ಶ್ರೀನಗರ: ಶ್ರೀನಗರದ ಐತಿಹಾಸಿಕ ಹಜರತ್ಬಾಲ್ ದರ್ಗಾದ ಉದ್ಘಾಟನಾ ಫಲಕದ ಮೇಲೆ ಭಾರತ ರಾಷ್ಟ್ರ ಲಾಂಛನ ಅಶೋಕ ಸ್ತಂಭದ ಚಿಹ್ನೆಯನ್ನು ಬಳಕೆ ಮಾಡುವ ಅವಶ್ಯಕತೆ ಏನಿತ್ತು ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ (Omar Abullah) ಪ್ರಶ್ನಿಸಿದ್ದಾರೆ.
ಶುಕ್ರವಾದ ಈದ್-ಎ-ಮಿಲಾದ್ ಆಚರಣೆಯ ಮಧ್ಯೆ, ಶ್ರೀನಗರದ ಐತಿಹಾಸಿಕ ಹಜರತ್ಬಾಲ್ ದರ್ಗಾದಲ್ಲಿ ದೊಡ್ಡ ವಿವಾದ ಭುಗಿಲೆದ್ದಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ, ಹಜರತ್ಬಾಲ್ ದರ್ಗಾದ ಉದ್ಘಾಟನಾ ಫಲಕದ ಮೇಲಿದ್ದ ಅಶೋಕ ಸ್ತಂಭದ ಚಿಹ್ನೆಯನ್ನು ಮೂಲಭೂತವಾದಿಗಳ ಗುಂಪೊಂದು ಒಡೆದು ಕಿತ್ತು ಹಾಕಿತ್ತು.
ಹಜರತ್ಬಾಲ್ ದರ್ಗಾದಲ್ಲಿ ಅಶೋಕ ಚಿಹ್ನೆಯನ್ನು ಮೂಲಭೂತವಾದಿಗಳ ಗುಂಪು ಕಿತ್ತು ಹಾಕಿದ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, 'ಧಾರ್ಮಿಕ ಸ್ಥಳದಲ್ಲಿ ನಾಮಫಲಕವೊಂದರ ಮೇಲೆ ರಾಷ್ಟ್ರೀಯ ಚಿಹ್ನೆಯನ್ನು ಇಡಲು ಯಾವ ಬಲವಂತವಿತ್ತು? ಎಂದು ಪ್ರಶ್ನಿಸಿದ್ದು, ಮಾತ್ರವಲ್ಲದೇ ನಾಮಫಲಕದ ಕಲ್ಲಿನ ಮೇಲೆ ರಾಷ್ಟ್ರೀಯ ಚಿಹ್ನೆಯನ್ನು ಇಡಬೇಕೇ ಅಥವಾ ಬೇಡವೇ ಎಂಬದು ಇದೀಗ ದೊಡ್ಡ ಪ್ರಶ್ನೆಯಾಗಿದೆ' ಎಂದು ಹೇಳಿದ್ದಾರೆ.
ಈ ಚಿಹ್ನೆಯು ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ, ಧಾರ್ಮಿಕ ಸಂಸ್ಥೆಗಳಿಗೆ ಅಲ್ಲ ಎಂದು ಪ್ರತಿಪಾದಿಸಿರುವ ಒಮರ್ ಅಬ್ದುಲ್ಲಾ, 'ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ 'ತಪ್ಪು'ಗಾಗಿ ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿ ಕ್ಷಮೆಯಾಚಿಸಬೇಕು' ಎಂದು ಹೇಳಿದರು.
