ಅಮರಾವತಿ: ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಕ್ಯಾಮೆರಾ ಮುಂದೆಯೇ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಹುಕುಂಪೇಟ ಮಂಡಲದ ಬುರ್ಜಾ ಪಂಚಾಯತ್ ಬಳಿಯ ಮುಲ್ಲುಂಗುಮ್ಮಿ ಜಲಪಾತದಲ್ಲಿ ಗುರುವಾರ ವಿಡಿಯೋ ಮಾಡಲು ಹೋದ ಮೂವರು ಹದಿಹರೆಯದ ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ನೀರಿನ ದಡದಲ್ಲೇ ಇದ್ದ ಯುವತಿಯರು ನೋಡ ನೋಡುತ್ತಲೇ ಮುಂದಕ್ಕೆ ಹೋಗಿದ್ದಾರೆ. ಈ ವೇಳೆ ಆಳ ಹೆಚ್ಚಾಗಿದ್ದು ಮೊದಲು ಇಬ್ಬರು ಯುವತಿಯರು ಮುಳುಗಿದ್ದಾರೆ. ಈ ವೇಳೆ ಅವರ ಹಿಂದೆಯೇ ಇದ್ದ ಮತ್ತೋರ್ವ ಯುವತಿ ಕೂಡ ನೀರಿನಲ್ಲಿ ಮುಳುಗಿದ್ದಾಳೆ.
ಮೂಲಗಳ ಪ್ರಕಾರ ಜಾಂಬವಲಸ ಗ್ರಾಮದ ಐದು ಹುಡುಗಿಯರು ಹಬ್ಬದ ರಜಾದಿನಗಳಲ್ಲಿ ಜಲಪಾತ ವೀಕ್ಷಣೆಗೆ ಹೋಗಿದ್ದರು.
ಹುಡುಗಿಯರು ಜಲಪಾತದ ಬಳಿ ಫೋಟೋ ಮತ್ತು ಸೆಲ್ಫಿ ವಿಡಿಯೋ ತೆಗೆದುಕೊಳ್ಳುತ್ತಿದ್ದಾಗ, ಅವರಲ್ಲಿ ಮೂವರು ಹುಡುಗಿಯರು ಹೊಳೆಯ ಮಧ್ಯದಲ್ಲಿರುವ ದೊಡ್ಡ ಬಂಡೆಯ ಮೇಲೆ ಹತ್ತಿದರು. ಅವರು ಜಾರಿಬಿದ್ದು ನೀರಿಗೆ ಬಿದ್ದರು. ಈ ವೇಳೆ ನಗುತ್ತಲೇ ಯುವತಿಯರು ಮುಂದಕ್ಕೆ ಹೋದಾಗ ಆಳ ಜಾಸ್ತಿಯಾಗಿ ಮುಳುಗಿದ್ದಾರೆ.
ಇದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಇತರೆ ಯುವತಿಯರು ರಕ್ಷಣೆಗೆ ಧಾವಿಸಿದರೂ ನೀರಿನ ರಭಸ ಹೆಚ್ಚಿದ್ದರಿಂದ ಯುವತಿಯರು ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂರು ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಮೃತರನ್ನು ತ್ರಿಶಾ, 17, ರತ್ನ ಕುಮಾರಿ, 16, ಮತ್ತು ಪವಿತ್ರಾ, 16 ಎಂದು ಗುರುತಿಸಲಾಗಿದೆ. ಇತರ ಇಬ್ಬರು ಹುಡುಗಿಯರು ಸುರಕ್ಷಿತವಾಗಿ ಪಾರಾಗಿದ್ದಾರೆ. ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.