ಪ್ರಾತಿನಿಧಿಕ ಚಿತ್ರ 
ದೇಶ

'ಕಿರುಚಿದರೆ ಮತ್ತೆ ಸುರಿಯುವೆ': ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ, ಮೆಣಸಿನ ಪುಡಿ ಎರಚಿದ ದೆಹಲಿ ಮಹಿಳೆ!

ದಿನೇಶ್ ನಿದ್ದೆ ಮಾಡುತ್ತಿದ್ದಾಗ ಅವರ ಪತ್ನಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಮೇಲೆ ಬಿಸಿ ಎಣ್ಣೆ ಸುರಿದಿದ್ದಾರೆ ಮತ್ತು ದಂಪತಿಯ ಎಂಟು ವರ್ಷದ ಮಗಳು ಕೂಡ ಆ ವೇಳೆ ಮನೆಯಲ್ಲಿದ್ದಳು.

ನವದೆಹಲಿ: ದಿನೇಶ್ ಎಂಬುವವರು ಮದಂಗಿರ್‌ನಲ್ಲಿರುವ ತಮ್ಮ ಮನೆಯಲ್ಲಿ ನಿದ್ರಿಸುತ್ತಿದ್ದಾಗ, ಅವರ ಪತ್ನಿಯೇ ಅವರ ಮೇಲೆ ಕುದಿಯುವ ಎಣ್ಣೆ ಸುರಿದು ಬಳಿಕ ಮೆಣಸಿನಕಾಯಿ ಪುಡಿಯನ್ನು ಸುರಿದಿರುವ ಘಟನೆ ನಡೆದಿದೆ.

ಅಕ್ಟೋಬರ್ 3 ರಂದು, ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ 28 ವರ್ಷದ ಫಾರ್ಮಾಕ್ಯುಟಿಕಲ್ ಕಂಪನಿ ಉದ್ಯೋಗಿಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆತರಲಾಯಿತು ಮತ್ತು ಗಂಭೀರ ಸ್ಥಿತಿಯಲ್ಲಿ ಅವರನ್ನು ಐಸಿಯುಗೆ ದಾಖಲಿಸಲಾಯಿತು.

ಅದೇ ದಿನ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ದಿನೇಶ್ ನಿದ್ದೆ ಮಾಡುತ್ತಿದ್ದಾಗ ಅವರ ಪತ್ನಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಮೇಲೆ ಬಿಸಿ ಎಣ್ಣೆ ಸುರಿದಿದ್ದಾರೆ ಮತ್ತು ದಂಪತಿಯ ಎಂಟು ವರ್ಷದ ಮಗಳು ಕೂಡ ಆ ವೇಳೆ ಮನೆಯಲ್ಲಿದ್ದಳು.

ಅಕ್ಟೋಬರ್ 2 ರಂದು ಕೆಲಸ ಮುಗಿಸಿ ತಡರಾತ್ರಿ ಮನೆಗೆ ಹಿಂತಿರುಗಿ, ಊಟ ಮಾಡಿ ಮಲಗಿದ್ದಾಗಿ ದಿನೇಶ್ ಪೊಲೀಸರಿಗೆ ತಿಳಿಸಿದ್ದಾರೆ. 'ನನ್ನ ಹೆಂಡತಿ ಮತ್ತು ಮಗಳು ಹತ್ತಿರದಲ್ಲೇ ಮಲಗಿದ್ದರು. ಬೆಳಗಿನ ಜಾವ 3.15ರ ಸುಮಾರಿಗೆ, ಇದ್ದಕ್ಕಿದ್ದಂತೆ ನನ್ನ ದೇಹದಾದ್ಯಂತ ತೀವ್ರವಾದ, ಸುಡುವ ಮತ್ತು ನೋವಿನ ಅನುಭವ ಆಯಿತು. ಆಗ ನನ್ನ ಹೆಂಡತಿ ನನ್ನ ಮುಂಡ ಮತ್ತು ಮುಖದ ಮೇಲೆ ಕುದಿಯುವ ಎಣ್ಣೆಯನ್ನು ಸುರಿಯುವುದನ್ನು ನಾನು ನೋಡಿದೆ. ನಾನು ಎದ್ದೇಳಲು ಅಥವಾ ಸಹಾಯಕ್ಕಾಗಿ ಕರೆಯುವ ಮುನ್ನವೇ ಆಕೆ ನನ್ನ ಸುಟ್ಟಗಾಯಗಳ ಮೇಲೆ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿದಳು' ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

'ನೋವಿನಿಂದಾಗಿ ಆತ ಕಿರುಚಿದಾಗ, ಆತನ ಹೆಂಡತಿ 'ನೀವು ಕಿರುಚಿದರೆ, ನಾನು ನಿಮ್ಮ ಮೇಲೆ ಮತ್ತಷ್ಟು ಎಣ್ಣೆ ಸುರಿಯುತ್ತೇನೆ' ಎಂದು ಹೇಳಿದಳು. ಆದರೆ, ದಿನೇಶ್ ಸುಮ್ಮನಿರಲು ಸಾಧ್ಯವಾಗಲೇ ಇಲ್ಲ. ಗದ್ದಲವನ್ನು ಕೇಳಿಸಿಕೊಂಡ ನೆರೆಹೊರೆಯವರು ಮತ್ತು ಕೆಳಗಿನ ಮಹಡಿಯಲ್ಲಿ ವಾಸಿಸುತ್ತಿದ್ದ ಮನೆಮಾಲೀಕರ ಕುಟುಂಬ ಬಂದಿದೆ.