'ಮೊದಲನೆಯದಾಗಿ, ಈ ಕಲ್ಲಿನ ಮೇಲೆ ರಾಷ್ಟ್ರೀಯ ಲಾಂಛನವನ್ನು ಬಳಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾವುದೇ ಧಾರ್ಮಿಕ ಸ್ಥಳದಲ್ಲಿ ಈ ರೀತಿ ಲಾಂಛನವನ್ನು ಬಳಸುವುದನ್ನು ನಾನು ಎಂದಿಗೂ ನೋಡಿಲ್ಲ. ಮಸೀದಿಗಳು, ದೇವಾಲಯಗಳು, ದೇವಾಲಯಗಳು ಮತ್ತು ಗುರುದ್ವಾರಗಳು ಸರ್ಕಾರಿ ಸಂಸ್ಥೆಗಳಲ್ಲ. ಇವು ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರಿ ಲಾಂಛನಗಳನ್ನು ಧಾರ್ಮಿಕ ಸಂಸ್ಥೆಗಳಲ್ಲಿ ಬಳಸಲಾಗುವುದಿಲ್ಲ ಎಂದರು.
ಇದೇ ವೇಳೆ ವಕ್ಫ್ ಅಧ್ಯಕ್ಷೆ ಅಂದ್ರಾಬಿ ಅವರ ಹೇಳಿಕೆಯನ್ನು ಖಂಡಿಸಿದ ಒಮರ್, ಮಂಡಳಿಯು 'ಜನರ ಭಾವನೆಗಳೊಂದಿಗೆ ಆಟವಾಡಿದೆ' ಮತ್ತು ಈಗ ಬೆದರಿಕೆಗಳನ್ನು ಬಳಸುತ್ತಿದೆ. ಮೊದಲು, ಕನಿಷ್ಠ, ಅವರು ಅದಕ್ಕಾಗಿ ಕ್ಷಮೆಯಾಚಿಸಬೇಕಾಗಿತ್ತು. ಅವರು ತಪ್ಪನ್ನು ಒಪ್ಪಿಕೊಳ್ಳಬೇಕು. ಅದು ಮತ್ತೆ ಸಂಭವಿಸಬಾರದು ಎಂದು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರು ಯಾವುದೇ ಕ್ರೆಡಿಟ್ ಪಡೆಯದೆ ದೇವಾಲಯದ ಕೆಲಸವನ್ನು ಪೂರ್ಣಗೊಳಿಸಿದರು. ಈ ಫಲಕದ ಅಗತ್ಯ ಏನಿತ್ತು? ಕೆಲಸ ಸಾಕಾಗಲಿಲ್ಲವೇ? ಶೇಖ್ ಮೊಹಮ್ಮದ್ ಅಬ್ದುಲ್ಲಾ ಈ ದೇಗುಲಕ್ಕೆ ಆಕಾರ ನೀಡಿದರು... ಇಂದಿಗೂ, ಅವರು ತಮ್ಮ ಹೆಸರಿನಲ್ಲಿ ಕಲ್ಲನ್ನು ಬಳಸದಿದ್ದರೂ ಜನರು ಅವರ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ. ಕಲ್ಲನ್ನು ಬಳಸುವ ಅಗತ್ಯವಿರಲಿಲ್ಲ" ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.
ದೇಶದಲ್ಲಿ ಎಲ್ಲಿಯೂ ಯಾವುದೇ ಧಾರ್ಮಿಕ ಸ್ಥಳದಲ್ಲಿ ರಾಷ್ಟ್ರೀಯ ಲಾಂಛನವನ್ನು ಬಳಸಲಾಗುವುದಿಲ್ಲ. ಗೂಗಲ್ನಲ್ಲಿ ಹುಡುಕಿದಾಗ ರಾಷ್ಟ್ರೀಯ ಲಾಂಛನವನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ನೀವು ಕಾಣಬಹುದು ಎಂದರು.
