ಚೆನ್ನೈ: ಶನಿವಾರ ಸಂಜೆ ತಮಿಳುನಾಡಿನ ಕರೂರ್ ನಲ್ಲಿ ನಡೆದ ಟಿವಿಕೆ ಪಕ್ಷದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆ ಸಂಭವಿಸುತ್ತಲೇ ನಟ ವಿಜಯ್ (Actor Viajy) ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವಾಗ ರಸ್ತೆ ಮಾರ್ಗವಾಗಿ ಆಗಮಿಸಿದ್ದ ವಿಜಯ್, ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 10:10 ಕ್ಕೆ ಚಾರ್ಟರ್ಡ್ ವಿಮಾನದಲ್ಲಿ ಒಂದು ಮಾತನ್ನೂ ಹೇಳದೆ ಚೆನ್ನೈಗೆ ತೆರಳಿದರು ಎಂದು ಹೇಳಲಾಗಿದೆ.
ಅಂತೆಯೇ ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದ ಮಾಧ್ಯಮ ಸಿಬ್ಬಂದಿಗಳಿಗೂ ನಟ ವಿಜಯ್ ಪ್ರತಿಕ್ರಿಯೆ ನೀಡದೇ ವಿಮಾನ ಏರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದುರಂತದ ಬಳಿಕ ನಟ ವಿಜಯ್ ಕರೂರು ಆಸ್ಪತ್ರೆಗಳಿಗೆ ಭೇಟಿ ನೀಡಿ ಸಂತ್ರಸ್ಥ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ ಎಂಬ ನಿರೀಕ್ಷೆಗಳಿದ್ದವು. ಆದರೆ ವಿಜಯ್ ತಮ್ಮ ಚಾರ್ಟೆಡ್ ವಿಮಾನದ ಮೂಲಕ ಚೆನ್ನೈಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ನಟ ವಿಜಯ್ ಬಂಧನಕ್ಕೆ ಆಗ್ರಹ
ಇದೇ ವೇಳೆ ಕಾಲ್ತುಳಿತಕ್ಕೆ ನಟ ವಿಜಯ್ ಅವರೇ ಕಾರಣ ಎಂದು ಆರೋಪಿಸಿರುವ ಡಿಎಂಕೆ ನಾಯಕರು ಕೂಡಲೇ ವಿಜಯ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ""ಟಿವಿಕೆ ಕಾರ್ಯಕ್ರಮದ ಆಯೋಜಕರು ಕೇವಲ 10000 ಜನರು ರ್ಯಾಲಿಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು.
ಆದರೆ 50,000 ರಿಂದ 1 ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು ಮತ್ತು ತಮಿಳುನಾಡು ಪೊಲೀಸರು ವಿಧಿಸಿದ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಜೀವಗಳಿಗೆ ಅಪಾಯವನ್ನುಂಟುಮಾಡಲಾಗಿದೆ. ಕಳೆದುಹೋದ ಪ್ರತಿಯೊಂದು ಜೀವಕ್ಕೂ ವಿಜಯ್ ಜವಾಬ್ದಾರನಾಗಿರುತ್ತಾನೆ. ಅವರನ್ನು ಕೂಡಲೇ ಬಂಧಿಸಬೇಕು" ಎಂದು ಡಿಎಂಕೆ ವಕ್ತಾರ ಐಟಿ ವಿಭಾಗದ ಕಾರ್ಯದರ್ಶಿ ಸೇಲಂ ಧರಣಿಧರನ್ ಟ್ವಿಟರ್ನಲ್ಲಿ ವೀಡಿಯೊದಲ್ಲಿ ತಿಳಿಸಿದ್ದಾರೆ.
ಜನ ರೀಲ್ ಜೀವನಕ್ಕೂ ರಿಯಲ್ ಜೀವನಕ್ಕೂ ವ್ಯತ್ಯಾಸ ತಿಳಿದುಕೊಳ್ಳಬೇಕು
ಇನ್ನು ಈ ಘಟನೆಯನ್ನು 'ಭಯಾನಕ' ಎಂದು ಹೇಳಿರುವ ಸೇಲಂ ಧರಣಿಧರನ್, "ಜನರು ರೀಲ್ ಜೀವನ ಮತ್ತು ನಿಜ ಜೀವನದ ನಡುವೆ ವ್ಯತ್ಯಾಸವನ್ನು ಕಲಿಯಬೇಕು. ನೀವು ಮೊದಲು ನಿಮ್ಮ ಸ್ವಂತ ಜೀವನವನ್ನು ನೋಡಿಕೊಳ್ಳಲು ಕಲಿಯಬೇಕು. ಯಾರಾದರೂ ನಟನಿಗಾಗಿ ಐದು-ಆರು ಗಂಟೆಗಳ ಕಾಲ ಏಕೆ ಕಾಯಬೇಕು?
