

ಬೆಂಗಳೂರು: ರೀಲ್ಸ್ ಗಾಗಿ ಜನ ಏನೆಲ್ಲಾ ಮಾಡ್ತಾರೆ ನೋಡಿ. ಬೆಂಗಳೂರಿನ ಕುಟುಂಬವೊಂದು ವೃದ್ಧ ವ್ಯಕ್ತಿಯನ್ನು ಗೋಣಿಚೀಲದಲ್ಲಿ ತುಂಬಿ "ಕೊರಿಯರ್" ಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇಬ್ಬರು ಮಹಿಳೆಯರು ಮತ್ತು ವೃದ್ಧರನ್ನು ಒಳಗೊಂಡ ಐವರ ಗುಂಪು, ವೈಯಾಲಿಕಾವಲ್ ಬಳಿಯ ವಿನಾಯಕ ಸರ್ಕಲ್ನಲ್ಲಿರುವ ಕೊರಿಯರ್ ಕಚೇರಿಗೆ ಹೋಗಿ, ಗೋಣಿ ಚೀಲದಲ್ಲಿ ತಂದಿದ್ದನ್ನು ಪಾರ್ಸೆಲ್ ಮಾಡಲು ಹೇಳಿದ್ದಾರೆ.
ಒಳಗೆ ಏನಿದೆ ಎಂದು ಸಿಬ್ಬಂದಿ ಕೇಳಿದಾಗ, ಕುಟುಂಬದವರು ಮೌನವಾಗಿಯೇ ಇದ್ದರು. ಇದರಿಂದ ಅಚ್ಚರಿಗೊಂಡ ಸಿಬ್ಬಂದಿ ಪಾರ್ಸೆಲ್ ತೆರೆದು ನೋಡಿದಾಗ ಶಾಕ್ ಆಗಿದ್ದಾರೆ. ವೃದ್ಧನೊಬ್ಬ ಉಸಿರಾಟದ ತೊಂದರೆಯಾಗಿ ಒದ್ದಾಡುತ್ತಿರುವುದು ಕಂಡುಬಂದಿದೆ. ಇಷ್ಟಾದರೂ ತಂಡ ಇವರನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಿ ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ.
ಚೀಲದಲ್ಲಿ ವೃದ್ಧ ವ್ಯಕ್ತಿ ಇರುವುದರಿಂದ ಕೋರಿಯರ್ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ನಿರಾಕರಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ಇದರಿಂದ ತಲೆಕೆಡಿಸಿಕೊಂಡ ಸಿಬ್ಬಂದಿ ಕೂಡಲೇ ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಸಲಿ ಕಥೆ ಬೆಳಕಿಗೆ ಬಂದಿದೆ. ಯುಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್ಗಳು ಹೇಗೆ ಹೆಚ್ಚಾಗಿ ಮಾರಾಟವಾಗುತ್ತವೆ ಎಂಬುದರ ಕುರಿತು ಜನರಿಗೆ ಸಂದೇಶ ಮಾಡಲು ಒಂದು ರೀಲ್ಸ್ ಮಾಡಲಾಯಿತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಗೋಣಿಚೀಲದಲ್ಲಿ ತುಂಬಿದ ವ್ಯಕ್ತಿ ಕುಟುಂಬದ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಈ ಸಂಬಂಧ ಕೊರಿಯರ್ ಏಜೆನ್ಸಿಯ ಮಾಲೀಕರು ಅಥವಾ ವ್ಯವಸ್ಥಾಪಕರು ದೂರು ದಾಖಲಿಸಿದರೆ ಏನಾದರೂ ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement