ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಷಾ ವಿರುದ್ಧ "ಅವಹೇಳನಕಾರಿ" ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ಸೇರಿದಂತೆ ಒಂಬತ್ತು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಂಜಾವೂರು ಪೂರ್ವ ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ ತಂಜಾವೂರಿಗೆ ಕರೆದೊಯ್ಯುತ್ತಿದ್ದಾರೆ.
ಬಂಧನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ತಾವು ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಈ ವಿವಾದ ಸೃಷ್ಟಿಸಲಾಗಿದೆ. ಇದು ದಾರಿತಪ್ಪಿಸುವ ವಿಷಯವನ್ನು ಪ್ರಸಾರ ಮಾಡಿದ್ದರಿಂದ ವಿವಾದ ಉಂಟಾಗಿದೆ ಎಂದು ಹೇಳಿದ್ದಾರೆ.
"ನಾನು ಯಾವತ್ತೂ ಹೇಳದ ವಿಷಯವನ್ನು ಹೇಳಿದ್ದೇನೆ ಎಂದು ಹೇಳಲು ಅವರು 'ಕಟ್, ಕಾಪಿ, ಪೇಸ್ಟ್' ಬಳಸಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ. ಇದೆಲ್ಲದರಿಂದ ನಾನು ಹೆದರುವ ವ್ಯಕ್ತಿಯಲ್ಲ. ನಾನು ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇನೆ" ಎಂದು ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ತಂಜಾವೂರು ಪೊಲೀಸರು ಚೆನ್ನೈನ ನೀಲಂಗರೈನಲ್ಲಿರುವ ಅವರ ನಿವಾಸದಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ವರದಿಗಾರರಿಗೆ "ನ್ಯಾಯಾಲಯ ನಿರ್ಧರಿಸುತ್ತದೆ" ಎಂದು ಹೇಳಿದರು.
"ನಾನು ಮುಖ್ಯಮಂತ್ರಿಯ ಹೆಸರನ್ನು ಹೊರತುಪಡಿಸಿ ಬೇರೆಯವರ ಹೆಸರನ್ನು ಉಲ್ಲೇಖಿಸಿದ್ದೇನೆಯೇ? ಹಾಗಾದರೆ ಇದು ಏಕೆ ನಡೆಯುತ್ತಿದೆ? ಎಂದು ಪ್ರಶ್ನಿಸಿದರು. ಈ ಬಗ್ಗೆ ನ್ಯಾಯಾಲಯ ನಿರ್ಧರಿಸುತ್ತದೆ" ಎಂದು ಪೊಲೀಸರು ಕರೆದೊಯ್ಯುವ ಮೊದಲು ಸುದ್ದಿಗಾರರಿಗೆ ತಿಳಿಸಿದರು.