ಒಮರ್ ಬೆನ್ನಿಗೆ ನಿಂತ ಮೆಹಬೂಬಾ ಮುಫ್ತಿ
ಇನ್ನೊಂದೆಡೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಒಮರ್ ಅವರ ಮಾತನ್ನೇ ಅನುಸರಿಸಿ, “ಕೆಲವು ದುರಹಂಕಾರಿಗಳ ವಿರುದ್ದ ನಮಗೆ ಕೋಪ ಬರುವುದು ಸಹಜ” ಯಾಕಂದ್ರೆ ಭಾವನೆಗಳು ಉಕ್ಕಿ ಹರಿಯುತ್ತವೆ ಎಂದು ಹೇಳಿದ್ದಾರೆ. ಮುಂದುವರೆದು, ನಾಮಫಲಕದ ಮೇಲೆ ದಾಳಿ ಮಾಡಿದವರು ರಾಷ್ಟೀಯ ಚಿಹ್ನೆಯನ್ನು ವಿರೋಧಿಸುವುದಿಲ್ಲ;
ಆದ್ರೆ ಅದನ್ನು ತಮ್ಮ ಭಾವನೆಗಳಿಗೆ ಧಕ್ಕೆ ಬಂದ ಕಾರಣದಿಂದ ಧ್ವಂಸ ಮಾಡಿದ್ದಾರೆ” ಎಂದಿದ್ದಾರೆ. ಇದೇ ವೇಳೆ, ಜನರ ಭಾವನಗೆಗಳಿಗೆ ಧಕ್ಕೆ ತಂದವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು; ಅದರಲ್ಲೂ, ವಾಕ್ಫ್ ಮಂಡಳಿಯ ವಿರುದ್ಧ, ಸೆಕ್ಷನ್ 295-ಎ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು... ಏಕೆಂದರೆ ಇದು ನಮಗೆ ಕುಫ್ರ್ (ಪಾಪ)...' ಎಂದು ಹೇಳಿದರು.
ಏನಿದು ಘಟನೆ…?
ಶ್ರೀನಗರದ ಹಜರತ್ಬಾಲ್ ದರ್ಗಾ ಇಸ್ಲಾಮಿಕ್ ಪವಿತ್ರ ತಾಣದಲ್ಲಿ ಒಂದಾಗಿದ್ದು, ಅದರಂತೆ ಇತ್ತೀಚೆಗಷ್ಟೇ ದರ್ಗಾದ ನವೀಕರಣ ಕಾರ್ಯ ಮುಗಿದು, ವಕ್ಫ್ ಮಂಡಳಿಯ ಅಧ್ಯಕ್ಷೆ ದಾರಕ್ಷನ್ ಅಂದ್ರಾಬಿಯವರ ನೇತೃತ್ವದಲ್ಲಿ ಇದರ ಅಧಿಕೃತ ಉದ್ಘಾಟನೆ ನಡೆಯಿತು. ಇನ್ನು, ಉದ್ಘಾಟನೆಯ ವೇಳೆ, ದರ್ಗಾದ ಒಳಭಾಗದಲ್ಲಿ ಒಂದು ಸ್ಮಾರಕ ಫಲಕವನ್ನು ಸ್ಥಾಪಿಸಲಾಯಿತು. ಅದರ ಮೇಲೆ ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಪ್ರತಿರೂಪವಿದೆ. ಆದ್ರೆ, ಈ ಚಿಹ್ನೆಯಲ್ಲಿ ಉಪಸ್ಥಿತ ಪ್ರಾಣಿಗಳ ಆಕಾರಗಳನ್ನು ಕೆಲವರು ವಿರೋಧಿಸಿದ್ದಾರೆ. ಮಾತ್ರವಲ್ಲದೇ ಅದನ್ನು ಕಲ್ಲಿನಿಂದ ಒಡೆದು ಕಿತ್ತು ಹಾಕಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಅಂದಹಾಗೆ ಇಸ್ಲಾಂ ಧರ್ಮದ ಅನ್ವಯ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ಪ್ರಾಣಿಗಳ ಪ್ರತಿಮೆಗಳಿದ್ದರೆ ಅದು ಅನ್ವಯಿಸದು. ಏಕೆಂದರೆ ಇಸ್ಲಾಮ್ ಒಂದು ಏಕದೇವೋಪಾಸಕ ಧರ್ಮವಾಗಿದ್ದು, ಇಲ್ಲಿ ಕೇವಲ ಒಬ್ಬ ದೇವನಲ್ಲೇ ನಂಬಿಕೆ ಇರಬೇಕು ಎಂಬ ಕಾರಣ ನೀಡಿ ಕೆಲವು ಮೂಲಭೂತವಾದಿಗಳು ಅದನ್ನು ವಿರೋಧಿಸಿದ್ದಾರೆ.