ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ 
ದೇಶ

EC-TMC ಸಭೆಯಲ್ಲಿ ಕೋಲಾಹಲ: ಟಿಎಂಸಿ ನಾಯಕರಿಗೆ 'ಇಲ್ಲಿಂದ ತೊಲಗಿ' ಎಂದ CEC; ಡೆರೆಕ್ ಒಬ್ರಿಯಾನ್ ಆಕ್ರೋಶ..!

ನಮ್ಮ ನಿಯೋಗವು ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳಿಗೆ ಈವರೆಗೆ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆ ಬಗ್ಗೆ ಚರ್ಚಿಸಲು ನಿಯೋಗವು ಆಯುಕ್ತರನ್ನು ಭೇಟಿ ಮಾಡಿತ್ತು.

ನವದೆಹಲಿ: ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರನ್ನು ಟಿಎಂಸಿ ನಾಯಕರ ನಿಯೋಗವು ಮಂಗಳವಾರ ಭೇಟಿ ಮಾಡಿದ್ದು, ಈ ವೇಳೆ ಟಿಎಂಸಿ ನಾಯಕರು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಡುವೆ ಜಟಾಪಟಿ ನಡೆದಿದೆ.

ಭೇಟಿ ಟಿಎಂಸಿ ನಾಯಕರಿಗೆ ಜ್ಞಾನೇಶ್‌ ಕುಮಾರ್‌ ಅವರು ‘ಗೆಟ್‌ ಲಾಸ್ಟ್‌’ (ತೊಲಗಿ ಇಲ್ಲಿಂದ) ಎಂದು ನಿಂದಿಸಿದ್ದಾರೆ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಅವರು ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ಕಚೇರಿಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಭೆ ಆರಂಭವಾದ ಕೇವಲ 7 ನಿಮಿಷಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ನಮಗೆ ಏನು ಹೇಳಿದರು ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಅವರು ನಮಗೆ ‘ಗೆಟ್ ಲಾಸ್ಟ್’ ಎಂದು ಹೇಳಿದರು. ಹಾಗಾಗಿ ನಾವು ಹೊರಬಂದೆವು” ಎಂದು ವಿವರಿಸಿದ್ದಾರೆ.

ನಮ್ಮ ನಿಯೋಗವು ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳಿಗೆ ಈವರೆಗೆ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆ ಬಗ್ಗೆ ಚರ್ಚಿಸಲು ನಿಯೋಗವು ಆಯುಕ್ತರನ್ನು ಭೇಟಿ ಮಾಡಿತ್ತು.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಉನ್ನತ ಅಧಿಕಾರಿಗಳು ಮತ್ತು ಪೊಲೀಸರ ವರ್ಗಾವಣೆಯ ವಿಷಯವನ್ನೂ ನಿಯೋಗವು ಪ್ರಸ್ತಾಪಿಸಿತ್ತು. “ಚುನಾವಣಾ ಆಯುಕ್ತರನ್ನು ‘ನೀವು ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದೀರಿ, ಹೀಗಿರುವಾಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಹೇಗೆ ನಡೆಸಲು ಬಯಸುತ್ತೀರಿ’ ಎಂದು ನಾವು ಕೇಳಿದೆವು. ಅದಕ್ಕೆ ಅವರು ‘ಗೆಟ್ ಲಾಸ್ಟ್’ ಎಂದರು. ಇಂದು ನಾನು ಕಂಡಿದ್ದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ನಮ್ಮೊಂದಿಗೆ ಆಯುಕ್ತರು ನಡೆಸಿದ ಸಭೆಯ ಆಡಿಯೋ ಅಥವಾ ವಿಡಿಯೋವನ್ನು ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದರು.

ಈ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದ್ದು, “ಒಬ್ರಿಯಾನ್ ಅವರು ಮುಖ್ಯ ಚುನಾವಣಾ ಆಯುಕ್ತರ ಮೇಲೆ ಕಿರುಚಾಡಿದರು ಮತ್ತು ‘ಬಾಯಿ ಮುಚ್ಚಿ’ ಎಂದು ಗದರಿದರು ಎಂದು ಹೇಳಿದೆ.

ಸಭಾಂಗಣದ ಘನತೆಯನ್ನು ಕಾಪಾಡುವಂತೆ ಜ್ಞಾನೇಶ್‌ ಕುಮಾರ್ ಅವರು ಒಬ್ರಿಯಾನ್ ಅವರಿಗೆ ವಿನಂತಿಸಿದರು. ಕಿರುಚಾಟ ಮತ್ತು ಅಸಭ್ಯ ವರ್ತನೆ ಸೂಕ್ತವಲ್ಲ” ಎಂದು ಹೇಳಿದರು ಎಂದು ತಿಳಿಸಿದೆ.

ಈ ನಡುವೆ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲೂ ಪೋಸ್ಟ್‌ ಮಾಡಿರುವ ಆಯೋಗವು, ಬಂಗಾಳದ ಆಡಳಿತಾರೂಢ ಟಿಎಂಸಿಗೆ ‘ಅಂತಿಮ ಎಚ್ಚರಿಕೆ’. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಗಳು ಖಂಡಿತವಾಗಿಯೂ: ಭಯಮುಕ್ತ, ಹಿಂಸಾಚಾರ ಮುಕ್ತ, ಬೆದರಿಕೆ ಮುಕ್ತ ಹಾಗೂ ಯಾವುದೇ ಅಕ್ರಮಗಳಿಲ್ಲದೆ ನಡೆಯಲಿವೆ” ಎಂದು ಹೇಳಿದೆ.

