ನವದೆಹಲಿ: ಕೇರಳದ ಕಾಂಗ್ರೆಸ್ ಸಂಸದ ಹಾಗೂ ಪಕ್ಷದ ಹಿರಿಯ ನಾಯಕ ಶಶಿ ತರೂರ್ ತಮ್ಮದೇ ಹಿರಿಯ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರೆಸಿದ್ದು, ಈ ಬಾರಿ ಗುಜರಾತಿಗಳನ್ನು ಅನಕ್ಷರಸ್ಥರು ಎಂದ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಾಟಿ ಬೀಸಿದ್ದಾರೆ.
ಹೌದು.. ಈ ಹಿಂದೆ ಕೇರಳದ ಇಡುಕ್ಕಿಯಲ್ಲಿ ನಡೆದ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಕೇರಳಿಗರನ್ನು ಹೊಗಳುವ ಭರದಲ್ಲಿ ಗುಜರಾತ್ ಪ್ರಜೆಗಳನ್ನು ಅನಕ್ಷರಸ್ಥರು ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಶಶಿತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಮ್ಮ ಗುಣಮಟ್ಟವನ್ನು ನಾವೇ ಕೆಳಮಟ್ಟಕ್ಕೆ ಇಳಿಸಬಾರದು" ಎಂದು ಹೇಳುವ ಮೂಲಕ ಪರೋಕ್ಷ ಟಾಂಗ್ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಈಗಾಗಲೇ ಬಿಜೆಪಿ ನಾಯಕರು ಹಿಗ್ಗಾಮುಗ್ಗಾ ಟೀಕಾ ಪ್ರಹಾರವನ್ನೇ ನಡೆಸುತ್ತಿದ್ದಾರೆ. ಗುಜರಾತ್ ಕಾಂಗ್ರೆಸ್ ಘಟಕ ಕೂಡ ಈ ಬಗ್ಗೆ ಮೌನವಹಿಸಿದ್ದು, ಆದರೆ ಶಶಿ ತರೂರ್ ಮಾತ್ರ ಈ ಬಗ್ಗೆ ಮಾತನಾಡುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕರ ಹುಬ್ಬೇರುವಂತೆ ಮಾಡಿದ್ದಾರೆ.
ಪಿಟಿಐ ಸುದ್ದಿವಾಹಿನಿ ಜೊತೆ ಮಾತನಾಡಿದ ಶಶಿತರೂರ್, "ರಾಜಕೀಯ ಭಾಷಣದ ಗುಣಮಟ್ಟ ಕುಸಿಯುತ್ತಿದೆ, ನಮ್ಮ ಗುಣಮಟ್ಟವನ್ನು ಕೆಟ್ಟ ಭಾಷೆ ಬಳಸುವವರ ಮಟ್ಟಕ್ಕೆ ಇಳಿಸಬಾರದು" ಎಂದು ಹೇಳಿದರು.
"ಸಾಮಾನ್ಯವಾಗಿ, ರಾಜಕೀಯ ಭಾಷಣದಲ್ಲಿನ ಕುಸಿತವನ್ನು ನಾನು ಹಿಂದೆ ವಿಷಾದಿಸಿದ್ದೇನೆ. ದ್ವೇಷ ಭಾಷಣಕ್ಕಾಗಿ ಅಸ್ಸಾಂ ಮುಖ್ಯಮಂತ್ರಿಯ ವಿರುದ್ಧ ಪ್ರಕರಣಗಳು ದಾಖಲಾಗಿರುವುದನ್ನು ನಾವು ನೋಡಿದ್ದೇವೆ. ಅದು ನಮ್ಮ ರಾಜಕೀಯದ ದಿಕ್ಕಾಗಬಾರದು. ಮತ್ತು ರಾಜಕೀಯದಲ್ಲಿ ಕೆಟ್ಟ ಭಾಷೆಯನ್ನು ಬಳಸುವವರ ಮಾನದಂಡಗಳಿಗೆ ನಮ್ಮ ಮಾನದಂಡಗಳನ್ನು ಇಳಿಸಬಾರದು ಎಂದು ನಾನು ಹೇಳಲೇಬೇಕು." ಎಂದರು.
ಅಂತೆಯೇ "ಸಾರ್ವಜನಿಕ ಚರ್ಚೆಯನ್ನು ಸ್ಪಷ್ಟವಾಗಿ ಒರಟಾಗಿಸುವ ಭಾಷೆಯನ್ನು ಬಳಸುವ ಬದಲು, ನಮ್ಮ ಪರವಾಗಿ ಮತ್ತು ಇತರರ ವಿರುದ್ಧ ಮತ ಚಲಾಯಿಸಲು ಉತ್ತಮ ಕಾರಣಗಳನ್ನು ನೀಡುವ ಮೂಲಕ ನಾವೆಲ್ಲರೂ ಸಾರ್ವಜನಿಕರನ್ನು ಗೌರವಿಸುತ್ತೇವೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ" ಎಂದು ತರೂರ್ ಹೇಳಿದರು.
ಖರ್ಗೆ ಹೇಳಿದ್ದೇನು?
ಕೇರಳದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಜನರನ್ನು 'ಅನಕ್ಷರಸ್ಥರು' ಎಂದು ಕರೆದಿದ್ದರು. ಅದೇ ಸಮಯದಲ್ಲಿ, ನರೇಂದ್ರ ಮೋದಿ ಅಥವಾ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಕೇರಳದ ಜನರು "ಬಹಳ ಬುದ್ಧಿವಂತರು ಮತ್ತು ವಿದ್ಯಾವಂತರು". ಅವರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಖರ್ಗೆ ಬಣ್ಣಿಸಿದ್ದರು.
ಬಿಜೆಪಿ ವ್ಯಾಪಕ ಟೀಕೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಖರ್ಗೆ ಅವರ ಹೇಳಿಕೆಯನ್ನು ಒಪ್ಪುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದರು.
ಅಲ್ಲದೆ "ಈ ಹೇಳಿಕೆಯನ್ನು ಅವರು ಒಪ್ಪುತ್ತಾರೆಯೇ? ರಾಹುಲ್ ಗಾಂಧಿಗೆ ಏನಾದರೂ ಬುದ್ಧಿ ಇದ್ದರೆ, ಅವರು ಈ ಹೇಳಿಕೆಯಿಂದ ದೂರವಿರಬೇಕು, ಖಂಡಿಸಬೇಕು ಮತ್ತು ಕ್ಷಮೆಯಾಚಿಸಬೇಕು" ಎಂದು ಪ್ರಸಾದ್ ಹೇಳಿದರು.
ಖರ್ಗೆ ಅವರು ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ "ಕಾಂಗ್ರೆಸ್ ಅಧ್ಯಕ್ಷರಾಗಿ ಉಳಿಯಲು ಅರ್ಹರಲ್ಲ" ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು ಮತ್ತು ಅವರು "ಎಲ್ಲಾ ಘನತೆಯನ್ನು ತ್ಯಜಿಸಿದ್ದಾರೆಯೇ" ಎಂದು ಪ್ರಶ್ನಿಸಿದರು.