ಭೋಪಾಲ್: ಛತ್ತೀಸ್ಗಢದ ಕಾಂಘುರಾ ಕಾಡಿನಲ್ಲಿ ಶಸ್ತ್ರಸಜ್ಜಿತ ನಕ್ಸಲ್ ಕಾರ್ಯಕರ್ತರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮಧ್ಯಪ್ರದೇಶದ ನಕ್ಸಲ್ ವಿರೋಧಿ ಹಾಕ್ ಪಡೆಯ ಯುವ ಇನ್ಸ್ಪೆಕ್ಟರ್ ತೀವ್ರ ಗುಂಡೇಟಿಗೆ ಹುತಾತ್ಮರಾಗಿದ್ದಾರೆ.
ಕೇಂದ್ರ ಸರ್ಕಾರದಿಂದ ಎರಡು ಶೌರ್ಯ ಪದಕಗಳನ್ನು ಪಡೆದಿದ್ದ ಮತ್ತು ಅನೇಕ ನಿರ್ಣಾಯಕ Hawk Force ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದ್ದ ಆಶಿಶ್ ಶರ್ಮ, ನಿನ್ನೆ ಬೆಳಗ್ಗೆ 8.30 ರ ಸುಮಾರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢದ ಜಂಕ್ಷನ್ ಬಳಿ ನಕ್ಸಲ್ ಕಾರ್ಯಕರ್ತರ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ.
ಭಾರೀ ಗುಂಡುಗಳು ತಮ್ಮ ದೇಹಕ್ಕೆ ಬಿದ್ದರೂ ಆಶಿಶ್ ಶರ್ಮ ತಮ್ಮ ತಂಡವನ್ನು ಮುನ್ನಡೆಸುತ್ತಲೇ ಇದ್ದರು. ಬಹು ಗಾಯಗಳಿಂದ ರಕ್ತಸ್ರಾವವಾಗಿ, ಅವರು ಕುಸಿದು ಬೀಳುವವರೆಗೂ ದಟ್ಟವಾದ ಕಾಡಿನ ಹಿಂದೆ ಅಡಗಿಕೊಂಡಿದ್ದ ಕಾರ್ಯಕರ್ತರ ಮೇಲೆ ಗುಂಡು ಹಾರಿಸುತ್ತಲೇ ಇದ್ದರು. ಅವರ ಭುಜ, ಹೊಟ್ಟೆ, ತೊಡೆ ಮತ್ತು ಕೈಗಳಿಗೆ ಗುಂಡು ತಾಗಿ ಗಾಯಗಳಾಗಿದ್ದವು. ಅವರನ್ನು ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್ಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಅವರ ಜೀವ ಉಳಿಸಲು ವೈದ್ಯರ ಪ್ರಯತ್ನಗಳ ಹೊರತಾಗಿಯೂ ನಿಧನರಾಗಿದ್ದಾರೆ.
ವಿಶೇಷ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಅವರನ್ನು ವಿಮಾನದಲ್ಲಿ ಸಾಗಿಸಲು ನಾವು ಹೆಲಿಕಾಪ್ಟರ್ ಆಂಬ್ಯುಲೆನ್ಸ್ ನ್ನು ಸಹ ಸಿದ್ಧಪಡಿಸಿದ್ದೆವು, ಆದರೆ ಅವರು ಬದುಕುಳಿಯಲು ಸಾಧ್ಯವಾಗಲಿಲ್ಲ. ನಮ್ಮ ಅತ್ಯಂತ ನಿರ್ಣಾಯಕ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದ್ದರು.
