ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗವು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಇಂದು ANI ಜೊತೆ ಮಾತನಾಡಿದ ಚೌಧರಿ, ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿ ಇಂತಹ ಉದ್ವಿಗ್ನತೆ ಮತ್ತು ಹಿಂಸಾಚಾರದ ಘಟನೆಗಳು ಪುನರಾವರ್ತಿವಾಗುತ್ತಿವೆ. "ಬಂಗಾಳದ ಜನರು ಚುನಾವಣೆಗಳ ಸಮಯದಲ್ಲಿ, ಚುನಾವಣೆಗೂ ಮೊದಲು ಮತ್ತು ಚುನಾವಣೆ ನಂತರ ಈ ಉದ್ವಿಗ್ನತೆಯನ್ನು ನಿಯಮಿತವಾಗಿ ನೋಡುತ್ತಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ; ಹೊಸ ವಿಷಯವೆಂದರೆ ಲಕ್ಷಾಂತರ ಕೇಂದ್ರ ಪಡೆಗಳ ನಿಯೋಜನೆಯ ಹೊರತಾಗಿಯೂ ಈ ರೀತಿಯ ಹಿಂಸಾಚಾರ ಮುಂದುವರಿದರೆ, ಅದು ಚುನಾವಣಾ ಆಯೋಗದ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ನಾಯಕ, ಜೊತೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳೂ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. "ಆದ್ದರಿಂದ, ಚುನಾವಣಾ ಆಯೋಗವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಬಂಗಾಳದ ಕೆಳ ಹಂತದ ಪೊಲೀಸ್ ಅಧಿಕಾರಿಗಳು ಇನ್ನೂ ಆಡಳಿತ ಪಕ್ಷದ ಪರವಾಗಿ ಉದ್ವಿಗ್ನತೆಯನ್ನು ಹರಡಲು ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಹೊರಗಿನಿಂದ ಎಷ್ಟೇ ಉನ್ನತ ಅಧಿಕಾರಿಗಳನ್ನು ಕರೆತಂದರೂ, ಚುನಾವಣಾ ಆಯೋಗಕ್ಕೆ ಕೆಳ ಹಂತದ ಅಧಿಕಾರಿಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ ಮತ್ತು ಅದಕ್ಕಾಗಿಯೇ ಹಿಂಸಾಚಾರ ನಡೆಯುತ್ತಿದೆ" ಎಂದು ಅವರು ಹೇಳಿದರು.