ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಶನಿವಾರ ಪಕ್ಷದ ಹಿರಿಯ ನಾಯಕ ಕೆ ಎ ಸೆಂಗೊಟ್ಟೈಯನ್ ಅವರನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ವಜಾಗೊಳಿಸಿದ್ದಾರೆ.
ಎಐಎಡಿಎಂಕೆ ತೊರೆದ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಹಿರಿಯ ನಾಯಕ ಸೆಂಗೊಟ್ಟೈಯನ್ ಅವರು ಹತ್ತು ದಿನಗಳ ಗಡುವು ನೀಡಿದ ಮಾರನೇ ದಿನವೇ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ದೀರ್ಘಕಾಲದ ನಿಷ್ಠಾವಂತ ಹಾಗೂ ಮಾಜಿ ಸಚಿವ ಸೆಂಗೊಟ್ಟೈಯನ್ ಅವರನ್ನು ಈರೋಡ್ ಗ್ರಾಮೀಣ ಪಶ್ಚಿಮ ಜಿಲ್ಲಾ ಘಟಕದ ಕಾರ್ಯದರ್ಶಿ ಮತ್ತು ಎಐಎಡಿಎಂಕೆಯ ಸಂಘಟನಾ ಕಾರ್ಯದರ್ಶಿ ಹುದ್ದೆಗಳಿಂದ ವಜಾ ಮಾಡಲಾಗಿದೆ.
ಸೆಂಗೊಟ್ಟೈಯನ್ ಅವರ ಬೆಂಬಲಿಗರ ಮೇಲೆಯೂ ಇಪಿಎಸ್ ಕಠಿಣ ಕ್ರಮ ಕೈಗೊಂಡಿದ್ದು, ಅವರಿಗೆ ಆಪ್ತರಾಗಿದ್ದ ಆರು ಜಿಲ್ಲಾ ಮಟ್ಟದ ಮುಖಂಡರನ್ನು ಅವರ ಜವಾಬ್ದಾರಿಗಳಿಂದ ವಜಾಗೊಳಿಸಲಾಯಿತು. ಅವರಲ್ಲಿ ನಂಬಿಯೂರ್ ಉತ್ತರ ಒಕ್ಕೂಟ ಕಾರ್ಯದರ್ಶಿ ತಂಬಿ ಅಲಿಯಾಸ್ ಕೆ ಎ ಸುಬ್ರಮಣಿಯನ್; ನಂಬಿಯೂರ್ ದಕ್ಷಿಣ ಒಕ್ಕೂಟ ಕಾರ್ಯದರ್ಶಿ ಎಂ ಈಶ್ವರಮೂರ್ತಿ ಅಲಿಯಾಸ್ ಚೆನ್ನೈ ಮಣಿ; ಗೋಬಿಚೆಟ್ಟಿಪಾಳಯಂ ಪಶ್ಚಿಮ ಒಕ್ಕೂಟ ಕಾರ್ಯದರ್ಶಿ ಎನ್ ಡಿ ಕುರುಂಜಿನಾಥನ್; ಅಂತಿಯೂರ್ ಉತ್ತರ ಒಕ್ಕೂಟ ಕಾರ್ಯದರ್ಶಿ ಎಂ ದೇವರಾಜ್; ಅಥಣಿ ಪಟ್ಟಣ ಪಂಚಾಯತ್ ಕಾರ್ಯದರ್ಶಿ ಎಸ್ ಎಸ್ ರಮೇಶ್ ಮತ್ತು ಅಥಣಿ ಪಟ್ಟಣ ಪಂಚಾಯತ್ ಉಪ ಕಾರ್ಯದರ್ಶಿ ವೇಲು ಅಲಿಯಾಸ್ ಟಿ ಮರುಧಮುತ್ತು ಅವರನ್ನು ವಜಾಗೊಳಿಸಲಾಗಿದೆ.
ಇದಲ್ಲದೆ, ಪಕ್ಷದ ಈರೋಡ್ ವಲಯ ಐಟಿ ವಿಭಾಗದ ಉಪ ಕಾರ್ಯದರ್ಶಿ ಕೆ ಎಸ್ ಮೋಹನ್ ಕುಮಾರ್ ಅವರನ್ನು ಸಹ ವಜಾಗೊಳಿಸಲಾಗಿದೆ.
ನಿನ್ನೆ ಪಕ್ಷದ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದ್ದ ಸೆಂಗೊಟ್ಟೈಯನ್ ಅವರು, ಈ ಹಿಂದೆ ಪಕ್ಷ ತೊರೆದ ಸದಸ್ಯರನ್ನು ಮತ್ತೆ ಒಗ್ಗೂಡಿಸಲು ನಾಯಕತ್ವವನ್ನು ಒತ್ತಾಯಿಸಿದ್ದರು. "ನಮ್ಮನ್ನು ತೊರೆದವರನ್ನು(ಬಣಗಳನ್ನು) ನಾವು ಮತ್ತೆ ಮರಳಿ ಪಡೆದರೆ, ನಾವು ಚುನಾವಣೆಯಲ್ಲಿ ಗೆಲ್ಲಬಹುದು. ನಮ್ಮನ್ನು ತೊರೆದವರನ್ನು ನಾವು ಸ್ವೀಕರಿಸಬೇಕು ಮತ್ತು ಸೇರಿಸಿಕೊಳ್ಳಬೇಕು ಎಂದು ಹೇಳಿದ್ದರು. ಯಾರು ಹಿಂತಿರುಗಬೇಕೆಂದು ಪ್ರಧಾನ ಕಾರ್ಯದರ್ಶಿ(ಇಪಿಎಸ್) ನಿರ್ಧರಿಸಬಹುದು. ಆದರೆ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ನಾಯಕರನ್ನು ಮತ್ತೆ ನೇಮಿಸಿಕೊಳ್ಳಬೇಕು. ಇದು ಸಂಭವಿಸದಿದ್ದರೆ, ಸಮಾನ ಮನಸ್ಕ ನಾಯಕರು ಒಂದಾಗಿ ಅದನ್ನು ಮಾಡುತ್ತಾರೆ ಎಂದು ಹೇಳಿದ್ದರು.