ಸಿಕ್ಕಿಂ: ಈಶಾನ್ಯದ 8 ರಾಜ್ಯಗಳು ಭಾರತದ ಸಮೃದ್ಧಿಯ ಸಂಕೇತ, ಈ ರಾಜ್ಯಗಳು ಭಾರತದ 'ಅಷ್ಟಲಕ್ಷ್ಮಿ'ಯರಿದ್ದಂತೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಣ್ಣಿಸಿದ್ದು, ಈ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ಸಿಕ್ಕಿಂ ರಾಜ್ಯದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ಮೋದಿಯವರು, “ಆಕ್ಟ್ ಈಸ್ಟ್, ಆಕ್ಟ್ ಫಾಸ್ಟ್” ನೀತಿಯಡಿ ಈಶಾವ್ಯ ರಾಜ್ಯಗಳ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಮುಂದುವರಿಯುತ್ತಿವೆ ಎಂದು ಹೇಳಿದರು.
ಸಿಕ್ಕಿಂ ರಾಜ್ಯದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕಾರಣದಿಂದ ಸಂಪರ್ಕ ವ್ಯವಸ್ಥೆ (ಕನೆಕ್ಟಿವಿಟಿ) ಬಲಪಡಿಸುವುದು ಅತ್ಯಂತ ಅಗತ್ಯವಾಗಿದ್ದು, ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಬಾಗ್ಡೋಗ್ರಾದಿಂದ ಸಿಕ್ಕಿಂವರೆಗೆ ಎಕ್ಸ್ಪ್ರೆಸ್ವೇ ನಿರ್ಮಾಣ, ಗ್ಯಾಂಗ್ಟಾಕ್ನಲ್ಲಿ ರಿಂಗ್ ರಸ್ತೆಯನ್ನು ನಿರ್ಮಿಸುವುದು ಸೇರಿದಂತೆ ಸಿಕ್ಕಿಂನ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಅಲ್ಲದೆ, ರೋಪ್ವೇ ಮತ್ತು ಸ್ಕೈವೇ ಯೋಜನೆಗಳನ್ನೂ ಮುಂದಿನ ಹಂತದಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ನಾಥುಲಾ ಪ್ರದೇಶದಲ್ಲಿ ಎಕ್ಸ್ಪ್ರೆಸ್ವೇ ನಿರ್ಮಾಣದ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಎಲ್ಲಾ ಯೋಜನೆಗಳು ಸಿಕ್ಕಿಂ ರಾಜ್ಯವನ್ನು ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ಮಾಡಲು ಸಹಕಾರಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಸಿಕ್ಕಿಂನ ಪ್ರಕೃತಿ ಸೌಂದರ್ಯ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿಯವರು, “ಇಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಜೀವಂತವಾಗಿದೆ” ಎಂದು ಹೇಳಿದರು. ಇಲ್ಲಿನ ಜನರು ಪರಿಸರ ಸಂರಕ್ಷಣೆಯಲ್ಲಿ ತೋರಿಸುತ್ತಿರುವ ಜಾಗೃತಿಯನ್ನು ಶ್ಲಾಘಿಸಿದರು.
ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ಭವಿಷ್ಯದ ಅಭಿವೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಯ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಜೈವಿಕ ಕೃಷಿ, ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಆರೋಗ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಿಕ್ಕಿಂನಲ್ಲಿ ಸುಮಾರು 1,000 ಹೋಂಸ್ಟೇಗಳು ನಿರ್ಮಾಣವಾಗುತ್ತಿದ್ದು, ಇದು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಹಸ ಕ್ರೀಡೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದರು.
'ಏಕ್ ಭಾರತ್, ಶ್ರೇಷ್ಠ ಭಾರತ್'ಕುರಿತು ಮಾತನಾಡಿ, ಸಿಕ್ಕಿಂ “ಏಕ್ ಭಾರತ್, ಶ್ರೇಷ್ಠ ಭಾರತ್”ಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.
ಧರ್ಮ ಅಥವಾ ರಾಜಕೀಯ ಆಧಾರದ ಮೇಲೆ ದೇಶವನ್ನು ವಿಭಜಿಸಲು ನಡೆಯುವ ಪ್ರಯತ್ನಗಳ ವಿರುದ್ಧ ಇದು ಒಗ್ಗಟ್ಟಿನ ಸಂದೇಶ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾ ಕ್ಷೇತ್ರದಲ್ಲಿಯೂ ಸರ್ಕಾರ ವಿಶೇಷ ಗಮನ ಹರಿಸುತ್ತಿದ್ದು, ವಿಶೇಷವಾಗಿ ಫುಟ್ಬಾಲ್ ಮತ್ತು ಆರ್ಚರಿ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಯುವ ಕ್ರೀಡಾಪಟುಗಳೊಂದಿಗೆ ಫುಟ್ಬಾಲ್ ಆಡಿದ ಅನುಭವವನ್ನೂ ಪ್ರಧಾನಮಂತ್ರಿಗಳು ಹಂಚಿಕೊಂಡರು.
ಇದೇ ವೇಳೆ ಹಿಂದಿನ ಸರ್ಕಾರಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ ಎಂದು ಟೀಕಿಸಿದ ಅವರು, ಈಗಿನ ಸರ್ಕಾರ ಆರೋಗ್ಯ ಸೇವೆ ಮತ್ತು ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಜನರಿಗೆ ಉತ್ತಮ ಹಾಗೂ ಕಡಿಮೆ ವೆಚ್ಚದ ಸೇವೆ ಒದಗಿಸಲು ಬದ್ಧವಾಗಿದೆ ಎಂದು ಹೇಳಿದರು.