ಏತನ್ಮಧ್ಯೆ ಚುನಾವಣಾ ಆಯೋಗದ ಆರೋಪ ಮತ್ತು ಪೋಸ್ಟ್‌ಅನ್ನು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಅಲ್ಲಗಳೆದಿದ್ದಾರೆ. ಆಯೋಗ ಹೇಳುತ್ತಿರುವ ರೀತಿಯ ಯಾವುದೇ ಸಂಭಾಷಣೆ ನಡೆದಿಲ್ಲ. ಜ್ಞಾನೇಶ್‌ ಕುಮಾರ್ ಅವರೇ ಅಪರಾಧಿ. ಅವರು ವ್ಯಾನಿಶ್‌ ಕುಮಾರ್” ಎಂದು ಲೇವಡಿ ಮಾಡಿದ್ದಾರೆ.

ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಮಾತನಾಡಿ, “ಆಯೋಗದ ಸೋಷಿಯಲ್ ಮೀಡಿಯಾ ಪೋಸ್ಟ್ ಸಂಪೂರ್ಣ ಸುಳ್ಳು. ನಮ್ಮ ನಾಲ್ಕು ಸದಸ್ಯರ ನಿಯೋಗಕ್ಕೆ ಆಯುಕ್ತರು ಹೇಳಿದ್ದು. ಕೇವಲ ಎರಡು ಸಾಲುಗಳನ್ನು ಮಾತ್ರ. ಮೊದಲನೆಯದು: ‘ನಿಮ್ಮ ಅಧಿಕೃತ ಸಹಿದಾರ ಎಲ್ಲಿದ್ದಾರೆ?’ ಮತ್ತು ಎರಡನೆಯದು ಅತ್ಯಂತ ನಾಚಿಕೆಗೇಡಿನ ಪದಗಳು: ‘ಗೆಟ್ ಲಾಸ್ಟ್’ ಎಂದಿರುವುದು” ಎಂದು ಆರೋಪಿಸಿದ್ದಾರೆ.

ಸಂಸದರಾದ ಸಾಕೇತ್ ಗೋಖಲೆ ಮತ್ತು ಮೇನಕಾ ಗುರುಸ್ವಾಮಿ ಕೂಡ ನಿಯೋಗದ ಭಾಗವಾಗಿದ್ದು, ಅವರಿಬ್ಬರೂ ಕೂಡ ಆಯೋಗದ ಆರೋಪವನ್ನು ತಳ್ಳಿಹಾಕಿದ್ದಾರೆ.

“ಆಯೋಗದ ಆರೋಪ ಸಂಪೂರ್ಣ ಸುಳ್ಳು. ನಾನು ವೈಯಕ್ತಿಕವಾಗಿ ಸಭೆಯಲ್ಲಿ ಹಾಜರಿದ್ದೆ. ಜ್ಞಾನೇಶ್‌ ಕುಮಾರ್ ಹೇಳಿದ್ದು, ಕೇವಲ ‘ಗೆಟ್ ಲಾಸ್ಟ್’ ಎಂಬ ಪದ ಮಾತ್ರ. ಸಭೆಯ ಸಂಭಾಷಣೆಯ ವಿವರಗಳನ್ನು ಅವರು ಬಿಡುಗಡೆ ಮಾಡಬೇಕು. ಸತ್ಯದ ಅನಾವರಣವಾಗಬೇಕು” ಎಂದು ಗೋಖಲೆ ಒತ್ತಾಯಿಸಿದ್ದಾರೆ.

294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯ ಮತದಾನವು ಎರಡು ಹಂತಗಳಲ್ಲಿ ನಡೆಯಲಿದೆ: ಮೊದಲ ಹಂತ 23 ಏಪ್ರಿಲ್, ಎರಡನೇ ಹಂತ 29 ಏಪ್ರಿಲ್, ಮತ ಎಣಿಕೆ 4 ಮೇ ರಂದು ನಡೆಯಲಿದೆ.

ಟಿಎಂಸಿ ಪಕ್ಷವು ರಾಜ್ಯದಲ್ಲಿ ನಡೆಸಲಾದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಶೀಲನೆ (SIR) ವಿರುದ್ಧ ವಿರೋಧ ವ್ಯಕ್ತಪಡಿಸಿದೆ. ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕಲು ಬಿಜೆಪಿ ಪರವಾಗಿ ಇಸಿಐ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ.

ಟಿಎಂಸಿಯ ಪ್ರಕಾರ, 60 ಲಕ್ಷ ಮತದಾರರನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗಿದೆ, ಇದರಲ್ಲಿ 27 ಲಕ್ಷ ಮಂದಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. SIR ನಿರ್ವಹಣೆಯ ನಂತರ ಪಶ್ಚಿಮ ಬಂಗಾಳದ ಒಟ್ಟು ಮತದಾರರ ಸಂಖ್ಯೆ 7.04 ಕೋಟಿ (7,04,59,284) ಆಗಿದೆ. ಮೊದಲು ಪಟ್ಟಿಯಲ್ಲಿದ್ದ 7.66 ಕೋಟಿ (7,66,37,529) ಮತದಾರರಿಗಿಂತ 61 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕಡಿತವಾಗಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