2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಅಲ್ಲಿಗೆ ಹೋಗುತ್ತಿದ್ದು, ಈಗಾಗಲೇ ಇಂಫಾಲ್ ತಲುಪಿದ್ದಾರೆ. ಅವರು ಆಗಮಿಸಿದಾಗ, ಪ್ರಧಾನಿಯನ್ನು ಇಂಫಾಲ್ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಮತ್ತು ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್ ಅವರು ಬರಮಾಡಿಕೊಂಡರು.
ನಂತರ ಮೋದಿ ಕುಕಿ ಸಮುದಾಯದ ಭದ್ರಕೋಟೆಯಾದ ಚುರಾಚಂದ್ಪುರವನ್ನು ತಲುಪಿದರು. ಕನಿಷ್ಠ 260 ಜೀವಗಳನ್ನು ಬಲಿತೆಗೆದುಕೊಂಡ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಿದ ಹಿಂಸಾಚಾರದಲ್ಲಿ ಇದು ಅತ್ಯಂತ ಹೆಚ್ಚು ಪರಿಣಾಮ ಬೀರಿದ ಪ್ರದೇಶಗಳಲ್ಲಿ ಒಂದಾಗಿತ್ತು.
ಭಾರೀ ಮಳೆಯಿಂದಾಗಿ, ಪ್ರಧಾನ ಮಂತ್ರಿಗಳು ಹೆಲಿಕಾಪ್ಟರ್ನಲ್ಲಿ ಮಿಜೋರಾಂನಿಂದ ಚುರಾಚಂದ್ಪುರಕ್ಕೆ ಹೋಗುವ ಬದಲು ಇಂಫಾಲ್ನಲ್ಲಿ ಇಳಿದು ಅಲ್ಲಿಂದ ಚುರಾಚಂದ್ಪುರಕ್ಕೆ ರಸ್ತೆ ಮೂಲಕ ಪ್ರಯಾಣಿಸಿದರು.
ಪ್ರಧಾನಿ ಸಮಾವೇಶದ ಸ್ಥಳಗಳಾದ ಇಂಫಾಲ್ನ ಸುಮಾರು 237 ಎಕರೆ ವಿಸ್ತೀರ್ಣದ ಕಾಂಗ್ಲಾ ಕೋಟೆ ಮತ್ತು ಚುರಾಚಂದ್ಪುರದ ಶಾಂತಿ ಮೈದಾನದಲ್ಲಿ ಮತ್ತು ಸುತ್ತಮುತ್ತ ರಾಜ್ಯ ಮತ್ತು ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ನಿನ್ನೆ ರಾತ್ರಿಯಿಂದ ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು, ಕಾಂಗ್ಲಾ ಕೋಟೆಯ ಕೆಲವು ಭಾಗಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತ್ತು. ಈ ಭೇಟಿಯ ಸಮಯದಲ್ಲಿ ಮೋದಿ ಅವರು ರಾಜ್ಯದಲ್ಲಿ 8,500 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದಾರೆ.
ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ ನಂತರ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಪ್ರಧಾನಿ ಭೇಟಿಗೆ ಖರ್ಗೆ ಟೀಕೆ
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು, ಈ ಅವಸರದ ಭೇಟಿ ನಿರಂತರ ಜನಾಂಗೀಯ ಹಿಂಸಾಚಾರದಿಂದ ಪ್ರಭಾವಿತರಾದವರಿಗೆ ಗಂಭೀರ ಅವಮಾನ ಎಂದು ಆರೋಪಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, 864 ದಿನಗಳ ಹಿಂಸಾಚಾರದ ಹೊರತಾಗಿಯೂ ಪ್ರಧಾನಿ ಎರಡು ವರ್ಷಗಳಿಂದ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅಲ್ಲಿ ಸುಮಾರು 300 ಜೀವಗಳನ್ನು ಬಲಿ ತೆಗೆದುಕೊಂಡಿತು, 67,000 ಜನರನ್ನು ಸ್ಥಳಾಂತರಿಸಿತು ಮತ್ತು 1,500 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಇಂದು ಪ್ರಧಾನಿಯವರ ಇಂಫಾಲ ಮತ್ತು ಚುರಚಂದ್ಪುರದಲ್ಲಿ ನಡೆಸುತ್ತಿರುವ ರೋಡ್ಶೋ ಪರಿಹಾರ ಶಿಬಿರಗಳಲ್ಲಿರುವ ಜನರ ಕೂಗು ಕೇಳದೆ ಹೇಡಿತನದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೋದಿ 46 ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ ಆದರೆ ಈ ದೇಶದ ನಾಗರಿಕರೊಂದಿಗೆ ಎರಡು ಮಾತುಗಳ ಸಹಾನುಭೂತಿಯನ್ನು ಹಂಚಿಕೊಳ್ಳಲು ಒಂದೇ ಒಂದು ಭೇಟಿ ಮಣಿಪುರಕ್ಕೆ ನೀಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.