ನವದೆಹಲಿ/ಬಿಜಾಪುರ: ಛತ್ತೀಸ್ಗಢದ ಬಸ್ತಾರ್ನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಚಿಂತನೆಯನ್ನು ಹರಡಲು ಮತ್ತು ಸ್ಥಳೀಯರನ್ನು ಮಾವೋವಾದಿ ಸಿದ್ಧಾಂತದಿಂದ ದೂರವಿಡಲು ವಿಶೇಷ ಸಾರ್ವಜನಿಕ ಅಭಿಯಾನದ ಭಾಗವಾಗಿ ಸಿಆರ್ಪಿಎಫ್ 10,000 ಕ್ಕೂ ಹೆಚ್ಚು ರೇಡಿಯೋ ಸೆಟ್ಗಳನ್ನು ವಿತರಿಸಿದೆ. ಈ ಪ್ರದೇಶದಲ್ಲಿ ಹಿಂಸಾತ್ಮಕ ಎಡಪಂಥೀಯ ಉಗ್ರವಾದ(ಎಲ್ಡಬ್ಲ್ಯೂಇ) ಕಡಿಮೆಯಾಗುತ್ತಿದೆ.
ಗ್ರಾಮಗಳಲ್ಲಿ ನೂರಾರು ಸಣ್ಣ ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ ನಂತರ ಅರೆಸೇನಾಪಡೆ ಇತ್ತೀಚೆಗೆ ಸುಮಾರು ನಾಲ್ಕು ತಿಂಗಳ ಕಾಲ ಈ ಅಭಿಯಾನ ನಡೆಸಿದೆ.
ಬಸ್ತಾರ್ ಪ್ರದೇಶದ ಏಳು ಜಿಲ್ಲೆಗಳಿಗೆ ವಿಶೇಷ ನಾಗರಿಕ ಕ್ರಿಯಾ ಕಾರ್ಯಕ್ರಮವನ್ನು ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯ(ಎಂಎಚ್ಎ) 1.62 ಕೋಟಿ ರೂ.ಗಳ ಬಜೆಟ್ ಹಂಚಿಕೆಯೊಂದಿಗೆ ಪ್ರಾರಂಭಿಸಿತು ಎಂದು ಹಿರಿಯ ಅಧಿಕಾರಿಯೊಬ್ಬರು ದೆಹಲಿಯಲ್ಲಿ ಪಿಟಿಐಗೆ ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯ ಕಮಾಂಡರ್, ಈ ಪ್ರದೇಶದ ದೂರದ ಮತ್ತು ಒಳ ಪ್ರದೇಶಗಳಲ್ಲಿ ನಿಯೋಜಿಸಲಾದ ಅರೆಸೇನಾಪಡೆಯ 180 ತುಕಡಿಗಳು ಒಟ್ಟು 10,800 ರೇಡಿಯೋ ಸೆಟ್ಗಳನ್ನು ವಿತರಿಸಿವೆ ಎಂದು ಅವರು ಹೇಳಿದ್ದಾರೆ.
ಈ ವಿಶೇಷ ಕಾರ್ಯಕ್ರಮವು ಸುಮಾರು 54,000 ವ್ಯಕ್ತಿಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಪ್ರತಿ ಕುಟುಂಬವನ್ನು ಐದು ಸದಸ್ಯರ ಘಟಕವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
"ಸ್ಥಳೀಯರು, ಬುಡಕಟ್ಟು ಜನಾಂಗದವರು ಮತ್ತು ಗ್ರಾಮಸ್ಥರನ್ನು ದೇಶದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವುದು ಈ ಮೆಗಾ ರೇಡಿಯೋ ವಿತರಣಾ ಅಭಿಯಾನದ ಉದ್ದೇಶವಾಗಿದೆ.