ನವದೆಹಲಿ: ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಕೆಲವು ಟ್ವೀಟ್ಗಳು "ಅವಮಾನಕರ, ಪ್ರಚೋದನಕಾರಿ ಮತ್ತು ಕೋಮುವಾದಿ" ಎಂದು ಬುಧವಾರ ಹೇಳಿರುವ ದೆಹಲಿ ಹೈಕೋರ್ಟ್, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ, ದೆಹಲಿ ಪೊಲೀಸರಿಗೆ ಮತ್ತು ಸಾಮಾಜಿಕ ಮಾಧ್ಯಮ ಎಕ್ಸ್ ಗೆ ಸೂಚಿಸಿದೆ.
ಸಾಮಾಜಿಕ ಮಾಧ್ಯಮದಿಂದ ರಾಣಾ ಅಯ್ಯೂಬ್ ಅವರ ಆಕ್ಷೇಪಾರ್ಹ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಹಿಂದೂ ದೇವತೆಗಳು ಮತ್ತು ಸಾವರ್ಕರ್ ವಿರುದ್ಧದ ಪೋಸ್ಟ್ ಗಳು ಅವಹೇಳನಕಾರಿ ಮತ್ತು ಕೋಮು ಭಾವನೆ ಕೆರಳಿಸುವಂತಿವೆ ಎಂದು ಹೇಳಿದೆ.
ರಾಣಾ ಅಯ್ಯೂಬ್ ಅವರ ಟ್ವೀಟ್ಗಳು ಹಿಂದೂ ದೇವತೆಗಳು ಮತ್ತು "ಐತಿಹಾಸಿಕ ವ್ಯಕ್ತಿಗಳನ್ನು" ಅವಮಾನಿಸಿವೆ ಎಂದು ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್, ಟ್ವೀಟ್ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಸಹ ನಿರ್ದೇಶಿಸಲಾಗಿದೆ ಎಂಬುದನ್ನು ಗಮನಿಸಿದರು ಮತ್ತು ಕೇಂದ್ರ ಸರ್ಕಾರ, ದೆಹಲಿ ಪೊಲೀಸರು ಮತ್ತು ಎಕ್ಸ್ ಗೆ "ಒಟ್ಟಿಗೆ ಕೆಲಸ ಮಾಡಿ" 24 ಗಂಟೆಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ" ಸೂಚಿಸಿದ್ದಾರೆ.
"ಈ ಸಂಬಂಧ ಕೇಂದ್ರ ಸರ್ಕಾರ, ರಾಣಾ ಅಯ್ಯೂಬ್ ಮತ್ತು ಎಕ್ಸ್ಗೆ ನೋಟಿಸ್ ನೀಡಿರುವ ನ್ಯಾಯಾಲಯವು, ಏಪ್ರಿಲ್ 10 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.