ನವದೆಹಲಿ: ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ ಘಟನೆ ಬೆನ್ನಲ್ಲೇ ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳು ಸ್ಫೋಟಕ ತಯಾರಿಸುವ ಕುರಿತು ವರದಿ ಪ್ರಕಟಿಸಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚನೆಗಳನ್ನು ನೀಡಿದ್ದು, ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಾಯ ಮಾಡುವ, ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ಎಚ್ಚರಿಕೆ ನೀಡಿದೆ.
ಕೆಲವು ಸುದ್ದಿ ವಾಹಿನಿಗಳು ಕೆಂಪು ಕೋಟೆ ಸ್ಫೋಟಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡುತ್ತಿವೆ. ಈ ಮೂಲಕ ಹಿಂಸಾಚಾರವನ್ನು ಸಮರ್ಥಿಸುತ್ತಿವೆ. ಜೊತೆಗೆ ಸ್ಫೋಟಕ ವಸ್ತುಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಂತೆಯೂ ಮಾಹಿತಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿವೆ ಎಂಬುದು ಸಚಿವಾಲಯದ ಗಮನಕ್ಕೆ ಬಂದಿದೆ.
ಅಂತಹ ಪ್ರಸಾರಗಳು ಹಿಂಸಾಚಾರವನ್ನು ಪ್ರೋತ್ಸಾಹಿಸಬಹುದು ಅಥವಾ ಪ್ರಚೋದಿಸಬಹುದು, ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಬಹುದು. ಅಂತಹ ವಿಷಯಗಳ ಬಗ್ಗೆ ವರದಿ ಮಾಡುವಾಗ ವಿವೇಚನೆ ಮತ್ತು ಸೂಕ್ಷ್ಮತೆಯಿಂದಿರಬೇಕೆಂದು ಒತ್ತಾಯಿಸಿದೆ.
ಇದೇ ವೇಳೆ ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಗಳು (ನಿಯಂತ್ರಣ) ಕಾಯ್ದೆ, 1995 ರ ವಿಭಾಗಗಳನ್ನು ಸಹ ಸಚಿವಾಲಯ ಉಲ್ಲೇಖಿಸಿದೆ.
ಯಾವುದೇ ಕಾರ್ಯಕ್ರಮವು ಅಶ್ಲೀಲ, ಮಾನಹಾನಿಕರ, ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ಸೂಚಿತ ವ್ಯಂಗ್ಯೋಕ್ತಿಗಳು ಮತ್ತು ಅರ್ಧ-ಸತ್ಯಗಳನ್ನು ಹೊಂದಿರಬಾರದು; ಹಿಂಸಾಚಾರವನ್ನು ಪ್ರೋತ್ಸಾಹಿಸುವ ಅಥವಾ ಪ್ರಚೋದಿಸುವ ಸಾಧ್ಯತೆ ಇರುವ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗೆ ವಿರುದ್ಧವಾದ ಯಾವುದನ್ನಾದರೂ ಒಳಗೊಂಡಿರುವ ಅಥವಾ ರಾಷ್ಟ್ರವಿರೋಧಿ ಮನೋಭಾವಗಳನ್ನು ಉತ್ತೇಜಿಸುವ; ರಾಷ್ಟ್ರದ ಸಮಗ್ರತೆಯ ಮೇಲೆ ಪರಿಣಾಮ ಬೀರುವ ಯಾವುದೇ ದೃಶ್ಯಗಳನ್ನು ಒಳಗೊಂಡಿರಬಾರದು ಎಂದು ಕಾಯ್ದೆಯು ಹೇಳುತ್ತದೆ ಎಂದು ತಿಳಿಸಿದೆ.
ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಾಯ ಮಾಡುವ, ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ದೃಶ್ಯಗಳನ್ನು ಪ್ರಸಾರ ಮಾಡುವುದನ್ನು ತಪ್ಪಿಸುವಂತೆ ವಾಹಿನಿಗಳಿಗೆ ಸಲಹೆ ನೀಡಿದೆ.