ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಬಾಕಿ ಇರುವಂತೆಯೇ ಸಂಸದ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ ರಾಜಾ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ರಾಜ್ಯದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಆಡಿಯೋ ಕ್ಲಿಪ್ ನಲ್ಲಿ, ರಾಜಾ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಡಿಎಂಕೆ ನಾಯಕತ್ವದ ಬಗ್ಗೆ ಟೀಕೆಗಳನ್ನು ಮಾಡುತ್ತಿರುವುದು ಕೇಳಿಬರುತ್ತಿದೆ. ಈ ಕ್ಲಿಪ್ ಸ್ಟಾಲಿನ್ ನಾಯಕತ್ವಕ್ಕೆ "ಅನರ್ಹ" ಎಂದು ಸೂಚಿಸುತ್ತದೆ ಮತ್ತು 2 ಜಿ ಸ್ಪೆಕ್ಟ್ರಮ್ ಹಗರಣ ಪ್ರಕರಣದಲ್ಲಿ ರಾಜಾ ಜೈಲು ಶಿಕ್ಷೆ ಅನುಭವಿಸಿದ ಬಗ್ಗೆ ಉಲ್ಲೇಖಗಳನ್ನು ಒಳಗೊಂಡಿದೆ.
ಆರಂಭದಲ್ಲಿ ಯಾರೂ ಅವರನ್ನು ಜೈಲಿನಲ್ಲಿ ಭೇಟಿ ಮಾಡಲಿಲ್ಲ ಎಂದು ಅವರು ಹೇಳುತ್ತಾರೆ. ಶೀಘ್ರದಲ್ಲೇ ಮಹತ್ವದ ಸ್ಥಾನಕ್ಕೆ ಏರುತ್ತಾರೆ ಎಂಬ ಹೇಳಿಕೆಗಳನ್ನು ಆಡಿಯೋ ಒಳಗೊಂಡಿದೆ. ಅಂದಿನಿಂದ ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ಆಡಳಿತಾರೂಢ ಡಿಎಂಕೆಯನ್ನು ಗುರಿಯಾಗಿಸಿಕೊಂಡು ಈ ಕ್ಲಿಪ್ ಅನ್ನು ಬಳಸುತ್ತಿವೆ.
ಈ ಆಡಿಯೋ ಕ್ಲಿಪ್ ಗೆ ಸಂಬಂಧಿಸಿದಂತೆ ಯುಟ್ಯೂಬ್ ಚಾನೆಲ್ವೊಂದಕ್ಕೆ DMK ಸಂಸದ ರಾಜಾ ಲೀಗಲ್ ನೋಟಿಸ್ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸಿ ದುರುದ್ದೇಶದಿಂದ ಈ ರೆಕಾರ್ಡ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಡಿಎಂಕೆ ಪಕ್ಷದ ದಿವಂಗತ ಎಂ ಕರುಣಾನಿಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಪರಿಶೀಲಿಸದ ಕ್ಲಿಪ್ ಅನ್ನು ಬಳಸಿದ್ದಾರೆ ಎಂದು ಟೀಕಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜಾ ಪೋಸ್ಟ್ ಮಾಡಿದ್ದು, ತಮ್ಮ ಭಾಷಣವನ್ನು ತಪ್ಪಾಗಿ ನಿರೂಪಿಸಲು AI ತಂತ್ರಜ್ಞಾನವನ್ನು ಬಳಸಿಕೊಂಡು ಆಡಿಯೋ ರಚಿಸಲಾಗಿದೆ.ಈ ಬಗ್ಗೆ ನಾನು ನನ್ನ ವಕೀಲರ ಮೂಲಕ ಯು ಟ್ಯೂಬ್ ಚಾನೆಲ್ ಗೆ ಲೀಗಲ್ ನೋಟಿಸ್ ಕಳುಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಕವಿ ಭಾರತಿಯಾರ್ ಅವರ ಪದ್ಯಗಳನ್ನು ಉಲ್ಲೇಖಿಸಿ, ಎಐಎಡಿಎಂಕೆ ಮುಖ್ಯಸ್ಥರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.