ಮಸೀದಿ ಹೊರಗೆ ಸ್ಥಳೀಯ ಮುಸ್ಲಿಮರು ಮತ್ತು ಪೊಲೀಸರ ನಡುವಿನ ಘರ್ಷಣೆ ಚಿತ್ರ 
ದೇಶ

ಉತ್ತರ ಪ್ರದೇಶ: ಅನುಮತಿಯಿಲ್ಲದೆ 'I love Muhammad' ಜಾಥಾ, ಮುಸ್ಲಿಂ ಧರ್ಮಗುರು ಸೇರಿದಂತೆ 8 ಮಂದಿಯ ಬಂಧನ

ವಾರಣಾಸಿ ಪೊಲೀಸರು ನಗರದ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಜಾಥಾ ಮತ್ತು ಪೋಸ್ಟರ್‌ಗಳನ್ನು ಗುರಿಯಾಗಿಸಿಕೊಂಡು ‘ಐ ಲವ್ ಮುಹಮ್ಮದ್’ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ.

ಲಖನೌ: ಮುಸ್ಲಿಮರ 'ಐ ಲವ್ ಮೊಹಮ್ಮದ್ (I Love Muhammad) ಅಭಿಯಾನವನ್ನು ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಹತ್ತಿಕ್ಕುತ್ತಿರುವ ಪೊಲೀಸರು, ಖ್ಯಾತ ಧರ್ಮಗುರು ಸೇರಿದಂತೆ ಎಂಟು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ. ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ (Maulana Tauqeer Raza) ಸೇರಿದಂತೆ ಎಂಟು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.

ಶುಕ್ರವಾರ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ "ಮಾಸ್ಟರ್ ಮೈಂಡ್" ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ರಝಾ ಮತ್ತಿತರ ಏಳು ಜನರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಬರೇಲಿ ಜಿಲ್ಲೆಯಾದ್ಯಂತ ಅಭಿಯಾನಕ್ಕೆ ಸಂಬಂಧಿಸಿದಂತೆ ಹತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಪ್ರತಿಯೊಂದರಲ್ಲೂ 150 ರಿಂದ 200 ಮುಸ್ಲಿಮರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

ಪೊಲೀಸರ ಪ್ರಕಾರ, ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯ ಕೊತ್ವಾಲಿ ಪ್ರದೇಶದ ಮಸೀದಿಯ ಹೊರಗೆ 'ಐ ಲವ್ ಮುಹಮ್ಮದ್' ಪೋಸ್ಟರ್‌ಗಳನ್ನು ಹಿಡಿದ ಜನರ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಜಾಥಾಕ್ಕೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ಕಾರಣ ರಾಝಾ ಕೊನೆಯ ಕ್ಷಣದಲ್ಲಿ ಪ್ರತಿಭಟನೆ ರದ್ದುಗೊಳಿಸಿದ್ದಕ್ಕಾಗಿ ಮುಸ್ಲಿಂರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ವಾರಣಾಸಿಯಲ್ಲಿ ಅನುಮತಿಯಿಲ್ಲದೆ ‘I love Muhammad’ ಜಾಥಾ ನಡೆಸಿದ ಮತ್ತು ಪೋಸ್ಟರ್ ಹಾಕಿದ ನಾಲ್ವರನ್ನು ಬಂಧಿಸಲಾಗಿದೆ. ಇತರ 10 ಅಪರಿಚಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ವಾರಣಾಸಿ ಪೊಲೀಸರು ನಗರದ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಜಾಥಾ ಮತ್ತು ಪೋಸ್ಟರ್‌ಗಳನ್ನು ಗುರಿಯಾಗಿಸಿಕೊಂಡು ‘ಐ ಲವ್ ಮುಹಮ್ಮದ್’ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ಮದನ್‌ಪುರ, ಲಲ್ಲಾಪುರ ಮತ್ತು ಲೋಹ್ತಾದಲ್ಲಿ ಕಾರ್ಯಾಚರಣೆ ನಡೆಸಿದ ನಂತರ ಶನಿವಾರ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ದಾಲ್ಮಂಡಿಗೆ ತೆರಳಿದರು.

ದಾಲ್ಮಂಡಿ ಹೊರಠಾಣೆ ಪ್ರಭಾರಿ ಪ್ರಕಾಶ್ ಸಿಂಗ್ ಚೌಹಾಣ್ ನೀಡಿದ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸ್ಥಳೀಯರ ಮಾಹಿತಿ ಆಧರಿಸಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಮಧ್ಯೆ ಲೋಹ್ತಾದಲ್ಲಿ I love Muhammad’ ಪೋಸ್ಟರ್ ಹಿಡಿದು ಪ್ರಚೋದನಾಕಾರಿ ಘೋಷಣೆ ಕೂಗುತ್ತಾ ಸಾಗುತ್ತಿರುವ ಜಾಥಾವನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಮಹ್ಮದ್‌ಪುರ ಹೊರಠಾಣೆ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 12 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಅನುಮತಿಯಿಲ್ಲದೆ ಜಾಥಾ ನಡೆಸಿದ್ದಕ್ಕಾಗಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕಾಶಿ ವಲಯದ ಡಿಸಿಪಿ ಗೌರವ್ ಬನ್ಸಾಲ್ ಹೇಳಿದ್ದಾರೆ. ಈ ಹಿಂದೆ ಸಿಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಲಲ್ಲಾಪುರದಲ್ಲಿ ಇದೇ ರೀತಿಯ ಮೆರವಣಿಗೆ ನಡೆದಿತ್ತು.

ನಗರದ ಸಿಗ್ರಾ, ದಶಾಶ್ವಮೇಧ್, ಲೋಹ್ತಾ ಮತ್ತು ಚೌಕ್ ಪ್ರದೇಶಗಳಲ್ಲಿ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಬನ್ಸಾಲ್ ಖಚಿತಪಡಿಸಿದ್ದಾರೆ. ಪೋಸ್ಟರ್ ಗಳನ್ನು ತೆಗೆದು ನಗರದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅನುಮತಿ ಇಲ್ಲದೆ ಮೆರವಣಿಗೆಗಳನ್ನು ಸಹಿಸಲಾಗುವುದಿಲ್ಲ ಎಂದು ಡಿಸಿಪಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!