ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರವಹಿಸಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನವನ್ನು ದಲ್ಲಾಳಿ ಎಂದು ಕರೆದಿದ್ದರು. ಆದರೆ, ಈಗ ಸ್ವಯಂ ಘೋಷಿತ ವಿಶ್ವಗುರು (ಮೋದಿ) ಜಗತ್ತಿನ ಎದುರು ಬೆತ್ತಲಾಗಿದ್ದಾರೆ. ಅವರ 56 ಇಂಚಿನ ಎದೆಯು ಕುಗ್ಗಿದೆ. ಇಸ್ರೇಲ್ನ ಆಕ್ರಮಣಕಾರಿ ಧೋರಣೆ ಮತ್ತು ಡೊನಾಲ್ಡ್ ಟ್ರಂಪ್ ಬಳಸುತ್ತಿರುವ ಅವಹೇಳನಕಾರಿ ಭಾಷೆಯ ಬಗ್ಗೆ ಮೋದಿ ಅವರ ಮೌನವು ಹೇಡಿತನವನ್ನು ತೋರಿಸಿದೆ ಎಂದು ಕಿಡಿಕಾರಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸಿ, ಎರಡು ವಾರಗಳ ದ್ವಿಪಕ್ಷೀಯ ಕದನ ವಿರಾಮ ಘೋಷಿಸಿದ್ದಾರೆ. ಇರಾನ್ ಕೂಡ ಇದಕ್ಕೆ ಸಮ್ಮತಿಸಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಲು ಒಪ್ಪಿಕೊಂಡಿದೆ. ಈ ಸಂಧಾನ ಪ್ರಕ್ರಿಯೆಯಲ್ಲಿ ಉಭಯ ದೇಶಗಳ ನಡುವಿನ ಮಾತುಕತೆಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಫೆಬ್ರವರಿ 28ರಿಂದ ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್ ನಡೆಸಿದ ದಾಳಿಗಳು ಮತ್ತು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಮೌನವಹಿಸಿದ್ದ ಸ್ವಯಂ ಘೋಷಿತ ವಿಶ್ವಗುರು (ಮೋದಿ) ಈಗ ಬೆತ್ತಲಾಗಿದ್ದಾರೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಅಮೆರಿಕ-ಇಸ್ರೇಲ್ ಒಂದು ಕಡೆ ಮತ್ತು ಇರಾನ್ ಇನ್ನೊಂದು ಕಡೆ ಇರುವ ಈ ಸಂಘರ್ಷದಲ್ಲಿ ಎರಡು ವಾರಗಳ ಕದನ ವಿರಾಮವನ್ನು ಇಡೀ ಜಗತ್ತು ಪ್ರಜ್ಞಾಪೂರ್ವಕವಾಗಿ ಸ್ವಾಗತಿಸುತ್ತದೆ. ಇರಾನ್ ಸರ್ಕಾರದ ಉನ್ನತ ನಾಯಕರ ಹತ್ಯೆಯೊಂದಿಗೆ ಈ ಯುದ್ಧ ಆರಂಭವಾಗಿತ್ತು. ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆದ ಕೇವಲ ಎರಡೇ ದಿನದಲ್ಲಿ ಯುದ್ಧ ಆರಂಭವಾಗಿತ್ತು. ಮೋದಿ ಅವರ ಇಸ್ರೇಲ್ ಭೇಟಿಯು ಭಾರತದ ಜಾಗತಿಕ ಸ್ಥಾನಮಾನವನ್ನು ಕುಗ್ಗಿಸಿದೆ ಎಂದು ಕಿಡಿಕಾರಿದ್ದಾರೆ.