ನವದೆಹಲಿ: ಮಹಿಳಾ ಮೀಸಲು ಕಾನೂನು ತಿದ್ದುಪಡಿ ವಿರುದ್ಧ DMK ಪಕ್ಷದ ಪ್ರತಿಭಟನೆಗೆ 'ಕಾಲಾ ಟಿಕಾ' ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಕ್ಷದ ನಾಯಕಿ ಕನಿಮೋಳಿ ಶುಕ್ರವಾರ ಕಿಡಿಕಾರಿದ್ದಾರೆ. ಕಪ್ಪು ಕಾಳಿ ಮಾತೆಯ ಬಣ್ಣವಾಗಿದ್ದು, ತಮಿಳುನಾಡಿನ ಆಡಳಿತ ಪಕ್ಷ ಕೊನೆಯವರೆಗೂ ಈ ವಿಷಯದ ಬಗ್ಗೆ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾನೂನಿನ ತಿದ್ದುಪಡಿಯ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ ಡಿಎಂಕೆ ಸದಸ್ಯರನ್ನು ಟೀಕಿಸಿದರು. ಇದನ್ನು ದೃಷ್ಟಿ ತಗುಲದಂತೆ ತಡೆಯುವ 'ಕಾಲ ಟಿಕಾ' ಎಂದು ವ್ಯಂಗ್ಯವಾಡಿದರು.
ಶುಕ್ರವಾರ ನಡೆದ ಚರ್ಚೆಯಲ್ಲಿ ಕಪ್ಪು ಸೀರೆ ಧರಿಸಿ ಭಾಗವಹಿಸಿದ ಕನಿಮೋಳಿ, ಹಿಂದುತ್ವವನ್ನು ರಕ್ಷಿಸಲು ಇರುವ ಜನರಿಗೆ ಕಪ್ಪು ಬಟ್ಟೆ ಧರಿಸಿದ ಕಪ್ಪು ದೇವತೆ ಕಾಳಿಯನ್ನು ನೆನೆಯದಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದರು.
ಡಿಎಂಕೆಯ ಬೌದ್ಧಿಕ ನಾಯಕ ಪೆರಿಯಾರ್ ಅವರ ಬಣ್ಣವೂ ಕಪ್ಪು ಬಣ್ಣದ್ದಾಗಿದೆ. ಅವರು ಕೊನೆಯವರೆಗೂ ಹೋರಾಡಲು ಕಲಿಸಿದ್ದಾರೆ ಎಂದು ಅವರು ಹೇಳಿದರು. ಕನಿಮೋಳಿ ಜೊತೆಗೆ, ಇತರ ಡಿಎಂಕೆ ಸಂಸದರು ಸಹ ಸದನದಲ್ಲಿ ಕಪ್ಪು ಬಟ್ಟೆ ಧರಿಸಿದ್ದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಕೋಟಾವನ್ನು ಒದಗಿಸುವ ಮಹಿಳಾ ಮೀಸಲಾತಿ ಕಾಯ್ದೆಯನ್ನು 2029 ರಿಂದ ಜಾರಿಗೆ ತರಬೇಕೆಂದು ಡಿಎಂಕೆ ಸಂಸದೆ ಒತ್ತಾಯಿಸಿದರು. ಕ್ಷೇ್ತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಮಹಿಳಾ ಮೀಸಲಾತಿಯಿಂದ ಬೇರ್ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗುರುವಾರ, ಡಿಎಂಕೆ ಸದಸ್ಯರು ಸದನದಲ್ಲಿ ಕಪ್ಪು ಬಟ್ಟೆ ಧರಿಸಿದ್ದರೆ, ಪಕ್ಷದ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರಾಜ್ಯದಲ್ಲಿ ಕಪ್ಪು ಧ್ವಜ ಹಾರಿಸಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟು, ತಮಿಳು ಜನರನ್ನು ಅವರ ಸ್ವಂತ ನೆಲದಲ್ಲಿ "ನಿರಾಶ್ರಿತರು" ಎಂದು ಮಾಡಲು ಪ್ರಯತ್ನಿಸುವ "ಕಪ್ಪು ಕಾನೂನು" ಎಂದು ಕರೆದರು.