ಸೆಮಿಕಂಡಕ್ಟರ್ (Semiconductor) ಕೈಗಾರಿಕೆಗಳ ಕುರಿತ ನಾನು ನೀಡಿದ್ದ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಚಿದ್ದಾರೆ ಎಂಬ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಅಸ್ಸಾಂ ಬಿಜೆಪಿ ತಿರುಗೇಟು ನೀಡಿದೆ.
ಪ್ರಿಯಾಂಕ್ ಖರ್ಗೆ ಎಕ್ಸ್ ಸಂದೇಶಕ್ಕೆ ಪ್ರತಿಕ್ರಿಸಿರುವ ಅಸ್ಸಾಂ ಬಿಜೆಪಿ, ಸುದೀರ್ಘವಾದ ಪ್ರಬಂಧ ಬರೆದ ಕೂಡಲೇ ಯಾರೂ ಸೆಮಿಕಂಡಕ್ಟರ್ ತಜ್ಞ ಆಗುವುದಿಲ್ಲ. ಮೊದಲು, ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ನಿಮ್ಮ ಕಲಬುರಗಿ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದೆ.
ಪ್ರಿಯಾಂಕ್ ಖರ್ಗೆಯವರ ಎಕ್ಸ್ ಸಂದೇಶವನ್ನು ಟ್ಯಾಗ್ ಮಾಡಿ, ‘ಹಲೋ ಟೆಡ್ಡಿ ಬಾಯ್, ಎಕ್ಸ್ನಲ್ಲಿ ಸುದೀರ್ಘ ಪ್ರಬಂಧ ಬರೆಯುವುದರಿಂದ ನೀವು ಸೆಮಿಕಂಡಕ್ಟರ್ ತಜ್ಞ ಆಗುವುದಿಲ್ಲ. ಅಸ್ಸಾಂ ಬಗ್ಗೆ ಉಪನ್ಯಾಸ ನೀಡುವ ಬದಲು ಆತ್ಮವಿಮರ್ಶೆ ಮಾಡಿಕೊಳ್ಳಿ. ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ನಿಮ್ಮ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ನಿಮ್ಮ ‘ಟ್ಯಾಲೆಂಟ್ ಟ್ಯಾಂಕ್’ ಬಗ್ಗೆ ತುಂಬಾನೇ ಹೇಳ್ತೀರಾ, ಅಲ್ವಾ?’ ಎಂದು ಹೇಳಿದೆ.
ಅಸ್ಸಾಂ ಬಿಜೆಪಿ ಎಕ್ಸ್ ಸಂದೇಶ
ಕರ್ನಾಟಕಕ್ಕೆ ಬರಬೇಕಿರುವ ಸೆಮಿಕಂಡಕ್ಟರ್ ಕೈಗಾರಿಕೆಗಳ ಹೂಡಿಕೆಗಳನ್ನು ಕೇಂದ್ರ ಸರ್ಕಾರ ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳಿಗೆ ತಿರುಗಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಸೆಮಿಕಂಡಕ್ಟರ್ ಕೈಗಾರಿಕೆಗಳು ವಾಸ್ತವದಲ್ಲಿ ಬಯಸಿರೋದು ಬೆಂಗಳೂರನ್ನು. ಆದರೆ, ಅಸ್ಸಾಂ ಮತ್ತು ಗುಜರಾತ್ಗೆ ಏಕೆ ಹೋಗುತ್ತಿವೆ? ಅಲ್ಲಿ ಪ್ರತಿಭೆಗಳು ಇವೆಯೇ ಎಂದು ಪ್ರಶ್ನಿಸಿದ್ದರು.
ಇದು ಅಸ್ಸಾಂನ ಯುವಜನೆತೆಗೆ ಮಾಡಿರುವ ಅವಮಾನ ಎಂದು ಹೇಳಿದ್ದ ಹಿಮಂತ ಬಿಸ್ವ ಶರ್ಮಾ, ಪ್ರಿಯಾಂಕ್ ಖರ್ಗೆ ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್ ಖರ್ಗೆ ಎಕ್ಸ್ ತಾಣದಲ್ಲಿ ಸೆಮಿಕಂಡಕ್ಟರ್ ಬಗ್ಗೆ ಹಾಗೂ ಅಸ್ಸಾಂ ಕುರಿತು ಸುದೀರ್ಘ ಬರಹ ಪ್ರಕಟಿಸಿದ್ದರು.
ಹಿಮಂತ ಬಿಸ್ವ ಶರ್ಮಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಡಳಿತದ ನಂತರವೂ ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ ಎಂದು ಟೀಕಿಸಿದ್ದರು.