ಮೊದಲ ಸಭೆಯನ್ನು ನಾಮಕ್ಕಲ್ನಲ್ಲಿ 8:45 ಕ್ಕೆ ಕಾರ್ಯಕ್ರಮ ಆಯೋಜನೆಯಾಗಿದ್ದರೆ, ಈ ಮಹಾಪುರುಷ 8:45 ಕ್ಕೇ ವಿಮಾನ ಏರಿ ನಾಮಕ್ಕಲ್ಗೆ ನಾಲ್ಕು ಗಂಟೆ ತಡವಾಗಿ ತಲುಪುತ್ತಾನೆ. ಈತ ಹೀಗೆ ಮಾಡುವುದು ಇದೇ ಮೊದಲೇನಲ್ಲ... ತನ್ನ ಹಿಂದಿನ ರ್ಯಾಲಿಯಲ್ಲಿಯೂ ಸಹ ಹೀಗೆ ಮಾಡಿದ್ದ. ಜನರು ಏಕೆ ಕಾಯುತ್ತಿದ್ದಾರೆ? ಜನರು ಏಕೆ ಕಾಯಬೇಕು? "ಅದು ನನ್ನ ಮೊದಲ ಪ್ರಶ್ನೆ ಎಂದು ಪ್ರಶ್ನಿಸಿದ್ದಾರೆ.
ಬಳಿಕ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಸಿಬ್ಬಂದಿ ಈತನ ಉತ್ತರಕ್ಕಾಗಿ ನಿಂತಿದ್ದರೆ ಅದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಓಡಿ ಹೋದ. ತನ್ನ ಜವಾಬ್ದಾರಿಗಳಿಂದ ಓಡಿಹೋಗುವವರನ್ನು ನೀವು ಆಯ್ಕೆ ಮಾಡಲು ಬಯಸುತ್ತೀರಾ? ಜನರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಯಾವುದಕ್ಕಾಗಿ ಯಾರಿಗಾಗಿ ಬಂದರು?. ಒಂದೇ ಒಂದು ಕಾರಣಕ್ಕಾಗಿ, ಅವನನ್ನು ನೋಡಲು.
ಏಕೆಂದರೆ ಅವರು ಅವನನ್ನು ಇಷ್ಟಪಟ್ಟರು ಅಥವಾ ಯಾವುದೇ ರೀತಿಯಲ್ಲ, ಅವನನ್ನು ನೋಡಲು ಬಂದರು. ಆದರೆ ಈತ ಮಾಡಿದ್ದೇನು? ಈ ದುರಂತದಲ್ಲಿ 40 ಜನರು ಸತ್ತಿದ್ದಾರೆ. ಸತ್ತವರ ಪೈಕಿ ಬಹುತೇಕರು ತನ್ನ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಗಳಾಗಿರಬಹುದು. ಈಗ ಆ ಕುಟುಂಬಗಳ ಪರಿಸ್ಥಿತಿ ಏನು? ಅವರಿಗೆ ಯಾರು ಗತಿ.
ಈ ಒಂದು ದುರಂತ ಅವರ ಕುಟುಂಬವನ್ನೇ ಬೀದಿಗೆ ತರಬಹುದು ಅಥವಾ ನಾಶಪಡಿಸಬಹುದು ಅಲ್ಲವೇ? ಆದ್ದರಿಂದ ಕನಿಷ್ಠ ಪಕ್ಷ ವಿಜಯ್ ಅಲ್ಲಿ ನಿಂತು, ಸಂತಾಪ ಸೂಚಿಸಿ, "ನಾನು ಅವರನ್ನು ನೋಡಿಕೊಳ್ಳುತ್ತೇನೆ" ಎಂದು ಹೇಳಬೇಕಾಗಿತ್ತು. ಆದರೆ ಆತ ಅಲ್ಲಿಂದ ಓಡಿ ಹೋದ. ಇದು ಭಯಾನಕ. ರಾಜಕೀಯ ನಾಟಕವಲ್ಲ. ಯಾರಾದರೂ ಬಂದು ಏನು ಬೇಕಾದರೂ ಮಾತನಾಡಬಹುದು ಎಂದು ಧರಣೀಧರನ್ ಕಿಡಿಕಾರಿದ್ದಾರೆ.