ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು “ಹೈದರಾಬಾದ್ಗೆ ಓಡಿಹೋಗಿದ್ದಾರೆ” ಎಂದು ಆರೋಪಿಸಿದ್ದಾರೆ. ಹಿಮಂತ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿದ್ದ ಎಫ್ ಐಆರ್ ಪ್ರಕರಣದ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಅವರ ನಿವಾಸದಲ್ಲಿ ಶೋಧ ನಡೆಸುತ್ತಿರುವ ಸಂದರ್ಭದಲ್ಲಿಯೇ ನಡೆದಿದೆ.
ಎಫ್ಐಆರ್ ಕಾಂಗ್ರೆಸ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದೆ. ಕಾಂಗ್ರೆಸ್ ಶರ್ಮಾ ಅವರ ಪತ್ನಿಯ ಬಳಿ ಹಲವಾರು ಪಾಸ್ಪೋರ್ಟ್ಗಳಿವೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಪವನ್ ಖೇರಾ ನಿನ್ನೆ ಗುವಾಹಟಿಯಿಂದ ಓಡಿಹೋಗಿದ್ದಾರೆ. ಮಾಧ್ಯಮಗಳ ಮೂಲಕ ನನಗೆ ತಿಳಿದಂತೆ, ಪೊಲೀಸರು ದೆಹಲಿಯ ಅವರ ನಿವಾಸಕ್ಕೆ ಹೋಗಿದ್ದಾರೆ. ಆದರೆ ಅವರು ಹೈದರಾಬಾದ್ಗೆ ತೆರಳಿದ್ದಾರೆ. ಕಾನೂನು ತನ್ನ ದಾರಿಯಲ್ಲಿ ನಡೆಯುತ್ತದೆ ಎಂದು ಸಾರ್ವಜನಿಕ ಸಭೆಯಲ್ಲಿ ಶರ್ಮಾ ಹೇಳಿದರು.
ಅಸ್ಸಾಂ ಪೊಲೀಸ್ ತಂಡವು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ದೆಹಲಿ ನಿವಾಸದಲ್ಲಿ ವಿಚಾರಣೆಗಾಗಿ ಹಾಜರಾಗಿದೆ. ಅವರು ದೆಹಲಿ ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ನೀಡಿದ ನಂತರ, ಸ್ಥಳೀಯ ಪೊಲೀಸ್ ತಂಡವೂ ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.
ದೆಹಲಿ ಮತ್ತು ಗುವಾಹಟಿಯಲ್ಲಿ ನಡೆದ ಸಭೆಗಳಲ್ಲಿ, ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮತ್ತು ಅಸ್ಸಾಂ ಘಟಕದ ಅಧ್ಯಕ್ಷ ಗೌರವ್ ಗೊಗೊಯ್, ಸಿಎಂ ಹಿಮಂತ್ ಶರ್ಮಾ ಅವರ ಪತ್ನಿಗೆ ಯುಎಇ, ಈಜಿಪ್ಟ್ ಮತ್ತು ಆಂಟಿಗುವಾ & ಬರ್ಬುಡಾ ದೇಶಗಳ ಪಾಸ್ಪೋರ್ಟ್ಗಳಿವೆ ಎಂದು ಆರೋಪಿಸಿದ್ದರು. ಜೊತೆಗೆ ದುಬೈನಲ್ಲಿ ಆಸ್ತಿಗಳು ಮತ್ತು ಅಮೆರಿಕದ ವ್ಯೋಮಿಂಗ್ನಲ್ಲಿ ಕಂಪನಿ ಹೊಂದಿದ್ದಾರೆ ಎಂದೂ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಹಿಮಂತ ಶರ್ಮಾ, ಕಾಂಗ್ರೆಸ್ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಗುಂಪಿನಿಂದ ಪಡೆದ ತಪ್ಪು ಮಾಹಿತಿಯನ್ನು ಬಳಸಿಕೊಂಡು ಆರೋಪ ಮಾಡಿದೆ ಎಂದು ಆರೋಪಿಸಿದ್ದರು. ಇದು ಅಸ್ಸಾಂ ಚುನಾವಣೆಯನ್ನು ಪ್ರಭಾವಿಸಲು ಮಾಡಿದ ಪ್ರಯತ್ನವಾಗಿದ್ದು, ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದರು.
ಇದರ ನಡುವೆ, ರಿನಿಕಿ ಭುಯಾನ್ ಶರ್ಮಾ ತಮ್ಮ ಎಫ್ಐಆರ್ ದಾಖಲಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡು, ಆರೋಪಗಳು ಗಂಭೀರವಾಗಿರುವುದರಿಂದ ಅವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.