾಮ ಬೀರಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಭೇಟಿ ನೀಡುವಂತೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಆಹ್ವಾನ!

AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

T20 World Cup 2026: ಸ್ಕಾಟ್ಲೆಂಡ್ ವಿರುದ್ಧ ನೇಪಾಳಕ್ಕೆ 7 ವಿಕೆಟ್ ಗಳ ಭರ್ಜರಿ ಜಯ!

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ: ಅಶ್ವಿನಿ ವೈಷ್ಣವ್

'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್

SCROLL FOR NEXT