ಮನೆ ಮಾಲೀಕರ ಮಗಳು ಅಂಜಲಿ ಮಾತನಾಡಿ, 'ಏನಾಗುತ್ತಿದೆ ಎಂದು ನೋಡಲು ನನ್ನ ತಂದೆ ಮೇಲಕ್ಕೆ ಹೋದರು. ಬಾಗಿಲು ಲಾಕ್ ಆಗಿತ್ತು. ಅವರ ಪತ್ನಿ ಒಳಗಿನಿಂದ ಬಾಗಿಲಿಗೆ ಲಾಕ್ ಮಾಡಿದ್ದರು. ನಾವು ಅವರನ್ನು ಬಾಗಿಲು ತೆರೆಯಲು ಕೇಳಿದೆವು. ಕೊನೆಗೆ ಬಾಗಿಲು ತೆರೆದಾಗ, ಅವರು ನೋವಿನಿಂದ ನರಳುತ್ತಿರುವುದನ್ನು ಮತ್ತು ಅವರ ಪತ್ನಿ ಮನೆಯೊಳಗೆ ಅಡಗಿಕೊಂಡಿರುವುದನ್ನು ನಾವು ಕಂಡೆವು' ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

'ತನ್ನ ತಂದೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಮಹಿಳೆ ತನ್ನ ಪತಿಯನ್ನು ತಾನೇ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದಳು. ಆದರೆ ಆಕೆ ಅವರೊಂದಿಗೆ ಹೊರಬಂದು, ಆಸ್ಪತ್ರೆಗೆ ಕರೆದೊಯ್ಯುವ ಬದಲು ವಿರುದ್ಧ ದಿಕ್ಕಿನ ಕಡೆಗೆ ಹೋದಳು. ನಮಗೆ ಅನುಮಾನ ಬಂತು. ನನ್ನ ತಂದೆ ಆಕೆಯನ್ನು ತಡೆದು, ಆಟೋದಲ್ಲಿ ದಿನೇಶ್‌ರನ್ನು ಆಸ್ಪತ್ರೆಗೆ ಕರೆದೊಯ್ದರು' ಎಂದು ಅವರು ಹೇಳಿದರು.

ದಿನೇಶ್ ಅವರನ್ನು ಮೊದಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರ ಎದೆ, ಮುಖ ಮತ್ತು ತೋಳುಗಳಲ್ಲಿ ಆಳವಾದ ಸುಟ್ಟಗಾಯಗಳನ್ನು ನೋಡಿ ವೈದ್ಯರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.

ವೈದ್ಯಕೀಯ ವರದಿಯಲ್ಲಿ ಅವರ ಗಾಯಗಳನ್ನು 'ಅಪಾಯಕಾರಿ' ಎಂದು ವಿವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತನ ಪ್ರಕಾರ, ದಂಪತಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ವರ್ಷಗಳ ಹಿಂದೆ, ಅವರ ಪತ್ನಿ ಮಹಿಳೆಯರ ವಿರುದ್ಧದ ಅಪರಾಧ (CAW) ಕೋಶಕ್ಕೆ ದೂರು ನೀಡಿದರು. ಆದರೆ, ರಾಜಿ ಮೂಲಕ ವಿಷಯವನ್ನು ಇತ್ಯರ್ಥಪಡಿಸಲಾಯಿತು.

ದಿನೇಶ್ ಅವರ ಪತ್ನಿಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 118 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳನ್ನು ಬಳಸಿಕೊಂಡು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು ಅಥವಾ ಗಂಭೀರ ಗಾಯಗೊಳಿಸುವುದು), 124 (ಆಮ್ಲದಿಂದ ಸ್ವಯಂಪ್ರೇರಣೆಯಿಂದ ಗಂಭೀರ ಗಾಯಗೊಳಿಸುವುದು) ಮತ್ತು 326 (ಗಾಯ, ನೀರು ನುಗ್ಗುವಿಕೆ, ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ದುಷ್ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

'ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

ಮತ್ತೊಂದು ಗುಡ್ ನ್ಯೂಸ್: ಕದನ ವಿರಾಮದ ನಂತರ ಹಾರ್ಮುಜ್ ದಾಟಿದ ಎಲ್‌ಪಿಜಿ ಹೊತ್ತ ಭಾರತದ ಹಡಗು

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

5 ವರ್ಷದ ಬಾಲಕನ ಜೊತೆ ಅಸ್ವಾಭಾವಿಕ s*x; ವಸತಿ ಶಾಲೆ ವಿದ್ಯಾರ್ಥಿಯ ಗಂಟಲು ಸೀಳಿದ ಗಾರ್ಡ್!

SCROLL FOR NEXT