ಕಳೆದ ಫೆಬ್ರವರಿ 19 ರಂದು ಬಾಲಘಾಟ್ ಜಿಲ್ಲೆಯ ರೌಂಡಾ ಕಾಡುಗಳಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ಕು ಪ್ರಮುಖ ಮಹಿಳಾ ನಕ್ಸಲ್ ಕೇಡರ್ಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ವರ್ಷ ಸಬ್-ಇನ್ಸ್ಪೆಕ್ಟರ್ನಿಂದ ಇನ್ಸ್ಪೆಕ್ಟರ್ಗೆ ಹುದ್ದೆಗೆ ಬಡ್ತಿ ಪಡೆದಿದ್ದರು ಎಂದು ವಿಶೇಷ ಡಿಜಿ (ನಕ್ಸಲ್ ವಿರೋಧಿ ಕಾರ್ಯಾಚರಣೆಗಳು) ಪಂಕಜ್ ಶ್ರೀವಾಸ್ತವ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ(The New Indian Express) ತಿಳಿಸಿದ್ಗಾರೆ.
ಎನ್ಕೌಂಟರ್ ಸಮಯದಲ್ಲಿ, ಮೂರು ರಾಜ್ಯಗಳ ಗಡಿಯಲ್ಲಿರುವ ದಟ್ಟ ಕಾಡುಗಳಲ್ಲಿ ಬಹು ಜಂಟಿ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಈ ಪ್ರದೇಶದಲ್ಲಿ 13 ರಿಂದ 15 ಶಸ್ತ್ರಸಜ್ಜಿತ ನಕ್ಸಲ್ ಕಾರ್ಯಕರ್ತರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ತಂಡಗಳು ಕಾರ್ಯನಿರ್ವಹಿಸುತ್ತಿದ್ದವು. ನಿನ್ನೆ ಮುಂಜಾನೆ ಗುಂಡಿನ ಚಕಮಕಿ ನಡೆದಿದ್ದು, ಕೂಂಬಿಂಗ್ ಕಾರ್ಯಾಚರಣೆಗಳು ಇನ್ನೂ ಪ್ರಗತಿಯಲ್ಲಿವೆ ಎಂದರು.
ಘಟನೆಯ ನಂತರದ ಶೋಧ ಕಾರ್ಯಾಚರಣೆಯಲ್ಲಿ ಬೆನ್ನುಚೀಲಗಳು ಮತ್ತು ಇತರ ಸಾಮಗ್ರಿಗಳು ದೊರೆತಿವೆ, ಇದರ ಆಧಾರದ ಮೇಲೆ ದುಷ್ಕರ್ಮಿಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ಸಂದೇಹ ಬರುತ್ತಿದೆ ಎಂದು ಶ್ರೀವಾಸ್ತವ ಹೇಳಿದರು.
ಆಶಿಶ್ ಶರ್ಮಾ ನರಸಿಂಗ್ಪುರ ಜಿಲ್ಲೆಯ ಗದರ್ವಾರಾದವರಾಗಿದ್ದು, ಒಂಬತ್ತು ವರ್ಷಗಳ ಹಿಂದೆ ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿ ಸೇರಿದ್ದರು. ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ವರ್ಷದ ಆರಂಭದಲ್ಲಿ ಅವರಿಗೆ ಬಡ್ತಿ ನೀಡಲಾಯಿತು. ನರಸಿಂಗ್ಪುರದ ವರದಿಗಳ ಪ್ರಕಾರ, ಅವರು ಮುಂದಿನ ವರ್ಷದ ಆರಂಭದಲ್ಲಿ ವಿವಾಹವಾಗಬೇಕಿತ್ತು.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಸಾವಿಗೆ ಸಂತಾಪ ಸೂಚಿಸುತ್ತಾ, ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲೆಯ ಕಾಡಿನಲ್ಲಿ ಮೂರು ರಾಜ್ಯಗಳ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಮಯದಲ್ಲಿ ಧೈರ್ಯ ತೋರಿಸಿದ್ದಾರೆ. ನಕ್ಸಲಿಸಂನ್ನು ನಿರ್ಮೂಲನೆ ಮಾಡುವ ರಾಷ್ಟ್ರೀಯ ಅಭಿಯಾನದಲ್ಲಿ ಅವರ ಅತ್ಯುನ್ನತ ತ್ಯಾಗ ಮರೆಯಲಾಗದು ಎಂದು ಹೇಳಿದರು.